ಕಾವೇರಿ ನಮ್ದು, ಕರ್ನಾಟಕಕ್ಕೆ ನ್ಯಾಯ ಒದಗಿಸಿ ಎಂದು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್ ನೆನಪಿರಲಿ
ಚಿಕ್ಕಮಗಳೂರು, ಅಕ್ಟೋಬರ್, 02: ಚಿತ್ರನಟ ಪ್ರೇಮ್ ಅವರು ಕಾವೇರಿ ನಮ್ಮದು, ಕಾವೇರಿ ನದಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ರವಾಸದಲ್ಲಿರುವ ನಟ ನೆನಪಿರಲಿ ಪ್ರೇಮ್, ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನೀವು ಕರ್ನಾಟಕ ಹಾಗೂ ಕಾವೇರಿ ನದಿಗೆ ನ್ಯಾಯ ಒದಗಿಸಿ ಎಂದು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾವೇರಿ ನದಿ ನೀರಿನ ವಿವಾದ ಹೆಚ್ಚುತ್ತಲೇ ಇದೆ. ಇದೀಗ, ನಟ ನೆನಪಿರಲಿ ಪ್ರೇಮ್ ಇದೀಗ ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆಯುವ ಮೂಲಕ ರಾಜ್ಯಾದ್ಯಂತ ನಡೆಯುತ್ತಿರಿವ ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಕಾವೇರಿ ನದಿ ನೀರಿಗಾಗಿ ಒಂದೇ ವಾರದಲ್ಲಿ ಎರಡು ಬಂದ್ ಆಗಿವೆ. ರಾಜ್ಯದಲ್ಲಿ 1600ಕ್ಕೂ ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡಿದ್ದಾರೆ. ಮಂಡ್ಯದ ಜನ ಇಂದಿಗೂ ಹೋರಾಟ ನಿಲ್ಲಿಸಿಲ್ಲ. ನೀರಿಗಾಗಿ ಹೋರಾಡುತ್ತಲೇ ಇದ್ದಾರೆ.
ಅಲ್ಲದೆ ಅಕ್ಟೋಬರ್ ಐದನೇ ತಾರೀಖಿನಂದ ಕೆ.ಆರ್.ಎಸ್. ಮುತ್ತಿಗೆಗೂ ನಿರ್ಧರಿಸಿದ್ದಾರೆ. ಕಾವೇರಿ ನದಿ ನೀರಿನ ವಿವಾದ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಆದರೆ, ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು ಈ ಮೂಲಕ ರಾಜ್ಯದ ರೈತರ ಹಿತ ಬಲಿಕೊಡುತ್ತಿದೆ. ಹಾಗಾಗಿ, ಇಂದಿಗೂ ಕಾವೇರಿ ನೀರಿಗಾಗಿ ಕನ್ನಡಿಗರ ಹೋರಾಟ ನಿಂತಿಲ್ಲ. ಈ ಮಧ್ಯೆ ನೆನಪಿರಲಿ ನಟ ಪ್ರೇಮ್ ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದು ಕಾವೇರಿ-ಕರ್ನಾಟಕಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ರಕ್ತದಲ್ಲಿ ಪತ್ರ ಬರೆದ ಕರವೇ ಜಿಲ್ಲಾ ಮುಖಂಡರು
ಕಾವೇರಿ ನೀರು ಸಂಕಷ್ಟದ ಸೂತ್ರ ಜಾರಿಯಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ರಾಜ್ಯದ ಜನತೆಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಕರವೇ ಜಿಲ್ಲಾ ಮುಖಂಡರುಗಳು ರಕ್ತದಿಂದ ಪತ್ರ ಬರೆದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಚಿಕ್ಕಮಗಳೂರು ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ರಕ್ತದಿಂದ ಪತ್ರ ಬರೆಯುವ ಮೂಲಕ ಸಾರ್ವಜನಿಕ ಪ್ರದರ್ಶನಗೊಳಿಸಿ ನೀರು ಹರಿಸುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಮುಖ್ಯ ಅಂಚೆ ಕಚೇರಿ ಪೋಸ್ಟ್ ಬಾಕ್ಸ್ಗೆ ಪತ್ರವನ್ನು ಹಾಕುವ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾ ಉಪಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ರಾಜ್ಯದಿಂದ ಸುಮಾರು ಒಂದು ಲಕ್ಷ ಮಂದಿ ಕರವೇ ಮುಖಂಡರುಗಳು ರಕ್ತದಿಂದ ಪತ್ರ ಬರೆದು ಕೇಂದ್ರಸರ್ಕಾರಕ್ಕೆ ಕಳಿಸಿಕೊಡುವ ಕಾರ್ಯಕ್ಕೆ ಇಂದು ಮುಂದಾಗಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಎದುರಾಗಿದೆ. ಇದರ ಬೆನ್ನಲ್ಲೇ ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ಕಾವೇರಿ ನೀರು ಹರಿಸುತ್ತಿರುವುದು ಸೂಕ್ತವಲ್ಲ. ಕೂಡಲೇ ಕಾವೇರಿ ಜಲನಿಗಮ ಮಂಡಳಿಗೆ ಆದೇಶ ನೀಡಿ ಪರಿಶೀಲನೆ ನಡೆಸುವ ಮೂಲಕ ಸೂಕ್ತ ನಿರ್ಧಾರ ಕೈಗೊಂಡು ರಾಜ್ಯದ ರೈತರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications