ಕೊರೊನಾ ವೈರಸ್ ಮಧ್ಯೆ ಮುಳ್ಳಯ್ಯನಗಿರಿಗೆ ಹರಿದು ಬಂದ ಪ್ರವಾಸಿಗರು
ಚಿಕ್ಕಮಗಳೂರು, ಜೂನ್ 28: ಕೊರೊನಾ ವೈರಸ್ ಸೋಂಕು ಹರಡುವಿಕೆಯ ಈ ಸಂದರ್ಭದಲ್ಲಿ ಶನಿವಾರ ಹಾಗೂ ಭಾನುವಾರ ಸೇರಿದಂತೆ ಪ್ರತಿದಿನವೂ ಚಿಕ್ಕಮಗಳೂರು ಜಿಲ್ಲೆಗೆ ಸಾವಿರಾರು ಪ್ರವಾಸಿಗರು ರಾಜ್ಯ, ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭಜರಂಗದಳ, ಶ್ರೀರಾಮ ಸೇನೆ, ವಂದೇ ಮಾತರಂ ಸಂಘಟನೆಯ ವತಿಯಿಂದ ಶುಕ್ರವಾರ ಟೂರಿಸ್ಟ್ ಗೋ ಬ್ಯಾಕ್ ಅಭಿಯಾನ ನಡೆಸಲಾಯಿತು.
ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ, ಹೊನ್ನಮ್ಮನಹಳ್ಳ, ದೇವಿರಮ್ಮನ ದೇವಸ್ಥಾನಕ್ಕೆ ಸಾಗುವ ರಸ್ತೆಯಲ್ಲಿ ನಿಂತು ಪ್ರವಾಸಿಗರೇ, ಸ್ವರ್ಗದಂತಹ ಚಿಕ್ಕಮಗಳೂರನ್ನು ನರಕ ಮಾಡಬೇಡಿ, ನಮ್ಮ ಊರಿಗೆ ಬರಬೇಡಿ, ಸೇವ್ ಚಿಕ್ಕಮಗಳೂರು ಸೇರಿದಂತೆ ವಿವಿಧ ಸ್ಲೋಗನ್ ಗಳನ್ನು ಒಳಗೊಂಡ ಪ್ಲೇ ಕಾರ್ಡ್ ಗಳನ್ನು ಪ್ರದರ್ಶನ ಮಾಡುವ ಮೂಲಕ ಪ್ರವಾಸಿಗರೇ ಕೆಲದಿನಗಳ ಕಾಲ ಚಿಕ್ಕಮಗಳೂರು ಕಡೆಗೆ ಬರಬೇಡಿ ಎಂದು ಪ್ರತಿಭಟನೆ ಮಾಡಿದರು.

ಈ ವೇಳೆ ರಾಷ್ಟ್ರೀಯ ಭಜರಂಗದ ರಾಜ್ಯ ಪ್ರಮುಖ ತುಡುಕೂರು ಮಂಜು ಮಾತನಾಡಿ, ಲಾಕ್ ಡೌನ್ ಸಡಿಲಿಕೆಯ ನಂತರ ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರು ಎಲ್ಲೆಂದರಲ್ಲಿ ಊಟ, ತಿಂಡಿ ಮಾಡಿ ಪ್ಲಾಸ್ಟಿಕ್ ಹಾಕುತ್ತಿದ್ದಾರೆ ಎಂದರು.

ಜೊತೆಗೆ ಹೋಟೆಲ್ ಗಳಿಗೆ ಹೋಗುತ್ತಿದ್ದು, ಕೊರೊನಾ ವೈರಸ್ ನಿಯಮವನ್ನು ಪಾಲಿಸುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ಪ್ರವಾಸಿಗರು ಇದನ್ನು ಅರಿತು ಪ್ರವಾಸ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.












Click it and Unblock the Notifications