ಎಚ್ಡಿಕೆ ವಿರುದ್ದ ಕಿಡಿಕಾರುತ್ತಿದ್ದ ಕಾಂಗ್ರೆಸ್ ಶಾಸಕ ಈಗ ಥಂಡಾ
ಎಚ್ಡಿಕೆ ವಿರುದ್ದ ಕಿಡಿಕಾರುತ್ತಿದ್ದ ಕಾಂಗ್ರೆಸ್ ಶಾಸಕ ಈಗ ಥಂಡಾ
ಚಿಕ್ಕಬಳ್ಳಾಪುರ, ಜೂನ್ 1: ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆಯಾ?
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಟೀಕಿಸುತ್ತಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ. ಕೆ ಸುಧಾಕರ್ ತಣ್ಣಗಾದಂತಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೇರು ಮಟ್ಟದಲ್ಲಿ ಒಂದಾಗಬೇಕಿದೆ, ಬಿಜೆಪಿಯನ್ನು ಸೋಲಿಸಲು ಇದರ ಅವಶ್ಯಕತೆಯಿದೆ ಎನ್ನುವ ಹೇಳಿಕೆಯನ್ನು ಸುಧಾಕರ್ ನೀಡಿದ್ದಾರೆ.

ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಸುಧಾಕರ್, ನನ್ನ ಅಸಮಾಧಾನ ಈಗ ಮುಗಿದ ಅಧ್ಯಾಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ನಡೆಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಅವರ ಮಾತನ್ನು ನಾವು ನಂಬುತ್ತೇವೆ ಎಂದು ಸುಧಾಕರ್ ಹೇಳಿದ್ದಾರೆ.
ಈ ಲೋಕಸಭಾ ಚುನಾವಣಾ ಫಲಿತಾಂಶ ಹಲವು ಎಚ್ಚರಿಕೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ ನೀಡಿದೆ. ನಮ್ಮಿಂದಾಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ಡಾ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳುವುದು ನಿಶ್ಚಿತ, ಇಂದಲ್ಲಾ ನಾಳೆ, ಮೈತ್ರಿಯ ಕೆಟ್ಟ ಅನುಭವ ನಮ್ಮನ್ನು ಕಾಡಲಿದೆ. ಇವಿಎಂ ವಿಷಯವನ್ನು ಸುಮ್ಮನೆ ಎಳೆದು ತರಲಾಗುತ್ತಿದೆ. ಎಕ್ಸಿಟ್ ಪೋಲ್ ಜನರ ಒಟ್ಟಾರೆ ಅಭಿಪ್ರಾಯವನ್ನು ತಿಳಿಸುವಂತದ್ದು ಎಂದು ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದ ನಂತರ ಹೇಳಿದ್ದರು.












Click it and Unblock the Notifications