ಚಿಕ್ಕಮಗಳೂರು: ಅವನತಿಯತ್ತ ಗುಂಡಿಹೊಂಬಳ ಸರ್ಕಾರಿ ಶಾಲೆ, ಶಿಕ್ಷಕನ ವರ್ಗಾವಣೆಗೆ ಪೋಷಕರ ಪಟ್ಟು
ಚಿಕ್ಕಮಗಳೂರು, ಜೂನ್ 09: ಶೈಕ್ಷಣಿಕ ವರ್ಷದ ಶಾಲೆ ಆರಂಭವಾಗಿ 9 ದಿನವಾದರೂ ಕಾಫಿನಾಡಿನ ಗುಂಡಿಹೊಂಬಳ ಶಾಲೆಗೆ ಮಾತ್ರ ಮಕ್ಕಳನ್ನು ಕಳುಹಿಸುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಹೊಂಬಳ ಸರ್ಕಾರಿ ಶಾಲೆಯ ಶಿಕ್ಷಕರ ಕೊರತೆ ಹಾಗೂ ಇರುವ ಓರ್ವ ಶಿಕ್ಷಕನ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.
ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲಾ ವಿಷಯಕ್ಕೂ ಒಬ್ಬರೇ ಶಿಕ್ಷಕ. ಇನ್ನು ಈ ಶಾಲೆಯಲ್ಲಿ ಇರುವುದು ಒಂದೇ ಒಂದು ಕೊಠಡಿ. ಒಂದರಿಂದ ಐದನೇ ತರಗತಿಯ 9 ಜನ ಮಕ್ಕಳು ಇದೊಂದೇ ಕೊಠಡಿಯಲ್ಲಿ ಪಾಠ ಕೇಳಬೇಕು. ಇರೋದು ಒಬ್ಬನೇ ಶಿಕ್ಷಕ. ಆತ ಯಾರಿಗೆ ಯಾವ ಸಮಯದಲ್ಲಿ ಹೇಗೆ ಪಾಠ ಮಾಡಬಹುದು ನೀವೇ ಊಹಿಸಿ. ಯಾವ ತರಗತಿಯ ಯಾವ ಪಾಠವನ್ನು ಯಾವ ಮಕ್ಕಳು ಕೇಳುತ್ತಾರೆ ಎಂದು ಪಾಠ ಮಾಡುವ ಶಿಕ್ಷಕರಿಗೂ ಗೊತ್ತಿಲ್ಲ. ಕೇಳುವ ಮಕ್ಕಳಿಗೆ ಮೊದಲೇ ಗೊತ್ತಿಲ್ಲ.

ಶಾಲೆಗೆ ಸೂಕ್ತ ಕೊಠಡಿ ಹಾಗೂ ಶಿಕ್ಷಕರಿಗಾಗಿ ಸ್ಥಳೀಯರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ನೋಡ್ತೀವಿ, ಮಾಡ್ತೀವಿ, ಕಳಿಸ್ತೀವಿ ಅನ್ನೋ ಮೇಲಾಧಿಕಾರಿಗಳಿಂದ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕಾರಣದಿಂದಲೂ 30 ಮಕ್ಕಳಿದ್ದ ಕಾಡಂಚಿನ ಕುಗ್ರಾಮದ ಶಾಲೆಯಲ್ಲಿ ಇಂದು ಇರುವುದು ಕೇವಲ ಒಂಬತ್ತು ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ.
ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಾಗಿದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದಾರೆ ವಿನಃ ಶಾಲೆಗೆ ಬರುತ್ತಿಲ್ಲ. ಕಾರಣ ಇಲ್ಲಿನ ಶಿಕ್ಷಕ. ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು. ಅವರು ಬೆಳಗ್ಗೆ 11.30ಕ್ಕೆ ಬಂದರೆ 2.30ಕ್ಕೆ ಮನೆ ಸೇರುತ್ತಾರೆ. ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿ ಇಂದು ಒಂಬತ್ತಕ್ಕೆ ಬಂದು ನಿಂತಿದೆ.
ಹಾಗಾಗಿ, ಇಲ್ಲಿನ ಪೋಷಕರು ಶಿಕ್ಷಕ ಚಂದ್ರೇಗೌಡ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡು ಬೇರೆ ಶಿಕ್ಷಕರು ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಇಲ್ಲಿನ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡಿದರೆ ಶಾಲೆಗೆ ಮಕ್ಕಳ ಸಂಖ್ಯೆಯೂ ಹೆಚ್ಚುತ್ತದೆ ಶಾಲೆಯು ಉಳಿಯುತ್ತೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಒಟ್ಟಾರೆ, ಕೂಲಿ ಕಾರ್ಮಿಕರ ಮಕ್ಕಳೇ ಓದುವ ಕುಗ್ರಾಮದ ಸರ್ಕಾರಿ ಶಾಲೆಯೊಂದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಬೀಗ ಬೀಳುವ ಸ್ಥಿತಿ ತಲುಪಿದೆ. ಇದಕ್ಕೆ ಕಾರಣ ಸರ್ಕಾರವೋ ಅಥವಾ ಶಿಕ್ಷಕರ ವರ್ತನೆಯೋ ಗೊತ್ತಿಲ್ಲ. ಆದರೆ, ಬಡ ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಸರ್ಕಾರ ರಾಜ್ಯದ ಉದ್ದಗಲಕ್ಕೂ ಫ್ರೀ..ಫ್ರೀ..ಫ್ರೀ.. ಎಂದು ಉಚಿತಗಳ ಮಹಾಪೂರವನ್ನೇ ಹರಿಸಿದೆ. ಆದರೆ, ಸರ್ಕಾರದ ಆ ಉಚಿತಗಳಿಗೆ ಬೆಲೆ ಬರಬೇಕು ಎಂದರೆ ಸರ್ಕಾರಿ ಶಾಲೆಗಳಿಗೆ ಜೀವ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಉಚಿತಗಳನ್ನು ಹಂಚುವಲ್ಲಿ ಮುಳುಗೋಗಿರುವ ರಾಜ್ಯ ಸರ್ಕಾರ ಇಂತಹ ಶಾಲೆಗಳತ್ತ ಗಮನ ಹರಿಸಬೇಕಾಗಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಹೊಂಬಳ ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕಿದೆ.












Click it and Unblock the Notifications