ಸಿದ್ರಾಮುಲ್ಲಾಖಾನ್ ಎಂದು ಹೆಸರಿಟ್ಟವರು ಮಡಿಕೇರಿ,ಮೈಸೂರಿನ ಜನ-ಸಿ.ಟಿ ರವಿ
ಚಿಕ್ಕಮಗಳೂರು, ನವೆಂಬರ್28 : ನಾನು ಸಿದ್ದರಾಮಯ್ಯನವರಿಗೆ ಖುಷಿಯಾಗುವ ಸಂಗತಿಯನ್ನೇ ಹೇಳಿದ್ದೇನೆ. ಅವರಿಗೆ ಸಿದ್ರಾಮುಲ್ಲಾಖಾನ್ ಎಂದು ಹೆಸರಿಟ್ಟವರು ಮಡಿಕೇರಿ-ಮೈಸೂರಿನ ಜನ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ರಾಮುಲ್ಲಾಖಾನ್ ಅಸಂಸದೀಯ ಪದವೂ ಅಲ್ಲ. ಬೈಗುಳವೂ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಪ್ರಿಯವಾಗಿರುವುದು ಟಿಪ್ಪು ಟೋಪಿ. ಅದನ್ನೇ ಹೇಳಿದ್ದೇನೆ. ದೂರದ ಸಂಗತಿಯೋ ಅಥವಾ ದುಃಖದ ಸಂಗತಿಯನ್ನೋ ನಾನು ಹೇಳಿಲ್ಲ. ಟೋಪಿ ಅವರಿಗೆ ಆನಂದ ಕೊಡುವ ಸಂಗತಿ. ಅದನ್ನೇ ಹೇಳಿದ್ದೇನೆ. ಅವರಿಗೆ ಖುಷಿ ಆಗದಿರುವುದು ಯಾವುದು..? ಕೇಸರಿ ಪೇಟ ಮತ್ತು ಕುಂಕುಮ. ಅದನ್ನು ಹೇಳಿದ್ದರೆ ಬೇಸರ ಆಗುತ್ತಿತ್ತೇನೋ ಎಂದು ವ್ಯಂಗ್ಯವಾಡಿದ್ದಾರೆ.

ಸಿ.ಟಿ ರವಿ, ನಾನು ಹೇಗಿದ್ದೇನೆ ಹಾಗೆ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಖುಷಿ ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ಬಿರುದುಗಳನ್ನು ನೋಡಬೇಕು ಎಂದು ವ್ಯಂಗ್ಯವಾದರು. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ವಿಚಾರವಾಗಿ ಮಾತನಾಡಿದ ಅವರು ಸದ್ಭಾವನೆಯಿಂದ ಬಂದರೆ ಅತಿಥಿಗಳೆಂದು ಸತ್ಕಾರ ಮಾಡುತ್ತೇನೆ. ಬೇರೆ ಆಲೋಚನೆಯಿಂದ ಬಂದರೆ ಅದೇ ರೀತಿ ಪ್ರತಿಕ್ರಿಯೆ ಕೊಡುತ್ತೇವೆ ಎಂದರು.
ದತ್ತಮಾಲೆ ಧರಿಸಿದ ಶಾಸಕ ಸಿ.ಟಿ ರವಿ
ಇನ್ನು ದತ್ತ ಭಕ್ತರು ದತ್ತಮಾಲೆ ಧರಿಸುವ ಮೂಲಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ವತಿಯಿಂದ ಹಮ್ಮಿಕೊಂಡಿರುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಸೋಮವಾರದಿಂದ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಬಿಜೆಪಿ ಮುಖಂಡ ಸಿ.ಟಿ ರವಿ ದತ್ತ ಮಾಲಾಧಾರಣೆ ಮಾಡಿದ್ದಾರೆ.

ದತ್ತಮಾಲೆ ಧರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ.ರವಿ, ದತ್ತಪೀಠ ವಿಚಾರ ಸಂಬಂಧ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ಸಚಿವ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ ಶಿಫಾರಸನ್ನು ಪರಿಗಣಿಸಿ ರಾಜ್ಯ ಸರ್ಕಾರ ಆಡಳಿತ ಮಂಡಳಿಯನ್ನು ರಚಿಸಿದೆ ಎಂದರು.
ದತ್ತಪೀಠಕ್ಕೆ ನ್ಯಾಯ ಕೊಡಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಈ ವರ್ಷದ ದತ್ತ ಜಯಂತಿ ಹಿಂದೂ ಅರ್ಚಕರ ಪೂಜೆಯೊಂದಿಗೆ ಯಾವುದೇ ವಿವಾದಕ್ಕೆ ಅವಕಾಶವಿಲ್ಲದಂತೆ ನೆರವೇರಲಿದೆ. ಬಾಬಾಬುಡನ್ ದರ್ಗಾದಲ್ಲಿ ಮುಜಾವರ್ರಿಂದ ಪೂಜೆಯಾದರೇ, ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜೆ ನಡೆಯಲಿದೆ. ಹಿಂದೂ ಅರ್ಚಕರ ನೇಮಕ ಸಂಬಂಧ ಇರುವ ಅಡೆತಡೆಗಳನ್ನು ನಿವಾರಿಸುವ ಕೆಲಸವನ್ನು ಮಾಡಲಾಗಿದೆ. ಆಡಳಿತ ಮಂಡಳಿ ಅರ್ಚಕರ ನೇಮಕ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.












Click it and Unblock the Notifications