Get Updates
Get notified of breaking news, exclusive insights, and must-see stories!

ಚಿಕ್ಕಮಗಳೂರು: ಸರ್ಕಾರಿ ಶಾಲೆಗೆ 2 ಕೋಟಿ ದಾನ ನೀಡಿ, ಮಗನನ್ನು ಸೇರಿಸಿದ ಕಾಫಿ ಉದ್ಯಮಿ

ಚಿಕ್ಕಮಗಳೂರು, ಫೆಬ್ರವರಿ 25: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ನಗರ ಪ್ರದೇಶ ಮಾತ್ರವಲ್ಲ ಪಟ್ಟಣಗಳಲ್ಲೂ ಈಗ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಹೆಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲ ಸೌಕರ್ಯಗಳು ಸಹ ಇಲ್ಲ. ಇಂತಹ ಹೊತ್ತಿನಲ್ಲಿ ಕಾಫಿ ಎಸ್ಟೇಟ್ ಮಾಲೀಕರೊಬ್ಬರು ಸರ್ಕಾರಿ ಶಾಲೆಗೆ ಮಗನನ್ನು ದಾಖಲು ಮಾಡಿದ್ದಾರೆ. ಶಾಲೆಯ ಅಭಿವೃದ್ಧಿಗಾಗಿ 2.18 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲೀಕರಾದ ಬಿ. ಎಸ್. ಸಂತೋಷ್ ಸರ್ಕಾರಿ ಶಾಲೆಗೆ 2.18 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಶಾಲೆಗೆ ತಮ್ಮ ಪುತ್ರನನ್ನು ಸೇರಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಈ ಓದಿರುವ ಸಂತೋಷ್ ಈಗ ದೊಡ್ಡ ಕಾಫಿ ಉದ್ಯಮಿಯಾಗಿದ್ದು, ಕಾಫಿ ಕ್ಯೂರಿಂಗ್ ಘಟಕವನ್ನು ಹೊಂದಿದ್ದಾರೆ.

Coffee Estate Owner Donated 2 Crore For Government School

ಮುತ್ತಿಗೆಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂತೋಷ್ ದೇಣಿಗೆಯನ್ನು ನೀಡಿದ್ದಾರೆ. 1973ರಲ್ಲಿ ಈ ಶಾಲೆ ಪ್ರಾರಂಭವಾಗಿದೆ. ಸದ್ಯ ಶಾಲೆಯಲ್ಲಿ 363 ವಿದ್ಯಾರ್ಥಿಗಳಿದ್ದಾರೆ. ಸಂತೋಷ್ ನೀಡಿರುವ ದೇಣಿಗೆಯಿಂದ ಶಾಲೆಯಲ್ಲಿ 8 ಸುಸಜ್ಜಿತ ಕೊಠಡಿಗಳು, ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ.

ಕೊಠಡಿಗಳ ಉದ್ಘಾಟನೆ: ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಣಿಗೆಯ ನೆರವಿನಲ್ಲಿ 'ವಿವೇಕ' ಯೋಜನೆ ಅನ್ವಯ 56 ಲಕ್ಷ ರೂ. ವೆಚ್ಚದಲ್ಲಿ 4 ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಫೆಬ್ರವರಿ 28ರಂದು ಒಟ್ಟು 12 ಕೊಠಡಿಗಳನ್ನು ಉದ್ಘಾಟಿಸಲಾಗುತ್ತದೆ.

ಮುತ್ತಿಗೆಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜ್ಯದಲ್ಲಿಯೇ ಮಾದರಿ ಶಾಲೆಯಾಗುವತ್ತ ಹೆಜ್ಜೆ ಹಾಕಿದೆ. ಹಲವಾರು ದಾನಿಗಳು, ಸಂಘ ಸಂಸ್ಥೆಗಳು ಶಾಲೆಗೆ ದೇಣಿಗೆಯನ್ನು ನೀಡುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಗ್ರಾಮದ ಸಿದ್ದಿಕ್ ಶಾಲೆಗೆ 60,000 ರೂ. ವೆಚ್ಚದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕವನ್ನು ನೀಡಿದ್ದಾರೆ.

ಶಾರ್ಲಿನ್ ವಿಲಿಯಮ್ಸ್‌ ಎಂಬ ಕಂಪನಿಯು 18 ಲಕ್ಷ ರೂ. ಮೌಲ್ಯದ ಪಿಠೋಪಕರಣಗಳನ್ನು ನೀಡಿದೆ. ಯೂತ್ ಫಾರ್ ಸೇವಾ ಸಂಸ್ಥೆಯು 8 ಕಂಪ್ಯೂಟರ್‌ಗಳನ್ನು ಮತ್ತು ಅವುಗಳನ್ನು ಬಳಕೆ ಮಾಡಲು ಬೇಕಾದ ಟೇಬಲ್‌ಗಳನ್ನು ನೀಡಿದೆ.

ದಾನಿಗಳು ಶಾಲೆಗೆ 20 ಸಿಟಿಟಿವಿ ಕ್ಯಾಮರಾಗಳನ್ನು ನೀಡಲು ಮುಂದೆ ಬಂದಿದ್ದಾರೆ. ಮಧ್ಯಾಹ್ನದ ಬಿಸಿಯೂಟ ತಯಾರು ಮಾಡಲು 5 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಅಡುಗೆ ಮನೆಯನ್ನು ನಿರ್ಮಾಣ ಮಾಡಲು ಸಹ ದಾನಿಗಳು ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ಸಿ. ಟಿ. ರವಿ ಅಭಿನಂದನೆ: ಬಿ. ಎಸ್. ಸಂತೋಷ್ ಕಾರ್ಯಕ್ಕೆ ಬಿಜೆಪಿ ನಾಯಕ, ಎಂಎಲ್‌ಸಿ ಸಿ. ಟಿ. ರವಿ ಅಭಿನಂದನೆ ಸಲ್ಲಿಸಿದ್ದಾರೆ. 'ತಾನು ಕಲಿತ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಿ ಮಾದರಿಯಾದ ಉದ್ಯಮಿ ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲೀಕರಾದ ಶ್ರೀ ಬಿ. ಎಸ್. ಸಂತೋಷ್. ಮೂಡಿಗೆರೆ ಸಮೀಪದಲ್ಲಿರುವ ಮುತ್ತಿಗೆರೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಯನ್ನು ಸುಮಾರು 2 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ 8 ಕೊಠಡಿ ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

'ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮಾತ್ರವಲ್ಲದೆ ತನ್ನ ಮಗನನ್ನು ಕೂಡ ಇದೆ ಸರಕಾರಿ ಶಾಲೆಗೆ ಸೇರಿಸಿ ಓದಿಸುತ್ತಿದ್ದಾರೆ. ಶಾಲೆಯಲ್ಲಿ 363 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸರಕಾರಿ ಶಾಲೆಯನ್ನು ಖಾಸಗಿ ಶಾಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಂತೋಷ್ ಅವರ ಈ ಮಾದರಿ ಕಾರ್ಯ ಅನುಕರಣಾಯೋಗ್ಯ ಹಾಗು ಅಭಿನಂದನಾರ್ಹ' ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+