ಪಕ್ಷ ಸದೃಢಗೊಳಿಸಲು ಬಿಜೆಪಿಯಿಂದ ಬೂತ್ ವಿಜಯ ಅಭಿಯಾನ
ಚಿಕ್ಕಮಗಳೂರು, ಜನವರಿ 2: ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದ್ದು, ಇಂದಿನಿಂದ ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ ಆರಂಭಿಸಿದೆ. ಚಿಕ್ಕಮಗಳೂರಿನಲ್ಲಿಯೂ ಈ ಅಭಿಯಾನ ಆರಂಭವಾಗಿದೆ.
ಬಿಜೆಪಿ ಪಕ್ಷವನ್ನು ಜಿಲ್ಲಾದ್ಯಂತ ಸದೃಢಗೊಳಿಸುವ ನಿಟ್ಟಿನಲ್ಲಿ ಜನವರಿ 2 ಸೋಮವಾರದಿಂದ 12ರವರೆಗೆ ಪ್ರತೀ ಬೂತ್ನಲ್ಲಿಯೂ, ಬೂತ್ ವಿಜಯ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ 9 ಮಂಡಲಗಳು, 46 ಮಹಾಶಕ್ತಿಕೇಂದ್ರಗಳು, 308 ಶಕ್ತಿಕೇಂದ್ರಗಳು ಹಾಗೂ 1,222 ಬೂತ್ಗಳಲ್ಲಿ ಈ ಅಭಿಯಾನ ನಡೆಯಲಿದೆ. ಅಭಿಯಾನದ ಸಂದರ್ಭದಲ್ಲಿ ಪ್ರತೀ ಬೂತ್ ವ್ಯಾಪ್ತಿಯ 25 ಹಿತೈಷಿ ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಹಾರಿಸಲಾಗುವುದು ಎಂದರು.
ಅಭಿಯಾನ ಮುಖ್ಯ ಉದ್ದೇಶ ಶೇ.100ರಷ್ಟು ಮತದಾನ ಆಗುವ ರೀತಿಯಲ್ಲಿ ಮತದಾರರನ್ನು ಮನವೊಲಿಸುವುದು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಎಲ್ಲಾ ಬೂತ್ಗಳಲ್ಲಿ ಹಾಗೂ ಹಳ್ಳಿಗಳಲ್ಲಿ ವೀಕ್ಷಿಸುವಂತೆ ಜನರನ್ನು ಪ್ರೇರೇಪಿಸುವುದಾಗಿದೆ. ಪ್ರತೀ ಬೂತ್ನಲ್ಲಿ ವಾಟ್ಸ್ಪ್ ಗ್ರೂಪ್ಗಳನ್ನು ಮಾಡಿ ಪಕ್ಷದ ಎಲ್ಲಾ ವಿಚಾರಗಳನ್ನು ಜನರಿಗೆ ಮುಟ್ಟಿಸಲಾಗುವುದು ಎಂದು ಹೇಳಿದರು.
ಬೂತ್ ವಿಜಯ ಅಭಿಯಾನದ ಯಶಸ್ವಿಗಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಿದ್ದು, ಸಮಿತಿಯ ಸಂಚಾಲಕರಾಗಿ ಜಿಪಂ ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ಸಹಸಂಚಾಲಕರಾಗಿ ಬಿ.ರಾಜಪ್ಪ ಹಾಗೂ ಪುಣ್ಯಪಾಲ್, ಅವಿನಾಶ್ ಹಾಗೂ ಸರೋಜ ಸುರೇಂದ್ರ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ 9ಮಂಡಲಗಳಲ್ಲೂ ಸಮಿತಿಗಳನ್ನು ರಚಿಸಲಾಗಿದೆ. ಈ ಅಭಿಯಾನದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಶಾಸಕರಾದ ಡಿ.ಎಸ್.ಸುರೇಶ್, ಎಂ.ಪಿ.ಕುಮಾರ ಸ್ವಾಮಿ, ಎಂ.ಕೆ.ಪ್ರಾಣೇಶ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಮಹಾಶಕ್ತಿಕೇಂದ್ರ ಹಾಗೂ ಶಕ್ತಿಕೇಂದ್ರಗಳೊನ್ನಳಗೊಂಡ ಸಾವಿರಾರು ಕಾರ್ಯಕರ್ತರು ಅಭಿಯಾನದಲ್ಲಿ ಸಕ್ರೀಯರಾಗಿ ಕೆಲಸ ಮಾಡಲಿದ್ದಾರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಬೆಳವಾಡಿ ರವೀಂದ್ರ, ಎಚ್.ಡಿ.ತಮ್ಮಯ್ಯ, ಕವಿತಾ ಶೇಖರ್, ಅಂಕಿತಾ, ರಾಜಪ್ಪ, ದಿನೇಶ್ ಉಪಸ್ಥಿತರಿದ್ದರು.