ಚಿಕ್ಕಬಳ್ಳಾಪುರ: ಮತ ಎಣಿಕೆಗೆ ಸಕಲ ಸಿದ್ಧತೆ, ಬಿಗಿ ಪೊಲೀಸ್ ಬಂದೋಬಸ್ತ್
ಚಿಕ್ಕಬಳ್ಳಾಪುರ, ಮೇ 13: ವಿಧಾನಸಭಾ ಚುನಾವಣೆಯ ಮತ ಎಣಿಕೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಮುನ್ಸಿಪಲ್ ಕಾಲೇಜು) ಮೇ 13 ರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಒಟ್ಟು 19 ಸುತ್ತುಗಳಲ್ಲಿ ನಡೆಯಲಿದ್ದು, ಪ್ರತಿ ಕ್ಷೇತ್ರಕ್ಕೆ ಇವಿಎಂ ಮತ ಎಣಿಕೆಗೆ 14 ಟೇಬಲ್ ಸೇರಿದಂತೆ ಒಟ್ಟು 70, ಅಂಚೆ ಮತ ಪತ್ರ ಎಣಿಕೆಗೆ ಪ್ರತಿ ಕ್ಷೇತ್ರಕ್ಕೂ 4 ಟೇಬಲ್ ಸೇರಿದಂತೆ 20 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಕ್ಷೇತ್ರದ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಅಂಚೆ ಮತ ಪತ್ರಗಳ ಎಣಿಕೆ ನಡೆಯಲಿದ್ದು, ಆನಂತರ ಇವಿಎಂ ಮತ ಯಂತ್ರಗಳ ಎಣಿಕೆ ನಡೆಯಲಿದೆ.

ಮತ ಎಣಿಕೆ ಕಾರ್ಯಕ್ಕೆ ಒಟ್ಟು 330 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 110 ಎಣಿಕೆ ಮೇಲ್ವಿಚಾರಕರು, ಎಣಿಕೆ ಸಿಬ್ಬಂದಿ 110, ಎಣಿಕೆಯ ಸೂಕ್ಷ್ಮ ವೀಕ್ಷಕರು 110 ಮಂದಿ ಕಾರ್ಯನಿರ್ವಹಿಸಲಿದ್ದು, ಪ್ರತಿ ಕ್ಷೇತ್ರಕ್ಕೂ ತಲಾ 22 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಪ್ರಥಮವಾಗಿ ಅಂಚೆ ಮತಗಳನ್ನು ಎಣಿಕೆ ಮಾಡಿದ ನಂತರ ಸಾರ್ವಜನಿಕರ ಮತಗಳನ್ನು ಬೂತ್ವಾರು ಎಣಿಕೆ ಮಾಡಲಾಗುವುದು. ಈ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಏಜೆಂಟರ್ಗಳ ಸಮ್ಮುಖದಲ್ಲಿ ಸುತ್ತುಗಳವಾರು ಮತ ಎಣಿಕೆ ಫಲಿತಾಂಶ ಘೋಷಣೆ ಮಾಡಲಾಗುವುದು.

ಮತ ಎಣಿಕೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳ ಏಜೆಂಟರ್ಗಳು, ಸಿಬ್ಬಂದಿ ಹೊರತುಪಡಿಸಿ ಇತರೆ ಯಾರಿಗೂ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಸಾರ್ವಜನಿಕ ಸಂಚಾರವನ್ನು ನಿಷೇಧಿಸಲಾಗಿದೆ.
ಮೂರು ಹಂತದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ಬಿಎಸ್ಎಫ್, ಅರೆ ಮಿಲಿಟರಿ ಪಡೆ, ಮೀಸಲು ಪೊಲೀಸರು ಹಾಗೂ ಸಿವಿಲ್ ಪೊಲೀಸ್ ಸೇರಿದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಮತ ಎಣಿಕೆಯ ನಂತರ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಪ್ರಮಾಣ ಪತ್ರ ನೀಡಲಾಗುವುದು.
ಶಾಂತಿಯುತವಾಗಿ ಮತ ಎಣಿಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 144 ರನ್ವಯ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮೇ 12ರಂದು ಸಂಜೆ 6 ಗಂಟೆಯಿಂದ ಮೇ 14ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಹಾಗೂ ಮದ್ಯ ಮಾರಾಟ ಮತ್ತು ಸಾಗಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಆದೇಶಿಸಿದ್ದಾರೆ.












Click it and Unblock the Notifications