Breaking; ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಮತ್ತೆ ಭೂ ಕುಸಿತ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 09: ಬೆಂಗಳೂರು ನಗರದ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿ ಮತ್ತೆ ಭೂ ಕುಸಿತವಾಗಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಸುರಿದ ಭಾರೀ ಮಳೆಯ ಬಳಿಕ ಭೂ ಕುಸಿತವಾಗುತ್ತಿದೆ.
ಗುರುವಾರ ರಾತ್ರಿ ನಂದಿಗಿರಿಧಾಮದ 26ನೇ ತಿರುವು ನೀರಗುಂಡಿ ಬಳಿ ಭೂ ಕುಸಿತವಾಗಿದೆ. ಮಣ್ಣು, ಕಲ್ಲು, ಬಂಡೆ ರಸ್ತೆಗೆ ಬಂದು ಬಿದ್ದಿದೆ. ನಾಲ್ಕೈದು ದಿನಗಳ ಹಿಂದೆ ಗಿರಿಧಾಮದ ಕುದುರೆಮೆಟ್ಟಿಲು ಬಳಿಯೂ ಗುಡ್ಡ ಕುಸಿದಿತ್ತು.
ರಸ್ತೆಗೆ ಬಿದ್ದಿದ್ದ ಮಣ್ಣು, ಕಲ್ಲುಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪ್ರವಾಸಿಗರು ಗಿರಿಧಾಮದ ಮೇಲೆ ಹೋಗಲು ಅವಕಾಶ ನೀಡಲಾಗಿದೆ. ಆದರೆ ಪದೇ ಪದೇ ಭೂ ಕುಸಿತ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ನಾಲ್ಕೈದು ದಿನಗಳ ಹಿಂದೆ ಸುಲ್ತಾನ್ ಪೇಟೆ ಸನಿಹದ ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಭೂ ಕುಸಿತವಾಗಿತ್ತು. ರಾತ್ರಿ ಸುರಿದ ಮಳೆಯ ಬಳಿಕ ಈ ಭೂ ಕುಸಿತವಾಗಿದ್ದು, ಬೆಟ್ಟದ ಕೆಳಭಾಗದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.
ದೇಶ ಮತ್ತು ವಿದೇಶದಲ್ಲಿಯೂ ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಪ್ರಸಿದ್ಧಿ ಪಡೆದಿದೆ. ಬೆಂಗಳೂರು ನಗರಕ್ಕೆ ಸನಿಹ ಇರುವ ಕಾರಣ ಸಾವಿರಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತದೆ.
ಕಳೆದ ವರ್ಷ ಭೂ ಕುಸಿತ ಉಂಟಾದ ಕಾರಣ ನಂದಿಗಿರಿಧಾಮಕ್ಕೆ ತೆರಳುವ ಮಾರ್ಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ ಲೋಕೋಪಯೋಗಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ರಸ್ತೆ ನಿರ್ಮಾಣ ಮಾಡಿದ ಬಳಿಕ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿತ್ತು.
ನಂದಿಗರಿಧಾಮದಲ್ಲಿ ಗುಡ್ಡ ಕುಸಿದರೆ ಕಲ್ಲು, ಮಣ್ಣು ರಸ್ತೆಗೆ ಬಂದು ಬೀಳದಂತೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಬ್ಬಿಣದ ಬಲೆ ಅಳವಡಿಕೆ ಮಾಡಲಾಗಿದೆ. ಆದರೆ ಸುಲ್ತಾನ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಸಾಗುವ ಕಣಿವೆ ಮಾರ್ಗದಲ್ಲಿ ಗುಡ್ಡ ಕುಸಿದಿದ್ದರಿಂದ ಬಲೆಯೂ ಕಿತ್ತು ಬಂದಿದೆ. ಮಣ್ಣು ಕುಸಿದು ಅರಣ್ಯ ಇಲಾಖೆಯ ನರ್ಸರಿಯಲ್ಲಿನ ಗಿಡಗಳಿಗೆ ಸಹ ಹಾನಿಯಾಗಿದೆ.












Click it and Unblock the Notifications