ಚಿಕ್ಕಮಗಳೂರು: ಹೊಟ್ಟೆ ಕರಗಿಸಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಎಸ್ಪಿ..!
ಚಿಕ್ಕಮಗಳೂರು, ಮೇ.9 : ಪೊಲೀಸರಿಗೆ ಅಧಿಕಾರಿಗಳು ಕಳ್ಳರ ಅಥವಾ ತಪ್ಪಿತಸ್ಥರನ್ನ ಹಿಡಿಯಲು ಟಾಸ್ಕ್ ಕೊಡುವುದನ್ನು ನೋಡಿದ್ದೇವೆ. ಆದರೆ ಚಿಕ್ಕಮಗಳೂರು ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಎಂ.ಮಚ್ಚಿಂದ್ರಾ ಅವರು ಪೊಲೀಸರು ಹೊಟ್ಟೆ ಕರಗಿಸಿದರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

28 ಪೊಲೀಸ್ ಠಾಣೆಗಳ ಪೊಲೀಸರಿಗೆ ಸೂಚನೆ
ಹೌದು, ಕಾಫಿನಾಡು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಎಂ.ಮಚ್ಚಿಂದ್ರಾ ಅವರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಇಂಥದೊಂದು ವಿಶೇಷ ಆಫರ್ ನೀಡಿದ್ದು, ಆದರೆ ಬಹುಮಾನ ಏನೆಂದು ಬಹಿರಂಗಪಡಿಸಿಲ್ಲ. ಕರ್ತವ್ಯನಿರತ ಪೊಲೀಸರು ಫಿಟ್ ಅಂಡ್ ಫೈನ್ ಆಗಿರೋದಕ್ಕೆ ಜಿಲ್ಲೆಯಲ್ಲಿರುವ 28 ಪೊಲೀಸ್ ಠಾಣೆಗಳ ಪೊಲೀಸರಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ.

ಪರೇಡ್ನಲ್ಲಿ ಹೆಚ್ಚು ತೂಕ ಹೊತ್ತು ನಿಲ್ಲುತ್ತಾರೆ
ಕೋರೋನಾ ವೇಳೆ ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ಗಮನ ನೀಡದೆ ಜನರಿಗಾಗಿ ಡ್ಯೂಟಿ ಮಾಡಿದ್ದರು. ವಾರದ ಪರೇಡ್ ನಲ್ಲಿ ಹೆಚ್ಚು ತೂಕ ಹೊತ್ತುಕೊಂಡು ನಿಲ್ಲುತ್ತಿದ್ದಾರೆ. ಕೆಲಸದ ನಿಮಿತ್ತ ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡಲು ಸಾಧ್ಯವಾಗಲ್ಲ. ಅದರಿಂದ ಗ್ಯಾಸ್ಟ್ರಿಕ್ ಹೆಚ್ಚುವುದರ ಜೊತೆ ವಿವಿಧ ರೀತಿಯ ಖಾಯಿಲೆಗಳು ಕೂಡ ಬರುವ ಸಾಧ್ಯತೆ ಇದೆ. ರೆಗ್ಯುಲರ್ ಮೆಡಿಕಲ್ ಚೆಕಪ್ ನಲ್ಲೂ ಕೂಡ ಇದನ್ನ ಗಮನಿಸಿದ್ದೇವೆ. ತೂಕ ಹೆಚ್ಚುವುದರಿಂದ ಕಾಲು ನೋವು, ಊದುವುದನ್ನೂ ನಾವು ಗಮನಿಸಿದ್ದೇವೆ. ಹಾಗಾಗಿ, ಹೆಚ್ಚಿನ ತೂಕ ಇರುವವರು ಒಂದೆರಡು ತಿಂಗಳಲ್ಲಿ ಸೇವೆ ಜೊತೆ ಆರೋಗ್ಯದ ಕಡೆ ಗಮನ ಹರಿಸಿ. ಅವರ ದೇಹಕ್ಕೆ ತಕ್ಕಂತೆ ತೂಕವನ್ನ ಇಳಿಸಿಕೊಂಡರೆ ಅಂತವರನ್ನ ಗುರುತಿಸಿ ಅವರಿಗೆ ಬಹುಮಾನ ಕೂಡ ನೀಡಲಾಗುವುದು ಎಂದು ಚಿಕ್ಕಮಗಳುರು ಎಸ್ಪಿ ಅಕ್ಷಯ್ ಎಂ.ಮಚ್ಚಿಂದ್ರಾ ತಿಳಿಸಿದ್ದಾರು

ಕೇಳಿದ್ದ ಕಡೆ ಟ್ರಾನ್ಸ್ಫರ್ ಎಂದಿದ್ದ ಅಣ್ಣಾಮಲೈ
ಕಾಫಿನಾಡಲ್ಲಿ ಸಖತ್ ಸದ್ದು ಮಾಡಿ ಸಿಗಂ ಎಂದೇ ಖ್ಯಾತಿಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಇದೇ ರೀತಿ ಆಫರ್ ನೀಡಿದ್ದರು. ದೇಹದ ತೂಕ ಇಳಿಸಿದ ಪೊಲೀಸರಿಗೆ ತಾವು ಕೇಳಿದ ಕೇಳಿದ ಕಡೆ ವರ್ಗಾವಣೆ ಆದೇಶ ಮಾಡಿದ್ದರು. ಸದ್ಯ ಈ ಬಾರಿಯೂ ರಿವಾರ್ಡ್ ಆಫರ್ ನೀಡಿರುವ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಎಂ.ಮಚ್ಚಿಂದ್ರಾ ಅವರು ಅದೇ ಮಾದರಿಯ ಆದೇಶ ನಿಡುತ್ತಾರಾ ಅಂತ ಕಾದು ನೋಡಬೇಕಿದೆ.

ಬಿಡುವು ಸಿಕ್ಕಾಗೆಲ್ಲಾ ರನ್ನಿಂಗು, ಸೈಕ್ಲಿಂಗು..!
ಎಸ್ಪಿ ಅಕ್ಷಯ್ ಎಂ.ಮಚ್ಚಿಂದ್ರಾ ಅವರು ಚಿಕ್ಕಮಗಳುರು ಪೊಲೀಸರಿಗೆ ಸಸ್ಫೆನ್ಸ್ ಆಫರ್ ನೀಡಿದ್ದೇ ತಡ ಚಿಕ್ಕಮಗಳುರು ಪೊಲೀಸರೆಲ್ಲಾ ಹೊಟ್ಟೆ ಕರಗಿಸುವಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಕೆಲಸದಲ್ಲಿ ಬಿಡುವು ಸಿಕ್ಕಾಗೆಲ್ಲಾ ವಾಕಿಂಗ್, ರನ್ನಿಂಗು, ಸೈಕ್ಲಿಂಗ್ ನಲ್ಲಿ ಮಗ್ನರಾಗಿದ್ದಾರೆ. ಇನ್ನೂ ಕೆಲ ಪೊಲೀಸರು ನಮ್ಮ ಎಸ್ಪಿ ಸಾಹೇಬರು ಏನ್ ರಿವಾರ್ಡ್ ಕೊಡ್ತಾರೋ ಏನೋ.. ಅನ್ನೋ ಕುತೂಹಲದಲ್ಲಿದ್ದಾರೆ.
ಇನ್ನೂ ಕೆಲವರು ತಮ್ಮ ತಮ್ಮ ಊರಿನ ಅಕ್ಕಪಕ್ಕದ ಕಡೆ ವರ್ಗಾವಣೆ ಕೊಟ್ರೆ ಸಾಕಪ್ಪಾ ಅಂತ ಹೊಟ್ಟೆ ಕರಗಿಸುವ ಕಡೆ ಕೆಲಸದ ಬಿಡುವಿನ ಸಮಯದಲ್ಲಿ ಸದ್ಯ ಬ್ಯುಸಿಯಾಗಿದ್ದು, ಎಸ್ಪಿ ಅಕ್ಷಯ್ ಅವರು ಅಣ್ಣಾಮಲೈ ರೀತಿಯಲ್ಲೇ ಕೇಳಿದ್ದ ಕಡೆವರ್ಗಾವಣೆ ಬಹುಮಾನ ನೀಡ್ತಾರಾ ಅಂತ ಕಾದುನೋಡಬೇಕಿದೆ.












Click it and Unblock the Notifications