ಅಜ್ಜಂಪುರ: ಇದ್ದಕ್ಕಿದ್ದಂತೆ ಕುಸಿದು ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾವು
ಚಿಕ್ಕಮಗಳೂರು, ನವೆಂಬರ್, 06: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಉಷಾ (13) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಶನಿವಾರ ಬೆಳಗ್ಗೆ ವಸತಿ ಶಾಲೆಯಲ್ಲಿ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ವಸತಿ ಶಾಲೆಯ ಪ್ರಾಂಶುಪಾಲರು 108 ಆಂಬುಲೆನ್ಸ್ ಮೂಲಕ ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಮೃತ ಉಷಾ ಹಲವು ವರ್ಷಗಳಿಂದ ಟಿ.ಬಿ. ಖಾಯಿಲೆಯಿಂದ ಬಳಲುತ್ತಿದ್ದಳು ಎಂದು ವಸತಿ ಶಾಲೆಯ ಪ್ರಾಂಶುಪಾಲ ಶಿವರಾಜ್ ಶಿವರಾಜ್ ಸ್ಪಷ್ಟಪಡಿಸಿದ್ದು, ಹಲವು ಬಾರಿ ಆಕೆಯ ಪೊಷಕರಿಗೆ ತಿಳಿಸಿ ಮನೆಗೆ ಕಳುಹಿಸಿ ಅಲ್ಲಿಯೇ ವ್ಯಾಸಂಗ ಮಾಡುವಂತೆ ಹೇಳಿದರು. ಆದರೆ, ಪೋಷಕರು ಇದೊಂದು ವರ್ಷ ವ್ಯಾಸಂಗ ಮಾಡಲಿ, ಮುಂದಿನ ವರ್ಷ ಬದಲಾಯಿಸುವುದಾಗಿ ಹೇಳಿ ವಸತಿ ಶಾಲೆಯಲ್ಲಿ ಬಿಟ್ಟಿದ್ದರು.
ಆದರೆ, ಇತ್ತೀಚೆಗೆ ಉಷಾ ತುಂಬಾ ಡಿಪ್ರೆಷನ್ಗೆ ಒಳಗಾಗಿದ್ದಳು. ಪೋಷಕರು ಚಿಕಿತ್ಸೆ ಕೊಡಿಸಿದ್ದು, ಪ್ರತಿ ದಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಇಂದು ಏಕಾಏಕಿ ಕುಸಿದ್ದು ಬಿದ್ದಳು. ಪ್ರಥಮ ಚಿಕಿತ್ಸೆಗೆಂದು ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ದುರಾದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲಿ ಬಾಲಕಿ ತೀರಿಕೊಂಡಿದ್ದಳು.
ವಿದ್ಯಾರ್ಥಿನಿ ಅಗಲಿಕೆ ತುಂಬಾ ನೋವು ತಂದಿದೆ ಎಂದು ವಸತಿ ಶಾಲೆಯ ಪ್ರಾಂಶುಪಾಲ ತಿಳಿಸಿದ್ದಾರೆ. ಸಾವಿನ ಬಗ್ಗೆ ಅನುಮಾನ ಬಾರದಿರಲು ಪೋಸ್ಟ್ ಮಾರ್ಟಂಗಾಗಿ ಮೃತದೇಹವನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸರ್ಕಾರದ ಪರಿಹಾರ 4 ಲಕ್ಷ ರೂಗಳ ಚೆಕ್ಕನ್ನು ಪ್ರಭಾರ ಉಪ ನಿರ್ದೇಶಕರಾದ ಸೋಮಶೇಖರ್ ಮೃತಳ ತಾಯಿಗೆ ನೀಡಿದರು.
ಸ್ಥಳಕ್ಕೆ ಡಿ.ಸಿ.ಓ ನಾಗೇಶ್, ತರೀಕೆರೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ವಸತಿ ಶಾಲೆಗಳ ಪ್ರಿನ್ಸಿಪಾಲ್, ವಾರ್ಡನ್, ಶಿಕ್ಷಕರು ಆಸ್ಪತ್ರೆಗೆ ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನು ಅಜ್ಜಂಪುರ ಪೊಲೀಸರು ಯಾವುದೇ ಗೊಂದಲವಾಗದಂತೆ ನೋಡಿಕೊಂಡು ಮೃತದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.












Click it and Unblock the Notifications