ದತ್ತ ಜಯಂತಿ: ತುಳಸಿ ಕಟ್ಟೆ ಜಾಗದಲ್ಲಿ ಹೋಮ ಮಾಡಲು ಭಜರಂಗ ದಳ ಪಟ್ಟು
ಚಿಕ್ಕಮಗಳೂರು, ಅಕ್ಟೋಬರ್ 31: ಜಿಲ್ಲೆಯ ದತ್ತಪೀಠ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಹಿಂದೂ ಸಂಘಟನೆಗಳು ಈ ಬಾರಿಯ ದತ್ತಜಯಂತಿಯಲ್ಲಿ ನಾವು ಹೋಮ ಮಂಟಪದಲ್ಲಿ ಹೋಮ ಮಾಡಲ್ಲ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಹೇಗೆ ತುಳಸಿಕಟ್ಟೆ ಇದ್ದ ಜಾಗದಲ್ಲಿ ಹೋಮ ನಡೆಯುತ್ತಿತ್ತೋ ಅದೇ ಜಾಗದಲ್ಲಿ ಈ ವರ್ಷ ಹೋಮ ಮಾಡುತ್ತೇವೆ. ಹೋಮ ಮಂಟಪ ಅಪವಿತ್ರವಾಗಿದೆ, ಆ ಜಾಗದಲ್ಲಿ ಹೋಮ ಮಾಡಲ್ಲ ಎಂದು ಜಿಲ್ಲಾಡಳಿತಕ್ಕೆ ತಿಂಗಳ ಮುಂಚೆಯೇ ಭಜರಂಗದಳ ಕಾರ್ಯಕರ್ತರು ಸಂದೇಶ ರವಾನಿಸಿದ್ದಾರೆ.
ನವೆಂಬರ್ 28ರಿಂದ ಆರಂಭವಾಗುತ್ತಿರುವ ದತ್ತಜಯಂತಿ, ಎಂಟು ದಿನಗಳ ಕಾಲ ನಡೆಯಲಿದ್ದು ಡಿಸೆಂಬರ್ 8ರಂದು ಹೋಮ ಮಂಟಪದಲ್ಲಿ ಹೋಮ ಮಾಡುವುದಿಲ್ಲ. ಬದಲಿಗೆ ತುಳಸಿಕಟ್ಟೆಯ ಬಳಿ ಮಾಡುತ್ತೇವೆ ಎಂದು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದು, ಇಲ್ಲವಾದರೆ ನಮಗೆ ಹೋಮ ಮಾಡಲು ಬೇರೆ ಜಾಗ ಕೊಡಿ ಎಂದು ತಿಂಗಳ ಮುಂಚೆಯೇ ಭಜರಂಗದಳ ಕಾರ್ಯಕರ್ತರು ಪತ್ರ ಬರೆದಿದ್ದಾರೆ.

ಹೋಮದ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವುದು ಬಜರಂಗದಳದ ಉದ್ದೇಶ. ಅದಕ್ಕೆ ಜಿಲ್ಲಾಡಳಿತ ಕೂಡ ಬೆಂಬಲಿಸಲಿ ಎಂದು ಮನವಿ ಮಾಡಿದ್ದಾರೆ. ದತ್ತಪೀಠದ ಆವರಣದ 200 ಮೀಟರ್ ವ್ಯಾಪ್ತಿಯಲ್ಲಿ ಏನನ್ನೂ ಮಾಡಬಾರದು ಎಂದು ಜಿಲ್ಲಾಡಳಿತ ಹೇಳುತ್ತದೆ. ಆದರೆ, ಜಿಲ್ಲಾಡಳಿತವೇ ಕಟ್ಟಿದ ಹೋಮ ಮಂಟಪದಲ್ಲಿ ಹೇಗೆ ಮಾಂಸ ಮಾಡಿದರು. ನಮಾಜ್ ಹೇಗೆ ಮಾಡಿದರು. ಮೈಕ್ ಕಟ್ಟಿಕೊಂಡು ಬಾಂಗ್ ಹೇಗೆ ಕೂಗಿದರು. ಇದೆಲ್ಲಾ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಅಲ್ಲವೇ ಎಂದು ಬಜರಂಗದಳ ಜಿಲ್ಲಾಡಳಿತಕ್ಕೆ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಲು ಜಿಲ್ಲಾಡಳಿತವೇ ಪ್ರೋತ್ಸಾಹ ನೀಡಿರುವಾಗ, ನಾವು ನಮ್ಮ ಧಾರ್ಮಿಕ ಭಾವನೆ ನಡೆಸಲು ಯಾರ ಅಪ್ಪಣೆ ಕೇಳಬೇಕು ಎಂದು ಜಿಲ್ಲಾಡಳಿತದ ವಿರುದ್ಧ ಭಜರಂಗದಳ ಮುಖಂಡರು ಕಿಡಿಕಾರಿದ್ದಾರೆ. ನಮ್ಮ ಆಚಾರ-ವಿಚಾರ ಹಾಗೂ ಪದ್ಧತಿಗಳನ್ನು ನಾವು ಮಾಡೇ ಮಾಡುತ್ತೇವೆ ಎಂದು ಭಜರಂಗದಳ ಜಿಲ್ಲಾಡಳಿತಕ್ಕೆ ತಿಳಿಸಿದೆ.
ಭಜರಂಗದಳ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಮು ಸೌಂದರ್ಯ ವೇದಿಕೆ ಮುಖಂಡ ಗೌಸ್ ಮೊಯಿವುದ್ದೀನ್, "ತುಳಸಿಕಟ್ಟೆ ಜಾಗದಲ್ಲಿ ಹೋಮ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ, ಕಾನೂನಿನಲ್ಲಿ ಅವಕಾಶ ವಿಲ್ಲದ ಆಚರಣೆಗೆ ಸಂಘ ಪರಿವಾರ ಮುಂದಾಗುತ್ತಿದೆ, ಜಿಲ್ಲಾಡಳಿತ ಕಟ್ಟು ನಿಟ್ಟಿನ ಕಾನೂನು ಪಾಲನೆ ಮಾಡಬೇಕು, ಯಾವುದೇ ಹೊಸ ಆಚರಣೆ ಅವಕಾಶ ನೀಡಬಾರದು" ಎಂದಿದ್ದಾರೆ.
ಮೂರ್ನಾಲ್ಕು ದಶಕಗಳಿಂದ ಹಿಂದೂ ಹಾಗೂ ಮುಸ್ಲಿಮರು ಈ ಜಾಗದ ವಿಚಾರವಾಗಿ ಹೋರಾಡುತ್ತಿದ್ದಾರೆ. ಪ್ರಕರಣ ಇಂದಿಗೂ ಕೋರ್ಟ್ ಕಟಕಟ್ಟೆಯಲ್ಲಿದೆ. ಈ ಮಧ್ಯೆ ಹಿಜಾಬ್ ವಿವಾದ, ಹಲಾಲ್-ಝಟ್ಕಾ ಕಟ್ ಗಲಾಟೆ, ಪಿ.ಎಫ್.ಐ ಬ್ಯಾನ್ ಸೇರಿದಂತೆ ವಿವಿಧ ವಿವಾದಗಳು ತಲೆದೂರಿವೆ. ಸೂಕ್ಷ್ಮ ಪ್ರದೇಶವಾಗಿರುವ ಚಿಕ್ಕಮಗಳೂರಿನಲ್ಲಿ ದತ್ತಪೀಠದಲ್ಲಿ ವಿಚಾರದಲ್ಲಿ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications