ಒಬ್ಬೊಬ್ಬರು 10 ವೋಟು ಕೊಡಿಸಿ: ತರೀಕೆರೆ ಜನರಿಗೆ ಶಾಸಕ ಸಿ.ಟಿ.ರವಿ ಮನವಿ
ಚಿಕ್ಕಮಗಳೂರು, ನವೆಂಬರ್, 15: ಕೇಸರಿ ಶಾಲು ಕಂಡರೆ ಕೆಲವರು ಉರಿದು ಬೀಳುತ್ತಾರೆ. ಕುಂಕುಮವನ್ನು ದ್ವೇಷಿಸುವವರಿಗೆ ವೋಟು ಹಾಕಬೇಡಿ, ಕೇಸರಿ ಕಂಡರೆ ಆಗದವರನ್ನು ಊರಿಗೆ ಬಿಟ್ಟುಕೊಳ್ಳಬೇಡಿ ಎಂದು ಸಿ.ಟಿ.ರವಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ತರೀಕೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ಮತ್ತೆ ತರೀಕೆರೆ, ಚಿಕ್ಕಮಗಳೂರು, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಒಬ್ಬೊಬರು 10 ವೋಟು ಹಾಕಿಸಿ ಸಾಕು. ಆಗ 25 ಸಾವಿರ ಲೀಡ್ನಲ್ಲಿ ತರೀಕೆರೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ತರೀಕೆರೆಯಲ್ಲಿ ಶಾಸಕ ಸಿ.ಟಿ.ರವಿ ಜನರಿಗೆ ಮನವಿ ಮಾಡಿದರು.
2022ರಲ್ಲಿ ಎಲ್ಲಾ ಕೆರೆ ಕೋಡಿ ಬಿದ್ದಿವೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು ನಗರದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಸರಿ ಅಲೆ ಮೇಲೆ ರಾಜಕೀಯ ಮಾಡುತ್ತೇವೆ. ಧಮ್ಮಿದ್ದರೆ ಎದುರಿಸಿ ಎಂದು ವಿರೋಧ ಪಕ್ಷದವರಿಗೆ ಸವಾಲಾಕಿದರು. ಇದೇ ವಾರ ದತ್ತಪೀಠಕ್ಕೆ ನ್ಯಾಯ ಕೊಡಲಿದ್ದೇವೆ. ಜಿಲ್ಲೆಯ ಐದು ಕ್ಷೇತ್ರಗಳು ಕೂಡ ಬಿಜೆಪಿ ಪಾಲಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. 2018ರಲ್ಲಿ ಯಾವ ಊರಿನಲ್ಲೂ ಕುಡಿಯುವುದಕ್ಕೆ ನೀರಿರಲಿಲ್ಲ. ಆದರೆ ಈಗ ನೋಡಿ 2022ರಲ್ಲಿ ಎಲ್ಲಾ ಕೆರೆ ಕೋಡಿ ಬಿದ್ದಿವೆ ಎಂದರು. ಬೆಳ್ಳಿ ಪ್ರಕಾಶ್ ಭೀಮ, ನನ್ನದು ಅರ್ಜುನನ ಪಾತ್ರವಾಗಿದೆ. ಹಿಂದೂ ಅಂದರೆ ಕೆಟ್ಟ ಶಬ್ಧ ಅಂತಾ ಒಬ್ಬ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಗಡಿಯಲ್ಲಿ ನಮ್ಮ ಸೈನಿಕರು ಜೈ ಹಿಂದ್ ಎನ್ನುತ್ತಾರೆ. ಶಿವಾಜಿ ಮಹಾರಾಜ ಹಿಂಧವಿ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರು. ಇಂತಹ ಶಬ್ಧ ಕಾಂಗ್ರೆಸ್ ಕೆಟ್ಟದ್ದು ಎಂದು ಹೇಳಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಟಿಪ್ಪು ಏನು ಮಾಡಿದ್ದಾರೆ ಹೇಳಲಿ?
ಇನ್ನು ಟಿಪ್ಪು ಸುಲ್ತಾನ್ ಏನು ಮಾಡಿದ್ದಾರೆ ಅಂತಾ ಸಿದ್ದರಾಮಯ್ಯನವರೇ ಹೇಳಬೇಕು. ಎ.ಪಿ.ಜೆ ಅಬ್ದುಲ್ ಕಲಾಂ ಪ್ರತಿಮೆ ಅನಾವರಣ ಮಾಡಿದರೆ ದೇಶವೇ ಹೆಮ್ಮೆ ಪಡುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಮಾಡಿದರೆ ರಾಜ್ಯ ಒಪ್ಪುತ್ತದೆ. ಆದರೆ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿದರೆ ರಾಜ್ಯ ಒಪ್ಪುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಕಿಡಿಕಾರಿದರು. ಧರ್ಮ ಒಡೆಯುವವರು, ಭ್ರಷ್ಟರು, ಸುಳ್ಳು ಹಂಚುವವರು, ದೇಶ ಒಡೆಯುವವರನ್ನು, ಧರ್ಮಸ್ಥಳಕ್ಕೆ ಹೇಗೆ ಬೇಕೋ ಹಾಗೆ ಹೋಗುತ್ತೇವೆ ಎನ್ನುವವರನ್ನು ಅಧಿಕಾರದ ಹತ್ತಿರ ಸುಳಿಯಲಿಕ್ಕೂ ಬಿಡಬೇಡಿ. ಬಿಜೆಪಿಯ ಎದುರು ಬಂದರೆ ರಾಜಕೀಯವಾಗಿ ಕಾಂಗ್ರೆಸ್ನವರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ
ನಂತರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ನಡೆದಿದೆ. ಆರಂಭದಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕ ಬಿಜೆಪಿ ಸರ್ಕಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಜೋಡೋ ಯಾತ್ರೆಯ ಉದ್ದೇಶ ಏನಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಉತ್ತರಿಸಲಿ. ಕಾಂಗ್ರೆಸ್ ಪಕ್ಷ ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಪಕ್ಷವನ್ನು ಜನರು ನಂಬುವುದಿಲ್ಲ. ಭಾರತದ ಭೂಭಾಗ ಪಾಕಿಸ್ತಾನ- ಚೀನಾ ಕೈಗೆ ಸೇರಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ ಎಂದು ಆರೋಪಿಸಿದರು.












Click it and Unblock the Notifications