ಚಿಕ್ಕಬಳ್ಳಾಪುರ: ಸುಧಾಕರ್ ಪರ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಪ್ರಚಾರ
ಚಿಕ್ಕಬಳ್ಳಾಪುರ, ನವೆಂಬರ್ 30: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ 'ಅನರ್ಹ' ಸುಧಾಕರ್ ಪರವಾಗಿ ಉಪಚುನಾವಣೆ ಪ್ರಚಾರಕ್ಕೆಂದು ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಆಗಮಿಸಿದ್ದಾರೆ.
ಸುಧಾಕರ್ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿರುವ ಬ್ರಹ್ಮಾನಂದಂ ಅವರನ್ನು ನೋಡಲು ಜನರು ಮುಗಿಬಿದ್ದರು. ಬ್ರಹ್ಮಾನಂದಂ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಜನರು ಸಂತಸಪಟ್ಟರು. ಈ ವೇಳೆ ನೂಕುನುಗ್ಗಲು ಉಂಟಾಗಿ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ನಾನೇ ಬೇರೆ ನನ್ನ ಪ್ರಚಾರದ ಸ್ಟೈಲೇ ಬೇರೆ ಎಂದ ಬಿಜೆಪಿ ಅಭ್ಯರ್ಥಿ
ಕೆಲವು ದಿನಗಳ ಹಿಂದಷ್ಟೆ ಕನ್ನಡದ ಖ್ಯಾತ ನಟಿ, ಚಿಕ್ಕಬಳ್ಳಾಪುರದವರೇ ಆದ ಹರಿಪ್ರಿಯಾ ಅವರು ಸುಧಾಕರ್ ಪರವಾಗಿ ಪ್ರಚಾರ ಮಾಡಿದ್ದರು. ಈಗ ತೆಲುಗು ನಟ ಬ್ರಹ್ಮಾನಂದಂ ಅವರನ್ನು ಪ್ರಚಾರಕ್ಕೆ ಕರೆತಂದಿದ್ದಾರೆ ಸುಧಾಕರ್.
ತೆಲುಗು ಭಾಷಿಕರು ಹೆಚ್ಚಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತೆಲುಗು ನಟರಿಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಬ್ರಹ್ಮಾನಂದಂ ಅವರಿಗಂತೂ ಎಲ್ಲ ವರ್ಗದ, ವಯೋಮಾನದ ಅಭಿಮಾನಿಗಳು ಇದ್ದಾರೆ. ಹಾಗಾಗಿ ಅವರನ್ನು ಪ್ರಚಾರಕ್ಕೆ ಕರೆತರಲಾಗಿದೆ.
ಚಿಕ್ಕಬಳ್ಳಾಪುರ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲು
ಪ್ರಚಾರದ ವೇಳೆ ಮಾತನಾಡಿದ ಬ್ರಹ್ಮಾನಂದಂ, 'ಕ್ಷೇತ್ರದ ಅಭಿವೃದ್ಧಿಗೆ ಸುಧಾಕರ್ ಅವರಿಗೆ ಮತ ನೀಡಿ. ಸುಧಾಕರ್ ಒಳ್ಳೆಯ ತನದ ಬಗ್ಗೆ ಹೇಳಲು ಹೈದರಾಬಾದ್ ನಿಂದ ಇಲ್ಲಿಗೆ ಬಂದಿರುವೆ, ಸುಧಾಕರ್ ಅವರನ್ನು ಗೆಲ್ಲಿಸಿದರೆ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಮತ್ತೆ ಇಲ್ಲಿಗೆ ಬರುವೆ' ಎಂದು ಹೇಳಿದರು.
ವಿಧಾನಸಭೆ ಚುನಾವಣೆ ವೇಳೆಗೆ ಚಿಕ್ಕಬಳ್ಳಾಪುರದಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ನವೀನ್ ಕಿರಣ್ ತಮ್ಮ ಪರವಾಗಿ ಪ್ರಚಾರ ಮಾಡಿಸಲು ಪವನ್ ಕಲ್ಯಾಣ್ ಅವರನ್ನೇ ಕರೆತಂದಿದ್ದರು.