ಕೆನರಾ ಬ್ಯಾಂಕ್ ಎಟಿಎಂಗೆ ಕನ್ನ: 14 ಲಕ್ಷ ರೂ ದೋಚಿ ಖದೀಮರು ಎಸ್ಕೇಪ್
ಚಿಕ್ಕಮಗಳೂರು, ಆಗಸ್ಟ್ 16: ಗ್ಯಾಸ್ ಕಟರ್ ಬಳಸಿ ಕೆನರಾ ಬ್ಯಾಂಕಿನ ಎಟಿಎಮ್ನಲ್ಲಿದ್ದ 14 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಗರದ ಚಿಕ್ಕಮಗಳೂರು-ಕಡೂರು ಹೆದ್ದಾರಿಯಲ್ಲಿರುವ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಕೆನರಾ ಬ್ಯಾಂಕಿನ ಎಟಿಎಮ್ಗೆ ಮಧ್ಯರಾತ್ರಿ ನುಗ್ಗಿದ ದರೋಡೆಕೋರರು ಸಿಸಿ ಕ್ಯಾಮರ ನಿಷ್ಕ್ರೀಯಗೊಳಿಸಿ ಕಬ್ಬಿಣದ ಸರಳಿನಿಂದ ಎಟಿಎಮ್ನಲ್ಲಿದ್ದ ಸುಮಾರು 14 ಲಕ್ಷ ರೂ. ನಗದನ್ನ ಹೊರ ತೆಗೆದಿದ್ದಾರೆ. ನಂತರ ದರೋಡೆ ಮಾಡಿದ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ಬೆಳಗ್ಗೆ ಎಟಿಎಂ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಕೆನರಾ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ನೀರಿಗಾಗಿ ಬೈದಾಡಿಕೊಂಡ ಅರಣ್ಯಾಧಿಕಾರಿಗಳು
ಚಿಕ್ಕಮಗಳೂರು: ವಸತಿ ಗೃಹದ ಪೈಪ್ ಒಡೆದು ಹೋದ ವಿಚಾರ ಸಂಬಂಧ ಅರಣ್ಯ ಇಲಾಖೆಯ ಇಬ್ಬರು ಅಧಿಕಾರಿಗಳು ಮೊಬೈಲ್ನಲ್ಲಿ ಅವಾಚ್ಯ ಶಬ್ಧಗಳಿಂದ ಬೈದಾಡಿಕೊಂಡಿದ್ದು, ಅಧಿಕಾರಿಗಳು ಬೈದಾಡಿಕೊಂಡ ಮೊಬೈಲ್ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಉಪವಲಯಾರಣ್ಯಾಧಿಕಾರಿ ನವೀನ್ ಕ್ಷುಲ್ಲಕ ವಿಚಾರಕ್ಕೆ ಅವಾಚ್ಯ ಶಬ್ಧಗಳಿಂದ ಪರಸ್ಪರ ನಿಂದಿಸಿಕೊಂಡಿದ್ದು, ಮೇಲಾಧಿಕಾರಿಗಳು ಈ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ನೀರಿನ ಪೈಪ್ ಒಡೆದು ಹೋಗಿದ್ದು, ಇದನ್ನು ಉಪವಲಯಾರಣ್ಯಾಧಿಕಾರಿ ನವೀನ್ ಒಡೆದು ಹಾಕಿದ್ದಾರೆಂದು ಆರೋಪಿಸಿ ವಲಯಾರಣ್ಯಾಧಿಕಾರಿ ಮೋಹನ್ ನವೀನ್ಗೆ ಕರೆ ಮಾಡಿ ಬೈದಿದ್ದಾರೆ. ಈ ವೇಳೆ ನವೀನ್ಗೆ ಮೋಹನ್ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದು, ಕುಪಿತರಾದ ನವೀನ್ ಕೂಡ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇಬ್ಬರು ಅಧಿಕಾರಿಗಳ ನಡುವಿನ ಮೊಬೈಲ್ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಅಧಿಕಾರಿಗಳ ವಿರುದ್ಧ ಕ್ರಮವಹಿಸದಿರುವ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications