ಕಂಡ ಕಂಡಲ್ಲಿ ಕಸಕ್ಕೆ ಬೆಂಕಿ: ಚಿಕ್ಕಬಳ್ಳಾಪುರ ಜನತೆಯನ್ನು ಉಸಿರುಗಟ್ಟಿಸಿದ ದಟ್ಟ ಹೊಗೆ
ಚಿಕ್ಕಬಳ್ಳಾಪುರದ ಪ್ರಮುಖ ವೃತ್ತದಲ್ಲಿ ಕಂಡ ಕಂಡಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದ್ದು, ನಗರದೆಲ್ಲೆಡೆ ಆವರಿಸುತ್ತಿರುವ ದಟ್ಟ ಹೊಗೆ ಜನರನ್ನು ಉಸಿರುಗಟ್ಟಿಸುವಂತೆ ಮಾಡುತ್ತಿದೆ. ಈ ಕಾರಣ ನಗರಸಭೆ ಅಧಿಕಾರಗಳ ವಿರುದ್ಧ ಜನರು ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ, ಜನವರಿ 31 : ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿಯೇ ಕಸಕ್ಕೆ ಬೆಂಕಿ ಹಚ್ಚುವ ಪ್ರಕರಣಗಳು ತಡೆಇಲ್ಲದೇ ನಡೆಯುತ್ತಿವೆ. ಈ ಬಗ್ಗೆ ಕ್ರಮವಹಿಸಬೇಕಾದ ಮತ್ತು ಕಸಕ್ಕೆ ಬೆಂಕಿ ಹಚ್ಚುವವರ ವಿರುದ್ಧ ಕ್ರಮಕೈಗೊಳ್ಳಬೇಕಾದ ನಗರಸಭೆ ಪರಿಸರ ವಿಭಾಗದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಕೆಲವು ವೇಳೆ ನಗರದ ಪ್ರಮುಖ ವೃತ್ತಗಳು, ಬಡಾವಣೆಗಳಲ್ಲಿಯೇ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ನಗರದ ಹೊರ ವಲಯದ ರಸ್ತೆ ಬದಿಯಲ್ಲಿ ಅವ್ಯಾಹತವಾಗಿ ಕಸ ಬೀಳುತ್ತಿದ್ದು ಇಲ್ಲಿಯೂ ಬೆಂಕಿ ಹೆಚ್ಚಲಾಗುತ್ತಿದೆ.
ಕಸಕ್ಕೆ ಬೆಂಕಿ ಹಚ್ಚುವುದನ್ನು ನಿರ್ಬಂಧಿಸಿ ಈ ಹಿಂದೆಯೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜನವಸತಿ ಅಥವಾ ಬಯಲು ಪ್ರದೇಶದಲ್ಲಿ ಕಸಕ್ಕೆ ಬೆಂಕಿ ಹಾಕುವಂತಿಲ್ಲ. ಆದೇಶ ಉಲ್ಲಂಘಿಸಿ ಬೆಂಕಿ ಹಚ್ಚಿದರೆ ವಾಯುಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯಿದೆ 1981ರ ಪ್ರಕಾರ ₹ 5 ಲಕ್ಷ ರೂಪಾಯಿವರೆಗೆ ದಂಡ ತೆರಬೇಕಾಗುತ್ತದೆ. ಜೈಲು ಶಿಕ್ಷೆಯೂ ಇದೆ. ಈ ಕಾಯ್ದೆಯು ಚಿಕ್ಕಬಳ್ಳಾಪುರ ನಗರದಲ್ಲಿ ಎಷ್ಟರ ಮಟ್ಟಿಗೆ ಜಾರಿಯಾಗುತ್ತಿದೆ..? ಕಸಕ್ಕೆ ಬೆಂಕಿ ಹಚ್ಚಿದವರ ಮೇಲೆ ಕ್ರಮವಹಿಸಲಾಗಿದೆಯೇ..? ಎನ್ನುವ ಬೇಸರ ನಿವಾಸಿಗಳಲ್ಲಿ ಮೂಡಿದೆ.
ನಗರದ ಶಿಡ್ಲಘಟ್ಟ ವೃತ್ತದ ಜೀವನ್ ಆಸ್ಪತ್ರೆ ಮುಂಭಾಗದ ಖಾಲಿ ನಿವೇಶನದಲ್ಲಿನ ಕಸಕ್ಕೆ ಭಾನುವಾರ ಕಿಡಿಗೇಡಿ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಯ ಕೆನ್ನಾಲಿಗೆ ಹೆಚ್ಚಿ ಖಾಲಿ ನಿವೇಶನವನ್ನು ಹೆಚ್ಚು ಆವರಿಸಿದೆ. ಈ ಪರಿಣಾಮ ದಟ್ಟ ಹೊಗೆ ಮೂಡಿತ್ತು. ಇಡೀ ವಾತಾವರಣ ಹೊಗೆಯಿಂದಲೇ ತುಂಬಿತ್ತು. ಜೀವನ ಆಸ್ಪತ್ರೆಯ ಕೊಠಡಿಗಳಲ್ಲಿಯೂ ಹೊಗೆ ದಟ್ಟವಾಗಿ ಆವರಿಸಿತ್ತು. ಯಾವುದಾದರೂ ಅವಘಡವಾಗಿದೆಯೇ ಎನ್ನುವ ಮಟ್ಟಕ್ಕೆ ಬಿಬಿ ರಸ್ತೆಯಲ್ಲಿ ದಟ್ಟವಾಗಿ ಹೊಗೆ ಕಾಣಿಸಿಕೊಂಡಿತ್ತು. ಈ ಹೊಗೆ ಜೀವನ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಉಸಿರುಗಟ್ಟುವಂತೆ ಮಾಡಿತ್ತು.
ಆಸ್ಪತ್ರೆಯ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್, ಹೋಟೆಲ್, ಬೇಕರಿಗಳು ಸಹ ಇದ್ದು, ಹೊಗೆಯ ಧೂಳು ಹೋಟೆಲ್ಗಳನ್ನು ಆವರಿಸಿತ್ತು. 'ಯಾರು ಹೀಗೆ ಬೆಂಕಿ ಹಚ್ಚಿದರೊ ಗೊತ್ತಿಲ್ಲ. ಉಸಿರಾಡುವುದಕ್ಕೆ ಸಮಸ್ಯೆ ಆಗಿದೆ. ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳು, ರೋಗಿಗಳು ಇದ್ದಾರೆ. ಬೆಂಕಿ ಹಚ್ಚಿದವರಿಗೆ ಕನಿಷ್ಠ ಪ್ರಜ್ಞೆಯಾದರೂ ಬೇಡವೇ' ಎಂದು ಸುತ್ತಮುತ್ತಲಿನ ಅಂಗಡಿಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹೊರವಲಯದ ಗೌರಿಬಿದನೂರು ರಸ್ತೆ, ಹಳೇ ಆರ್ಟಿಒ ಕಚೇರಿಯ ಬಳಿಯ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ.
2021ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ್ದ ವಾಯು ಮಾಲಿನ್ಯ ಅತ್ಯಲ್ಪ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ರಾಷ್ಟ್ರದಲ್ಲಿಯೇ ಚಿಕ್ಕಬಳ್ಳಾಪುರ ನಗರ ನಾಲ್ಕನೇ ಸ್ಥಾನ ಪಡೆದಿತ್ತು. ಹೀಗೆ ಕಸಕ್ಕೆ ಬೆಂಕಿ ಹಚ್ಚುವ ಕೆಲಸಗಳು ಅತಿಯಾದರೆ ಪ್ರಶಸ್ತಿ ಇರಲಿ ಉತ್ತಮ ಗಾಳಿಯೂ ದೊರೆಯುವುದಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.