ಚಿಕ್ಕಬಳ್ಳಾಪುರ; ಭಾರೀ ಮಳೆ, ಜನರಿಗೆ ಪೊಲೀಸರ ಮನವಿ ಏನು?
ಚಿಕ್ಕಬಳ್ಳಾಪುರ, ನವೆಂಬರ್ 19; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಕೆರೆಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ನೀರಿನಲ್ಲಿ ಜನರು ಸಿಲುಕುವುದನ್ನು ತಪ್ಪಿಸಲು ಜಿಲ್ಲಾ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.
ಯಾವುದೇ ಕೆರೆ, ನದಿ, ನೀರು ತುಂಬಿ ಹರಿಯುವ ಸೇತುವೆಗಳ ಕಡೆ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಲು ಹೋಗಿ ಅವಘಡಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಂತಹ ಸ್ಥಳಗಳಿಗೆ ಹೋಗದಂತೆ ಎಚ್ಚರವಹಿಸಿ, ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಹೊರಗಡೆ ಸಂಚಾರ ನಡೆಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಕೆರೆ, ನದಿ, ಸೇತುವೆಗಳ ಕಡೆ ಎಲ್ಲಾ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಸ್ಥಳೀಯವಾಗಿ ಪ್ರಕಟಣೆಯನ್ನು ಸಹ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಶುಕ್ರವಾರ ಮತ್ತು ಶನಿವಾರ ಶಾಲೆಗಳಿಗೆ ಜಿಲ್ಲಾಡಳಿತ ರಜೆಯನ್ನು ಘೋಷಣೆ ಮಾಡಿದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಕೆರೆಗಳು ಕೋಡಿ ಬಿದಿದ್ದು, ನೀರು ಮನೆ, ಜಮೀನುಗಳಿಗೆ ನುಗ್ಗಿದೆ. ರಸ್ತೆಗಳ ಮೇಲೆ ಸಹ ನೀರು ಹರಿಯುತ್ತಿರುತ್ತದೆ.
ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಸಹ ಕೆಲವು ಅಡೆ ಅಡಚಣೆ ಉಂಟಾಗಿದೆ. ಪೊಲೀಸರು ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿದ್ದಾರೆ ಮತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ. ಸಾರ್ವಜನಿಕರಿಗೆ ಓಡಾಡಲು ಪರ್ಯಾಯ ರಸ್ತೆಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಜಿಲ್ಲೆಯಲ್ಲಿ ಮಳೆ ಇನ್ನೂ ಮುಂದುವರಿಯುವ ಸಂಭವವಿದ್ದು, ಹೆಚ್ಚಿನ ಅವಘಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಜನರು ಕೆರೆ ಹಾಗೂ ನದಿಗಳ ಬಳಿ ನೋಡಲು ಹೋಗಿ ಜಾರಿ ಬೀಳುವ ಸಂಭವವಿರುತ್ತದೆ. ಆದ್ದರಿಂದ ಮಕ್ಕಳು ಮತ್ತು ಯುವಕರನ್ನು ಕೆರೆಗಳ ಹಾಗೂ ನದಿಗಳ ಬಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ.
ನದಿ ಮತ್ತು ಕೆರೆಕಟ್ಟೆಗಳಲ್ಲಿ ಸುಮ್ಮನೆ ಸುತ್ತಾಡದೇ, ಮೀನು ಹಿಡಿಯಲು ಹೋಗದಂತೆ ಜನರಿಗೆ ಮನವಿ ಮಾಡಲಾಗಿದೆ. ತುಂಬಿ ಹರಿಯುತ್ತಿರುವ ಎಲ್ಲಾ ಕೆರೆ ಹಾಗೂ ನದಿ ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನೆರೆ ಹಾವಳಿಯನ್ನು ಎದುರಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಜಿಲ್ಲೆಯ ಯಾವ ಯಾವ ಕೆರೆ ಕಟ್ಟೆಗಳು ಕೋಡಿ ಹರಿಯಬಹುದು ಎಂಬುದರ ಬಗ್ಗೆ ಮುಂಚಿತವಾಗಿಯೇ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
Recommended Video
ಮುಂಗಾರು ಸಮಯದಲ್ಲಿಯೂ ಈ ವರ್ಷ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಈಗ ಹಿಂಗಾರು ಸಮಯದಲ್ಲಿಯೂ ಚಂಡಮಾರುತದ ಕಾರಣ ಮಳೆ ಹೆಚ್ಚಾಗಿದ್ದು, ರೈತರು ಅಪಾರವಾದ ನಷ್ಟ ಅನುಭವಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಹಲವು ಕಡೆ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಗುಡಿಬಂಡೆ ತಾಲೂಕಿನಲ್ಲಿ ಹಲವು ಸೇತುವೆಗಳ ಮೇಲೆ ಸಂಚಾರ ನಿಷೇಧಿಸಲಾಗಿದೆ, ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಅಮಾನಿ ಬೈರಸಾಗರ ಕೆರೆ, ನವಿಲುಗುರ್ಕಿ ಸೇತುವೆ, ಹಂಪಸಂದ್ರ ಸೇತುವೆಗಳ ಮೇಲೆ ಜನರ ಸಂಚಾರವನ್ನು ಜಿಲ್ಲಾ ಪೊಲೀಸರು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಸೇತುವೆಗಳ ಬಳಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಗೌರಿಬಿದನೂರು ತಾಲೂಕಿನ ಸಾಗನಹಳ್ಳಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು 08156-277071 ಮತ್ತು 08156-277077.












Click it and Unblock the Notifications