ಅನಾಥ ಹುಡುಗನನ್ನು ಮತ್ತೆ ಅನಾಥ ಮಾಡಬೇಡಿ: ಮತದಾರರಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಮನವಿ
ಚಿಕ್ಕಬಳ್ಳಾಪುರ, ಏಪ್ರಿಲ್ 21: ನಾನು ಸುನಾಮಿಯಲ್ಲ, ಜನರಿಗೆ ಸಂಜೀವಿನಿಯಾಗಿದ್ದೇನೆ. ನನ್ನ ಬೆಂಬಲಕ್ಕೆ ನಿಂತಿರುವ ಜನರ ಸುನಾಮಿಗೆ ವಿರೋಧಿಗಳೆಲ್ಲ ಕೊಚ್ಚಿ ಹೋಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ತಂದೆ - ತಾಯಿಯಿಲ್ಲದೇ ಅನಾಥವಾಗಿ ಬೆಳದಿರುವ ಹುಡುಗ. ಚುನಾವಣೆಗೆ ನಿಂತಿದ್ದಾನೆ ಮತ ಹಾಕಿ ಗೆಲ್ಲಿಸಿ, ಸೋಲಿಸಿ ಮತ್ತೆ ಅನಾಥನನ್ನಾಗಿ ಮಾಡಬೇಡಿ. ನನ್ನನ್ನು ಗೆಲ್ಲಿಸಿಕೊಡಿ ನಿಮ್ಮ ಮಕ್ಕಳನ್ನು ನಾನು ಕಾಪಾಡುತ್ತೇನೆ ಎಂದು ಭರವಸೆ ನೀಡಿದರು.

ನಾನು ಸಂಪಾದಿಸಿರುವ ಪ್ರತಿಯೊಂದು ರೂಪಾಯಿಗೂ ದಾಖಲೆ ನೀಡುತ್ತೇನೆ. ಆದರೆ ನೀವು ನಿಮ್ಮ ಸಂಪಾದನೆಗೆ ದಾಖಲೆ ಕೊಡುತ್ತೀರಾ? ಇಬ್ಬರು ಪ್ರತಿಸ್ಪರ್ಧಿಗಳು ಇದೇ ಶಿಡ್ಲಘಟ್ಟ ವೃತ್ತಕ್ಕೆ ಬಂದರೆ ನಾನು ಚರ್ಚೆಗೂ ಸಿದ್ಧ. ನಾನು ಕಷ್ಟಪಟ್ಟು ಬೆಳೆದಿದ್ದೇನೆ. ಎಂಎಲ್ಎ ಆಗಿ ಏನು ಕೆಲಸಬೇಕು ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಬೇರೆಯರು ಕೊಟ್ಟಂತೆ ನಾನು ಸುಳ್ಳು ಭರವಸೆಗಳನ್ನು ನೀಡಲ್ಲ ಎಂದರು.
ಸಿದ್ದರಾಮಯ್ಯ ಆಧುನಿಕ ಭಗಿರಥ, ಧೈರ್ಯಕ್ಕೆ ಮತ್ತೊಂದು ಹೆಸರು ಡಿ.ಕೆ.ಶಿವಕುಮಾರ್. ಸಿದ್ದರಾಮಯ್ಯನವರು ಹಾಕಿರುವ ರಾಜಕೀಯ ಭೀಕ್ಷೆಯಲ್ಲಿ ಸುಧಾಕರ್ ಇದ್ದಾರೆ. ಕಾಂಗ್ರೆಸ್ ಪಕ್ಷದಿಂದ 2 ಬಾರಿ ಶಾಸಕರಾಗಿ ಉಂಡ ಮನೆಗೆ ದ್ರೋಹ ಬಗೆದು ಬಿಜೆಪಿಗೆ ಹೋಗಿದ್ದಾರೆ. ಪ್ರದೀಪ್ ಈಶ್ವರ್ ಗೆದ್ದರೆ ಕ್ಷೇತ್ರದ ಪ್ರತಿಯೊಬ್ಬರು ಗೆದ್ದಂತೆ, ಪ್ರತಿಯೊಬ್ಬರು ರಾಜರೇ. ನಿಮ್ಮ ಮನೆ ಮಗನಂತೆ ನಾನು ಇರುತ್ತೇನೆ ಎಂದರು.
ಚಿಕ್ಕಬಳ್ಳಾಪುರವನ್ನು ನಾನು ಸಿಂಗಾಪುರ್ ಮಾಡಲ್ಲ, ಚಿಕ್ಕಬಳ್ಳಾಪುರವನ್ನು ಚಿಕ್ಕಬಳ್ಳಾಪುರವಾಗೇ ಬೆಳೆಸುತ್ತೇನೆ. ಸಾವಿರಾರು ಕೈಗಾರಿಕೆಗಳನ್ನು ತರುವುದಾಗಿ ಹೇಳುವುದಿಲ್ಲ. ಯುವಕರೇ ಕಂಪನಿಗಳನ್ನು ಸ್ಥಾಪಿಸುವ ಮಟ್ಟಕ್ಕೆ ಬೆಳೆಸುತ್ತೇನೆ. ಅವರೇ ಇನ್ನೊಂದಿಷ್ಟು ಜನರಿಗೆ ಕೆಲಸ ಕೊಡುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಾನು ನಂಬಿರುವ ದೇವರು ಡಾ.ಬಿ.ಆರ್.ಅಂಬೇಡ್ಕರ್ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ನಿಮಗೆ ನಾನು ಎಂದಿಗೂ ಮೋಸ ಮಾಡುವುದಿಲ್ಲ. ಪ್ರಮಾಣಿಕವಾಗಿ ಕ್ಷೇತ್ರದ ಅಭವೃದ್ಧಿಗೆ ಶ್ರಮಿಸುತ್ತೇನೆ. ಅನಾಥ ಹುಡುಗನನ್ನು ಮತ್ತೆ ಅನಾಥ ಮಾಡಬೇಡಿ. ನನ್ನನ್ನು ಕಾಪಾಡಿಕೊಂಡು ವಿಧಾನಸೌಧಕ್ಕೆ ಕಳುಹಿಸಿಕೊಡಿ. ನಿಮ್ಮ ಎಲ್ಲರ ಮಕ್ಕಳನ್ನು ನಾನು ಕಾಪಾಡುತ್ತೇನೆ. ಇದರಲ್ಲಿ ಅನುಮಾನವೇ ಬೇಡ ಎಂದು ಮನವಿ ಮಾಡಿದರು.
ಜಿಲ್ಲೆಗೆ ಎಚ್.ಎನ್.ವ್ಯಾಲಿ ನೀರಾವರಿ ಯೋಜನೆ ಜಾರಿಗೆ ತಂದಿದ್ದು ನಾನೇ ಎಂದು ಡಾ.ಸುಧಾಕರ್ ಹೇಳಿಕೊಳ್ಳುತ್ತಿದ್ದಾರೆ. ಒಬ್ಬ ಶಾಸಕ ಸಾವಿರಾರು ಕೋಟಿ ಅನುದಾನ ತರಲು ಸಾಧ್ಯವೇ.? ಸಿಎಂ ಸಿದ್ದರಾಮಯ್ಯ, ಸಚಿವರಾಗಿದ್ದ ಕೆ.ಆರ್.ರಮೇಶ್ ಕುಮಾರ್, ಶಿವಶಂಕರರೆಡ್ಡಿ, ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರ ಪ್ರಯತ್ನದಿಂದ ಯೋಜನೆ ಅನುಷ್ಠಾನಕ್ಕೆ ಬಂದಿದೆ ಎಂದರು.
ಇನ್ನೇನು ಚುನಾವಣೆಗೆ ಎರಡು ತಿಂಗಳು ಬಾಕಿ ಇದ್ದಾಗ ವಿವಿಧ ಸಮುದಾಯಗಳಲ್ಲಿ ಮುಖಂಡರನ್ನು ಹುಡುಕಿ ನಾಮನಿರ್ದೇಶನ ಮಾಡಿದ್ದಾರೆ. ಇದರಿಂದಾಗಿ ಏನು ಪ್ರಯೋಜನ. ಭೋಗಸ್ ಹಕ್ಕುಪತ್ರಗಳನ್ನು ಕೊಟ್ಟು ಜನರನ್ನು ಮರಳು ಮಾಡಲು ಹೋಗಿದ್ದಾರೆ. ಹೀಗಾಗಿ ಮೇ 11ರಂದು ಮೆಡಿಕಲ್ ಮಿನಿಷ್ಟರ್ ಅಥವಾ ಮೆಡಿಕಲ್ ಮೇಷ್ಟ್ರು ಶಾಸಕರಾಗಬೇಕೋ ಎನ್ನುವುದನ್ನು ಜನರು ತೀರ್ಮಾನ ಮಾಡಬೇಕು ಎಂದು ಹೇಳಿದರು.












Click it and Unblock the Notifications