ಯೋಗ ಇದ್ದವರು ಮುಖ್ಯಮಂತ್ರಿ ಆಗಿದ್ದಾರೆ; ಸಿ. ಟಿ. ರವಿ
ಚಿಕ್ಕಮಗಳೂರು ಆಗಸ್ಟ್ 01; "ಸಿಎಂ ಆಗಲು ಯೋಗ ಇರಬೇಕು ಆ ಯೋಗ ಬಸವರಾಜ ಬೊಮ್ಮಾಯಿ ಅವರಿಗೆ ಕೂಡಿ ಬಂದಿದೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ನನಗೆ ಇದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದರು.
Recommended Video
ಭಾನುವಾರ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, "ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಅವರು ನನ್ನ ಸ್ನೇಹಿತರು ಅವರು ರಾಜ್ಯದ ಹಿತಕ್ಕೆ ಮಾಡುವ ಎಲ್ಲ ಒಳ್ಳೆಯ ಕೆಲಸಗಳಿಗೆ ನಮ್ಮ ಬೆಂಬಲ ಇದೆ" ಎಂದರು.
"ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಅಭಿವೃದ್ಧಿಯ ಎಲ್ಲಾ ಕೆಲಸಗಳಿಗೆ ಸದಾ ಕಾಲ ಸಹಕಾರ ನೀಡುತ್ತೇನೆ" ಎಂದು ಸಿ. ಟಿ. ರವಿ ಸ್ಪಷ್ಟಪಡಿಸಿದರು.

ಗಡ್ಡಬಿಟ್ಟ ಕಾರಣ ಬಹಿರಂಗ; 'ಗಡ್ಡಧಾರಿ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾರೆ' ಎಂದು ವಿಜಯಪುರದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಹೇಳಿದ ಬಗ್ಗೆ ಸಿ. ಟಿ. ರವಿ ಪ್ರತಿಕ್ರಿಯೆ ನೀಡಿದರು.
"ನಾನಂತೂ ಮುಖ್ಯಮಂತ್ರಿಯಾಗಬೇಕೆಂದು ಗಡ್ಡ ಬಿಟ್ಟಿಲ್ಲ. ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡವನ್ನು ಬಿಡುತ್ತಾ ಬಂದಿದ್ದೇನೆ, ಅದು ನನ್ನ ಐಡೆಂಟಿಟಿ. ಮೈಲಾರಲಿಂಗೇಶ್ವರರು ಗಡ್ಡದಾರಿ ಸಿಎಂ ಆಗುತ್ತಾರೆ ಎಂದು ಹೇಳಿದರೆ ಇನ್ನು ಮುಂದೆ ಯಾರ್ಯಾರು ಮುಖ್ಯಮಂತ್ರಿಯಾಗಬೇಕೆಂದು ಆಸೆ ಇಟ್ಟುಕೊಂಡಿದ್ದಾರೋ ಅವರೆಲ್ಲರೂ ಮುಂದೆ ಗಡ್ಡ ಬಿಡುತ್ತಾರೆ" ಎಂದು ಹಾಸ್ಯಸ್ಪದವಾಗಿ ಉತ್ತರಿಸಿದರು.
ಸಂಪುಟ ವಿಸ್ತರಣೆ; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಿ. ಟಿ. ರವಿ, "ಸಿಎಂ ಇನ್ನು ಎರಡು-ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಹಾಗೂ ಸಾಮಾಜಿಕ ನ್ಯಾಯ ಪ್ರಾದೇಶಿಕ ಸಮತೋಲನ ಎರಡನ್ನು ಕಾಪಾಡಿಕೊಂಡು ಸಚಿವ ಸಂಪುಟವನ್ನು ವಿಸ್ತರಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ" ಎಂದು ಹೇಳಿದರು.
ಸಿ. ಟಿ. ರವಿ ಹೆಸರು ಕೇಳಿ ಬಂದಿತ್ತು; ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಆರಂಭವಾದಾಗ ಸಿ. ಟಿ. ರವಿ ಹೆಸರು ಸಹ ಮುಖ್ಯಮಂತ್ರಿ ಪಟ್ಟಕ್ಕೆ ಕೇಳಿ ಬಂದಿತ್ತು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ. ಟಿ. ರವಿ ಕೇಂದ್ರ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಮುಖ್ಯಮಂತ್ರಿಯಾಗಬಹುದು ಎಂಬ ವರದಿಗಳು ಬಂದಿದ್ದವು.
ಒಕ್ಕಲಿಗ ಅಥವ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ಸಿಗಲಿದೆ ಎಂಬ ಮಾತುಗಳಿದ್ದವು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವರಾಜ ಬೊಮ್ಮಾಯಿಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರು.
ಸಿ. ಟಿ. ರವಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರಾಗಿದ್ದರು. ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬಿಜೆಪಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಈ ನಿಯಮದ ಅನ್ವಯ ಹೈಕಮಾಂಡ್ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ತಮಿಳುನಾಡು ವಿಧಾನಸಭೆ ಚುನಾವಣೆ ಉಸ್ತುವಾರಿಯನ್ನು ಸಿ. ಟಿ. ರವಿಗೆ ಹೈಕಮಾಂಡ್ ನೀಡಿತು. ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಜೊತೆಗೂಡಿ ರಾಜ್ಯದಲ್ಲಿ ಸಂಚಾರ ನಡೆಸಿ, ಚುನಾವಣಾ ಪ್ರಚಾರ ಮಾಡಿದರು. ರಾಜ್ಯದಲ್ಲಿ ನಾಲ್ವರು ಬಿಜೆಪಿ ಶಾಸಕರು ಚುನಾವಣೆಯಲ್ಲಿ ಆಯ್ಕೆಯಾದರು.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸುದ್ದಿಗಳು ಹಬ್ಬಿದಾಗ ಸಿ. ಟಿ. ರವಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ವರದಿಗಳು ಬಂದಿದ್ದವು. ಆದರೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ವರಿಷ್ಠರ ಸೂಚನೆಯಂತೆ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿ. ಟಿ. ರವಿ ರಾಜ್ಯ ರಾಜಕಾರಣಕ್ಕೆ ಯಾವಾಗ ವಾಪಸ್ ಆಗಲಿದ್ದಾರೆ? ಎಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಕೇಳುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರು ಈ ಪ್ರಶ್ನೆಗೆ ಉತ್ತರ ನೀಡುವರೇ? ಎಂದು ಕಾದು ನೋಡಬೇಕಿದೆ.











Click it and Unblock the Notifications