ಕುದುರೆಮುಖ ಘಾಟ್ ನಲ್ಲಿ ಸಿಲುಕಿದ ಐರಾವತ ಬಸ್: ಫುಲ್ ಟ್ರಾಫಿಕ್ ಜಾಮ್
ಚಿಕ್ಕಮಗಳೂರು, ಸೆಪ್ಟೆಂಬರ್.08: ಕುದುರೆಮುಖ ಘಾಟ್ ನ ತಿರುವಿನಲ್ಲಿ ಐರವಾತ ಬಸ್ ಸಿಕ್ಕಿ ಹಾಕಿಕೊಂಡಿರುವ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿರುವ ಘಟನೆ ಇಂದು ಶನಿವಾರ ಸಂಭವಿಸಿದೆ.
ಇದರಿಂದ ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನ ಸವಾರರು ಪರದಾಡುವಂತಾಗಿದೆ. ಸದ್ಯ ಕುದುರೆಮುಖ ಘಾಟ್ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ. ಆದರೆ ಬಸ್ ಸಿಕ್ಕಿಹಾಕಿಕೊಂಡಿರುವುದರಿಂದ ಇಲ್ಲಿಗೂ ಈಗ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ಶಿರಾಡಿ, ಚಾರ್ಮಾಡಿ ಘಾಟ್ ನಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇಧ ಹಿನ್ನಲೆಯಲ್ಲಿ ಕುದುರೆಮುಖ ಘಾಟ್ ಮೂಲಕ ಅನುವು ಮಾಡಿಕೊಡಲಾಗಿತ್ತು. ಪ್ರತಿನಿತ್ಯ ಇಲ್ಲಿ ಐರವಾತ ಬಸ್, ಲಾರಿ ಸೇರಿದಂತೆ ಸಾವಿರಾರು ಭಾರೀ ಗಾತ್ರದ ವಾಹನಗಳು ಸಂಚಾರ ಮಾಡುತ್ತಿದ್ದವು.

ಆದರೆ ಇದೀಗ ಇಲ್ಲಿ ಐರವಾತ ಬಸ್ ಸಿಕ್ಕಿಹಾಕಿಕೊಂಡಿದ್ದು, ವಾಹನ ಸವಾರರಿಗೆ ತಲೆ ಬಿಸಿಯಾಗಿದೆ. ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಳೆದ ತಿಂಗಳು ಸಹ ಕುದುರೆಮುಖ ಘಾಟ್ ತಿರುವಿನಲ್ಲಿ ಕಂಟೈನರ್ ಒಂದು ಕಿರಿದಾದ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದ್ದು, ಲಾರಿ ಚಾಲಕರು ಮತ್ತು ಪ್ರವಾಸಿಗರು ಪರದಾಡಿದ್ದರು.
ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ರಸ್ತೆ ಬದಿಯ ಮಣ್ಣಿನಲ್ಲಿ ಸಿಲುಕಿಕೊಂಡಿದೆ. ಕಿರಿದಾದ ಘಾಟಿ ರಸ್ತೆಯಲ್ಲಿ ಕಂಟೈನರ್ ತೆರವುಗೊಳಿಸಲು ಕಾರ್ಯಚರಣೆ ಕಷ್ಟವಾಗಿ ಸ್ಥಳಕ್ಕೆ ಕುದುರೆಮುಖ ಪೊಲೀಸರು ಭೇಟಿ ನೀಡಿ, ತೆರವು ಕಾರ್ಯ ಆರಂಭಿಸಿದ್ದರು.












Click it and Unblock the Notifications