ನನ್ನ ಹೆಂಡ್ತಿಗೂ ಫ್ರೀ.. ಶೋಭಾ ಕರಂದ್ಲಾಜೆಗೂ ಫ್ರೀ ಅಂದಿದ್ರು, ಈಗೆಲ್ಲಿ ಫ್ರೀ?: ಸಿಎಂಗೆ ಸಿ.ಟಿ.ರವಿ ಟಾಂಗ್
ಮಂಗಳೂರು, ಜೂನ್, 22: ಮಂಗಳೂರಿನಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಡಿ.ಕೆ.ಶಿವಕುಮಾರ್ ಉಚಿತ, ನಿಶ್ವಿತ ಮತ್ತು ಖಚಿತ ಅಂತಾ ಹೇಳಿದ್ದರು. ಇನ್ನು ಸಿದ್ಧರಾಮಯ್ಯ ಸಿ.ಟಿ.ರವಿ ನಿಮ್ಮ ಹೆಂಡ್ತೀಗೂ ಫ್ರೀ, ಶೋಭಕ್ಕ ನಿಮಗೂ ಫ್ರೀ ಅಂತಾ ಹೇಳಿದ್ದರು. ಆದರೆ ಇದೀಗ ಎಲ್ಲಿದೆ ಫ್ರೀ. ಕೇಳಿದರೆ ನೂರಾರು ಕಾರಣ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ನಮ್ಮ ಸೋಲು ಕಾರಣ ಆಗಿದೆ. ಹಾಗಾಗಿ ನಾನು ನಿಮ್ಮೆಲ್ಲರಲ್ಲಿ ಕ್ಷಮೆ ಯಾಚನೆ ಮಾಡುತ್ತೇನೆ. ನಾವು ಸೋತಿದ್ದೇವೆ, ಚುನಾವಣೆಯಲ್ಲಿ ಮಾತ್ರ ಸೋಲು. ಆದರೆ ಸಿದ್ದಾಂತದಲ್ಲಿ ನಾವು ಸೋತಿಲ್ಲ, ಅದು ಯಾವತ್ತೂ ಇರುತ್ತದೆ ಅಂತಾ ಸಿ.ಟಿ.ರವಿ ಕಾರ್ಯಕರ್ತರಿಗೆ ವಿಶ್ವಾಸ ತುಂಬಿದರು.

ತುಕಾಡೆ ಗ್ಯಾಂಗ್ಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ನೀತಿ ಮತ್ತು ನಿಯತ್ತು ಇಲ್ಲದ ನೇತೃತ್ವ ಯಾವತ್ತೂ ಹಾನಿಕಾರಕ. ಕಾಂಗ್ರೆಸ್ಗೆ ನಿಯತ್ತು ಮತ್ತು ನೀತಿ ಎರಡೂ ಇಲ್ಲ. ಕಾಂಗ್ರೆಸ್ ಮಾಯಾ ಯುದ್ಧದಲ್ಲಿ ತಾತ್ಕಾಲಿಕ ಗೆಲುವು ಪಡೆದಿದೆ. ಅವರ ಮಾಯದ ಯುದ್ಧದಲ್ಲಿ ನಾವು ಅಧಿಕಾರ ಕಳೆದುಕೊಂಡಿದ್ದೇವೆ. 2024ರಲ್ಲಿ ಮೈ ಮರೆತರೆ ನಾವು ದೇಶ ಕಳೆದುಕೊಳ್ತೀವಿ. ಹಾಗಾಗಿ ಜನರಿಗೆ ಈ ಮಾಯ ಯುದ್ಧವನ್ನು ಅರ್ಥ ಮಾಡಿಸಬೇಕಿದೆ ಎಂದು ಸಿ.ಟಿ.ರವಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಸಮಾನ ನಾಗರಿಕ ಸಂಹಿತೆ ಜಾರಿ ಒಂದು ಬಾಕಿಯಿದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡಿ ಅದನ್ನು ಜಾರಿಗೆ ಬಿಡಲಿಲ್ಲ. ಸಮಾನ ನಾಗರಿಕ ಸಂಹಿತೆ ಬೇಡ ಅಂದರೆ ಕ್ರಿಮಿನಲ್ ಕೋಡ್ ಯಾಕೆ? ಷರಿಯಾದ ಕಾನೂನನ್ನೇ ಇಸ್ಲಾಂ ಪ್ರಕಾರ ಇಲ್ಲಿ ಅನುಸರಿಸಲಿ. ಕಳ್ಳತನ ಮಾಡಿದರೆ ಕೈ ಕಟ್, ಅತ್ಯಾಚಾರ ಮಾಡಿದರೆ ಹತ್ಯೆ ಅಂತಾ ಷರಿಯಾ ಕಾನೂನು ಹೇಳುತ್ತದೆ. ಆ ಕಾನೂನು ಜಾರಿ ಮಾಡಿದರೆ ಇವರಲ್ಲಿ ಎಷ್ಟು ಜನ ಉಳಿಯಬಹುದು ಎಂದು ಪ್ರಶ್ನಿಸಿದರು.
ಹಾಗೆಯೇ ಇಲ್ಲಿನ ಕ್ರಿಮಿನಲ್ ಕೋಡ್ ಬೇಕು, ಆದರೆ ಇವರಿಗೆ ಸಿವಿಲ್ ಕೋಡ್ ಬೇಡ. ಹೀಗಾಗಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಲಿದೆ. ಇಡೀ ದೇಶ ಒಂದು ಎಂಬ ಭಾವನೆಯಲ್ಲಿ ನಾಗರಿಕ ಸಂಹಿತೆ ಬರಬೇಕು ಎಂದು ಅವರು ಹೇಳಿದರು. ಹಾಗೆಯೇ ಇದಕ್ಕೂ ಮೊದಲು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಿ.ಟಿ.ರವಿ ಅವರು, ಕಾಂಗ್ರೆಸ್ನ ವೆಬ್ಸೈಟ್ ಹ್ಯಾಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಸದ್ಯ ಕಾಂಗ್ರೆಸ್ ನಾಯಕರ ಹೇಳಿಕೆ ಮುಂದೆ ಬೇರೆ ರೀತಿ ತಿರುಗಬಹುದು. ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ. ಹಾಗಾಗಿ ಹುಚ್ಚುಚ್ಚು ಹೇಳಿಕೆ ಕೊಡುತ್ತಿದೇವೆ ಎನ್ನಬಹುದು. ಸದ್ಯ ಇವರದ್ದು ಹುಚ್ಚುಚ್ಚು ಹೇಳಿಕೆಗಳು, ಇದರಲ್ಲಿ ವ್ಯತ್ಯಾಸ ಇಲ್ಲ. ಮೋದಿಯವರು ನೂರಾರು ಯೋಜನೆಗಳನ್ನು ಕೊಟ್ಟಿದ್ದಾರೆ, ಚುನಾವಣೆಗೆ ಅಂತಾ ಕೊಡಲಿಲ್ಲ. ಗೆದ್ದ ಮೇಲೆ ಜನರ ಅವಶ್ಯಕತೆ ಗುರುತಿಸಿ ಮೋದಿ ಕೊಟ್ಟರು. ಇವರು ಚುನಾವಣೆಗೆ ಮೊದಲೇ ಡಂಗುರ ಹೊಡೆದರು ಎಂದು ವ್ಯಂಗ್ಯವಾಡಿದರು.
ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಇತ್ತು. ಆದರೆ ಆಗ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಟ್ಟರು ಅಂತಾ ಹೇಳಿದ್ರಾ?. ಅಗಲೂ ನಾನು ಕೊಟ್ಟೆ ಅಂತಾನೇ ಹೇಳಿದ್ದಾರೆ. ಯಾವುದೇ ರಾಜ್ಯಗಳಿಗೆ ಕೇಂದ್ರ ಅಕ್ಕಿ ಕೊಟ್ಟಿಲ್ಲ ಅಂತಾ ಸಚಿವರು ಸ್ಪಷ್ಟಪಡಿಸಿದ್ದಾರೆ. ಗರೀಬಿ ಕಲ್ಯಾಣ್ ಯೋಜನೆಗೆ ಬಳಸಿ ಉಳಿದ್ರೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ ಅಂದಿದ್ದಾರೆ ಅಂತಾ ಸಿ.ಟಿ.ರವಿ ಸ್ಪಷ್ಟಪಡಿಸಿದರು.
ಆಮ್ ಅದ್ಮೀ ಆರಂಭಿಸಿತು, ಕಾಂಗ್ರೆಸ್ ಈ ಫ್ರೀ ಸ್ಕೀಂ ಜೋಡಿಸಿಕೊಂಡಿತು. ನಮ್ಮ ಸರ್ಕಾರ ಆತ್ಮನಿರ್ಭರ ಯೋಜನೆ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ಕೊಡುತ್ತಿದೆ. ವೋಟ್ ಕಡಿಮೆ ಆಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು, ಆದರೆ ಇದೇ ಜನ ಲೋಕಸಭೆಗೆ ಬಿಜೆಪಿಯನ್ನು ಗೆಲ್ಲಿಸಿದ್ದರು. ಆಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ನಾವು ಗೆಲ್ಲಲ್ಲ ಅಂದಿದ್ದರು. ಆದರೆ ಜನ ಲೋಕಸಭೆಗೆ ಬಿಜೆಪಿಗೆ ವೋಟ್ ಹಾಕಿ ಗೆಲ್ಲಿಸಿದ್ದರು ಎಂದರು.
ದೇಶ ಗೆಲ್ಲಬೇಕು ಅನ್ನೋರು ಮೋದಿಯವರನ್ನು ಗೆಲ್ಲಿಸುತ್ತಾರೆ. ಆದರೆ ತುಕಡೆ ಗ್ಯಾಂಗ್ಗಳು ದೇಶ ಸೋಲಬೇಕು ಅಂತಾರೆ. ಹೊಂದಾಣಿಕೆ ರಾಜಕೀಯದ ಬಗ್ಗೆ ನನ್ನದು ನೋ ಕಾಮೆಂಟ್ಸ್. ನಾವು ಸೋಲನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಹೀನಾಯ ಅಲ್ಲ ಅಂತಾ ಸಿ.ಟಿ. ರವಿ ಹೇಳಿದರು.












Click it and Unblock the Notifications