ಫಲಾನುಭವಿಗಳಿಗೆ ಫೆಬ್ರವರಿ 15ರೊಳಗೆ ನಿವೇಶನ ಹಕ್ಕುಪತ್ರ ವಿತರಣೆ: ಚಿಕ್ಕಬಳ್ಳಾಪುರದಲ್ಲಿ ಕೆ.ಸುಧಾಕರ್ ಭರವಸೆ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಫೆಬ್ರವರಿ 15ರೊಳಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ. ಸುಧಾಕರ್ ಭರವಸೆ ನೀಡಿದ್ದಾರೆ. ಹಾಗಾದರೆ ಎಷ್ಟು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಇಲ
ಚಿಕ್ಕಬಳ್ಳಾಪುರ, ಜನವರಿ, 25: ಕ್ಷೇತ್ರದ ಜನರಿಗೆ ಮಾತು ಕೊಟ್ಟಂತೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುತ್ತಿರುವುದು ತಮಗೆ ಧನ್ಯತಾಭಾವ ಮೂಡಿಸಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ವಿಶೇಷ ಗ್ರಾಮಸಭೆಗಳಲ್ಲಿ ಖುದ್ದಾಗಿ ಭಾಗವಹಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಾತಿ, ಗ್ರಾಮ, ಪಕ್ಷ ಯಾವುದನ್ನೂ ಮಾನದಂಡವಾಗಿ ಇಟ್ಟುಕೊಳ್ಳದೆ ಕೇವಲ ನಿವೇಶನ ಮತ್ತು ವಸತಿ ರಹಿತ ಬಡ ಕುಟುಂಬಗಳಿಗೆ ಮಾತ್ರ ಪಾರದರ್ಶಕವಾಗಿ ಎಲ್ಲರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗುತ್ತಿದೆ. ಯಾರೊಬ್ಬರೂ ಒಂದು ಪೈಸೆಯನ್ನೂ ಯಾರಿಗೂ ಕೊಡುವಂತಿಲ್ಲ.ಈ ಕೆಲಸ ಇತರೆ ಎಲ್ಲಾ ಕೆಲಸಗಳಿಗಿಂತ ಸಾರ್ಥಕತೆಯ ಭಾವ ಮೂಡಿಸಿದೆ ಎಂದರು.
ಸಿದ್ದರಾಮಯ್ಯನವರು ಜನರಿಗೆ ಕೊಟ್ಟಿದ್ದು ಅಕ್ಕಿ ಅಲ್ಲ, ಕೇವಲ ಚೀಲ: ಸಚಿವ ಕೆ.ಸುಧಾಕರ್
ಹೊಸಹುಡ್ಯ ಗ್ರಾಮ ಪಂಚಾಯತಿ ಒಂದರಲ್ಲಿಯೇ ನಿವೇಶನ ರಹಿತ 297 ಕುಟುಂಬಗಳಿಗೆ ನಿವೇಶನ ಮತ್ತು ವಸತಿ ರಹಿತ 105 ಕುಟುಂಬಗಳಿಗೆ ಮನೆ ಸೇರಿ ಒಟ್ಟು 402 ಕುಟುಂಬಗಳಿಗೆ ಸೂರು ಕಲ್ಪಿಸಿದ್ದು, ಇದು ಅತ್ಯಂತ ಸಂತಸ ತಂದಿದೆ. ತಾಲೂಕಿನ ಹೊಸಹುಡ್ಯ ಗ್ರಾಮ ಪಂಚಾಯತ್ನ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಫೆಬ್ರವರಿ 15ರೊಳಗೆ ಹಕ್ಕು ಪತ್ರ ವಿತರಿಸಲಾಗುತ್ತದೆ. ಅಲ್ಲದೆ ಇನ್ನೂ 170 ನಿವೇಶನ ಈ ಗ್ರಾಮ ಪಂಚಾಯತ್ನಲ್ಲಿ ಲಭ್ಯವಿದ್ದು, ನಿರ್ಗತಿಕರನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಿ ಪಿಡಿಒಗೆ ನೀಡುವಂತೆ ಸಚಿವರು ಸೂಚಿಸಿದರು.
ಒಟ್ಟು 4 ಸಾವಿರ ಮನೆಗಳ ವ್ಯವಸ್ಥೆ
ಕ್ಷೇತ್ರದ ನಗರ ಸೇರಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿಯೂ ನಿವೇಶನ ಮತ್ತು ಮನೆಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 4 ಸಾವಿರ ಮನೆಗಳನ್ನು ತರಲಾಗಿದೆ. ಇದನ್ನು ಗ್ರಾಮಸಭೆಗಳಲ್ಲಿಯೇ ಹಂಚಿಕೆ ಮಾಡಬೇಕಿದ್ದು, ಯಾವುದೇ ಲೋಪ ನಡೆಯದಂತೆ ಎಚ್ಚರವಹಿಸುವ ಮೂಲಕ ಅರ್ಹರಿಗೆ ಮಾತ್ರ ವಿತರಿಸಲು ಸಚಿವನಾಗಿ ಬಂದಿರುವುದಾಗಿ ಹೇಳಿದರು.
ಭರವಸೆಗಳನ್ನಈಡೇರಿಸಲೂ ಉತ್ಸುಕನಾಗಿದ್ದೇನೆ
ಪಂಚಾಯಿತಿ ಅಧ್ಯಕ್ಷರ ಮನವಿಗೆ ಪ್ರತಿಕ್ರಿಯಿಸಿ, ಈ ಹಿಂದೆ ನೀಡಿದ್ದ ಭರವಸೆಯಂತೆ ಕೃಷ್ಣಾನದಿ ನೀರನ್ನು ಜಿಲ್ಲೆಗೆ ತರುವ ವಿಚಾರದಲ್ಲಿಯೂ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದೇನೆ. ಹಾಗೂ ಮೆಟ್ರೋ ರೈಲನ್ನು ಚಿಕ್ಕಬಳ್ಳಾಪುರಕ್ಕೆ ತರಲು ಈಗಾಗಲೇ ಪ್ರಯತ್ನಿಸಲಾಗಿದೆ. ಈ ಎರಡೂ ಭರವಸೆಗಳನ್ನು ಈಡೇರಿಸಲೂ ನಾನೂ ಉತ್ಸುಕನಾಗಿದ್ದು, ಎಲ್ಲ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.
BJP ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ
ಇನ್ನು ಬೆಲೆ ನಿಯಂತ್ರಣ ಮತ್ತು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶ್ರಮಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು, ರೈತರ ಆದಾಯ ಹೆಚ್ಚಿಸಲು ಹೆಚ್ಚು ಗಮನವನ್ನು ಕೇಂದ್ರೀಕರಿಸಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಗಳ ಮಾರ್ಗದರ್ಶನ ನೀಡಲು ವಿಶೇಷ ಆಸಕ್ತಿ ಹೊಂದಲಾಗಿದೆ. ದೊಡ್ಡ ಕೈಗಾರಿಕಾ ವಲಯ ಇಲ್ಲಿ ಸ್ಥಾಪನೆಯಾಗಲಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
ಶೀಘ್ರದಲ್ಲಿಯೇ ಭೂಮಿ ಪೂಜೆ ನಡೆಯಲಿದೆ
ಈಗಾಗಲೇ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಇಲ್ಲಿಯೇ ಸ್ಥಾಪಿಸಲಾಗುತ್ತಿದೆ. ಶೀಘ್ರದಲ್ಲಿಯೇ ಭೂಮಿ ಪೂಜೆ ನೆರವೇರಿಸಿ, ಪ್ರಾರಂಭ ಮಾಡಲಾಗುತ್ತದೆ. ಹೊಸಹುಡ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದೆ. ಪ್ರಮುಖ ಮೂಲ ಸೌಲಭ್ಯಗಳಾದ ನೀರು, ನಿವೇಶನ, ಮನೆ ಕಲ್ಪಿಸಿರುವುದು ಸಂತಸ ತಂದಿದೆ ಎಂದರು.
ಕಳೆದ 9 ವರ್ಷಗಳಿಂದ ಯೋಜನೆಗಳ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡೋಣ. ಮನೆ ಆದೇಶ ಪತ್ರ ಪಡೆದವರು ಶೀಘ್ರವೇ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಆ ಮೂಲಕ ಪ್ರಗತಿಯತ್ತ ಎಲ್ಲರೂ ಸೇರಿ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಲಕ್ಷೀನರಸಮ್ಮ, ನಾಗರತ್ನಮ್ಮ, ಚಾಂದ್ ಬೇಗಮ್, ಜಗದೀಶ್, ಮುನೇಗೌಡ, ಮುರಳಿ, ತಾಲೂಕು ಪಂಚಾಯತ್ ಇಒ ಮಂಜುನಾಥ್, ಪಿಡಿಒ ಪ್ರದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.