ಚಿಕ್ಕಬಳ್ಳಾಪುರ ಕೆರೆಯಲ್ಲಿ ಬೆಂಕಿ ಹಾಕಿ ಸುಟ್ಟಂತೆ ಕಮರಿದ ಜೊಂಡು: ಜನರಲ್ಲಿ ಹೆಚ್ಚಿದ ಆತಂಕ
ಚಿಕ್ಕಬಳ್ಳಾಪುರ, ಮಾರ್ಚ್ 27: ಎರಡು ಹಂತದಲ್ಲಿ ಶುದ್ಧೀಕರಣವಾದ ಎಚ್.ಎನ್ ವ್ಯಾಲಿ ತ್ಯಾಜ್ಯ ನೀರು ಅಂತರ್ಜಲದಲ್ಲಿ ಎಂತಹ ದುಷ್ಪರಿಣಾಮ ಬೀರಲಿದೆಯೋ ಇನ್ನು ಅರಿವಾಗಿಲ್ಲವಾದರೂ ಬಹಿರಂಗ ಅವಾಂತರಗಳು ಗೋಚರಿಸ ತೊಡಗಿರುವುದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ 2 ವರ್ಷಗಳಿಂದ ಹೆಬ್ಬಾಳ-ನಾಗವಾರದ ಕೆರೆಗಳ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಚಿಕ್ಕಬಳ್ಳಾಪುರ ತಾಲೂಕಿನ ಬಹುತೇಕ ಎಲ್ಲ ಕೆರೆಗಳಿಗೂ ತುಂಬಿಸಲಾಗುತ್ತಿದ್ದು, ತ್ಯಾಜ್ಯ ನೀರು ತುಂಬಿಸಿರುವ ಕೆರೆಗಳಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಾಡ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಎಚ್.ಎನ್ ವ್ಯಾಲಿ ನೀರು ತುಂಬಿಸಿದ್ದ ಕೆರೆಗಳಲ್ಲಿ ಜೊಂಡು ಬೆಳೆಯ ತೊಡಗಿದ್ದು, ಇದು ಬೆಂಕಿ ಹಾಕಿ ಸುಟ್ಟಂತೆ ಕಮರಿ ಹೋಗುತ್ತಿದೆ. ಇದಕ್ಕೆ ಕಾರಣ ತ್ಯಾಜ್ಯ ನೀರಿನಲ್ಲಿರುವ ರಾಸಾಯನಿಕಗಳೇ ಕಾರಣ ಎಂಬ ಆತಂಕ ಜನರನ್ನು ಕಾಡುತ್ತಿದ್ದು, ಅಂತರ್ಜಲದಲ್ಲಿ ಈ ತ್ಯಾಜ್ಯ ನೀರು ಸೇರಿ ಇನ್ನು ಯಾವ ಸಮಸ್ಯೆಗಳನ್ನು ಒಡ್ಡಲಿದೆಯೋ ಎನ್ನುವ ಚಿಂತೆ ಕಾಡುತ್ತಿದೆ.
ಪ್ರಸ್ತುತ ಚಿಕ್ಕಬಳ್ಳಾಪುರ ತಾಲೂಕಿನ ಬಹುತೇಕ ಕೆರೆಗಳು, ಗೌರಿಬಿದನೂರು, ಶಿಡ್ಲಘಟ್ಟದ ತಾಲೂಕಿನ ಹಲವು ಕೆರೆಗಳಿಗೆ ಎಚ್.ಎನ್ ವ್ಯಾಲಿ ಸಂಸ್ಕರಿಸಿದ ನೀರನ್ನು ಹರಿಸಲಾಗುತ್ತಿದೆ. ಹೀಗೆ ಹರಿಸುತ್ತಿರುವ ಬಹುತೇಕ ಕೆರೆಗಳಲ್ಲಿ ಈವರೆಗೆ ಕಾಣದಂತಹ ಪಾಚಿಯಂತಹ ಜೊಂಡು ಬೆಳೆದಿದ್ದು, ಇದು ನೀರೇ ಕಾಣದಂತೆ ಕೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಗೋಪಾಲಕೃಷ್ಣ ಅಮಾನಿಕೆರೆ, ದೊಡ್ಡಮರಳಿ ಕೆರೆ ಸೇರಿದಂತೆ ಹಲವು ಕೆರೆಗಳಲ್ಲಿ ಹಸಿರಾಗಿ ಆವರಿಸಿಕೊಂಡಿದ್ದ ಜೊಂಡು ಕಳೆದ ಹಲವು ದಿನಗಳಿಂದ ಕಮರ ತೊಡಗಿದೆ. ಹೀಗೆ ಜೊಂಡು ಕಮರುತ್ತಿರುವುದು ತ್ಯಾಜ್ಯ ನೀರಿನಲ್ಲಿರುವ ರಾಸಾಯನಿಕಗಳಿಂದಲೇ ಎಂಬ ತೀರ್ಮಾನಕ್ಕೆ ಬಂದಿರುವ ಸಾರ್ವಜನಿಕರು ಇಂತಹ ನೀರು ರೈತರ ಬೆಳೆಗಳಿಗೆ ಅಥವಾ ಅಂತರ್ಜಲಕ್ಕೆ ಸೇರಿದರೆ ಪರಿಣಾಮ ಏನಾಗಲಿದೆಯೇ ಮುಂದಿನ ದಾರಿ ಏನು ಎಂದು ಅರಿಯದೆ ಕಂಗಾಲಾಗಿದ್ದಾರೆ.

ಮೀನುಗಾರಿಕೆಗೆ ಮಾರಕ
ಜಿಲ್ಲೆಯ ಕೆರೆಗಳು ಹತ್ತಾರು ವರ್ಷಗಳಿಗೊಮ್ಮೆ ತುಂಬಿದರೂ ಕೆರೆ ತುಂಬಿದ ವರ್ಷದಲ್ಲಿ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ ಸಿಗುತ್ತಿತ್ತು. ಇದರಿಂದ ನೂರಾರು ಉದ್ಯೋಗವಕಾಶಗಳು ದೊರೆಯುತ್ತಿತ್ತು. ಆದರೆ, ತ್ಯಾಜ್ಯ ನೀರು ಹರಿದಿರುವ ಕೆಲ ಕೆರೆಗಳಲ್ಲಿ ಆವರಿಸಿರುವ ಜೊಂಡಿನಿಂದ ಮೀನುಗಾರಿಕೆಗೆ ಅಡ್ಡಿಯಾಗಿದ್ದು, ಮೀನು ಸಾಕಾಣಿಕೆಯ ಮೇಲೆ ದುಷ್ಪಾರಿಣಾಮ ಬೀರುವಂತಾಗಿದೆ.
ಜಿಲ್ಲೆಯು ಹಣ್ಣು ಮತ್ತು ತರಕಾರಿ ಬೆಳೆ ಬೆಳೆಯುವುದರಲ್ಲಿ ಪ್ರಖ್ಯಾತಿ ಪಡೆದಿದ್ದು, ರಾಜಧಾನಿ ಬೆಂಗಳೂರಿನ ನಿವಾಸಿಗಳಿಗೆ ಹಣ್ಣು, ತರಕಾರಿ ಸರಬರಾಜು ಮಾಡುತ್ತಿರುವ ಪ್ರಮುಖ ಕೇಂದ್ರವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ನೀರಿನಿಂದ ತರಕಾರಿ ಬೆಳೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಲವು ಪ್ರಮುಖ ಮಾಲ್ ಸೇರಿದಂತೆ ಹಾಪ್ಕಾಮ್ಸ್ಗಳಲ್ಲಿ ಹಣ್ಣು ಮತ್ತು ತರಕಾರಿಗೆ ಬಹಿಷ್ಕಾರ ಹಾಕಿರುವ ಆರೋಪಗಳು ಕೇಳಿ ಬಂದಿವೆ.

ಸರ್ಕಾರಕ್ಕೆ,ಅಧಿಕಾರಕ್ಕೆ ಎಚ್ಚರಿಕೆ ಗಂಟೆ
ಈಗಾಗಲೇ 2 ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಹರಿಸಿರುವ ಕೆರೆಗಳಲ್ಲಿ ದುಷ್ಪರಿಣಾಮಗಳು ಬರೀಗಣ್ಣಿಗೆ ಕಾಣಿಸುತ್ತಿದ್ದು, ಯಾವುದೇ ಪ್ರಯೋಗಾಲಯಕ್ಕೆ ಹೋಗುವ ಅಗತ್ಯವಿಲ್ಲ. ನೈಟ್ರೇಟ್ ಮತ್ತು ಫಾಸ್ಪೇಟ್ ಇತರೆ ರಾಸಾಯನಿಕ ತ್ಯಾಜ್ಯಗಳನ್ನು 2 ಹಂತದ ಸಂಸ್ಕರಣೆಯಿಂದ ತಟಸ್ಥಗೊಳಿಸಲು ಸಾಧ್ಯವಿಲ್ಲ ಎನ್ನುವುದು ಸರ್ವಾಕಾಲಿಕ ಸತ್ಯ. ಇದನ್ನೇ ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳು ಕಳೆದ 5 ವರ್ಷಗಳಿಂದ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿದೆ.
ಕಳೆದ 3 ವರ್ಷಗಳಿಂದ ಸತತ ಮಳೆಯಾದ ಪರಿಣಾಮ ಅಪಾಯ ಕಡಿಮೆಯಾದರೂ ಮುಂದಿನ ದಿನಗಳಲ್ಲಿ ಅಂತರ್ಜಲ ಕಲುಷಿತವಾಗುವುದಲ್ಲದೆ ಕೆರೆಗಳು ಮತ್ತು ಕೆರೆಗಳ ಸುತ್ತಮುತ್ತಲಿನ ಕೃಷಿ ಚಟುವಟಿಕೆ ನಾಶವಾಗುತ್ತಿದೆ ಎನ್ನುವುದಕ್ಕೆ ಇದು ಎಚ್ಚರಿಕೆ ಗಂಟೆ, ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಹೇಳಿದ್ದಾರೆ.












Click it and Unblock the Notifications