ಕಾರ್ಯಕ್ರಮದಲ್ಲಿ ಜೀವಂತ ಹಾವು ಪ್ರದರ್ಶನ; ಜಗ್ಗಿ ವಾಸುದೇವ್ ವಿರುದ್ಧ ದೂರು
ಚಿಕ್ಕಬಳ್ಳಾಪುರ, ಅ 16: ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೀವಂತ ಹಾವನ್ನು ಪ್ರದರ್ಶನ ಮಾಡಿದ್ದ ಇಶಾ ಫೌಂಡೇಶನ್ನ ಸಂಸ್ಥಾಪಕ, ಸದ್ಗುರು ಎಂದು ಕರೆಸಿಕೊಳ್ಳುವ ಜಗ್ಗಿ ವಾಸುದೇವ್ ವಿರುದ್ಧ ದೂರು ದಾಖಲಾಗಿದೆ.
ಶನಿವಾರ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೀವಂತ ಹಾವನ್ನು ಅಕ್ರಮ ಸಾಗಣೆ ಮಾಡಿ ಪ್ರದರ್ಶಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ. ವನ್ಯಜೀವಿಯನ್ನು ನಾಶಪಡಿಸಿದ ಆರೋಪದ ಮೇಲೆ ಸದ್ಗುರು ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
ಇಶಾ ಫೌಂಡೇಷನ್ ಸದ್ಗುರು 'ಸೇವ್ ಸಾಯಿಲ್' ಕಾರ್ಯಕ್ರಮಕ್ಕೆ ಚಾಲನೆ
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಸೊಸೈಟಿ (Society for the Prevention of Cruelty to Animals)ಯ ಸದಸ್ಯ ಮತ್ತು ಉರಗ ತಜ್ಞ ಪೃಥ್ವಿರಾಜ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರಿಗೆ ದೂರು ಸಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಹಾವು ಇನ್ನು ಅರಣ್ಯಾಧಿಕಾರಿಗೆ ಹಸ್ತಾಂತರಿಸಲಾಗಿಲ್ಲ ಎಂದು ಪೃಥ್ವಿರಾಜ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
''ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಉಲ್ಲಂಘನೆಯ ಕುರಿತು ISHA ಫೌಂಡೇಶನ್ನ ಸದ್ಗುರುಗಳು ಸಂಬಂಧಿಸಿದಂತೆ ಈ ದೂರು ನೀಡಲಾಗಿದೆ. ಸದ್ಗುರುಗಳು ಅಕ್ರಮವಾಗಿ ಸೆರೆಹಿಡಿಯಲಾದ, ಅಕ್ರಮವಾಗಿ ಸಾಗಣೆ ಮಾಡಲಾದ ಜೀವಂತ ಹಾವನ್ನು ಪ್ರದರ್ಶಿಸಿದ್ದಾರೆ. ಇದು ವನ್ಯಜೀವಿ ಸಂರಕ್ಷಣಾ ಕಾಯಿದೆ ಯ ಶೆಡ್ಯೂಲ್ 2 ರ ಅಡಿಯಲ್ಲಿ ಅಪರಾಧ. ಅಕ್ಟೋಬರ್ 9 ಮತ್ತು 10 ರಂದು ಘಟನೆ ಸಂಭವಿಸಿದೆ. ಇಲ್ಲಿಯವರೆಗೆ ಹಾವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿಲ್ಲ'' ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಶಾ ಫೌಂಡೇಶನ್ ತಮಿಳುನಾಡಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡುವ ಮೂಲಕ ಅರಣ್ಯ ನಾಶಕ್ಕೆ ಹಲವು ಪ್ರಯತ್ನಗಳನ್ನು ಮಾಡಿದೆ ಎಂದು ಪೃಥ್ವಿರಾಜ್ ಆರೋಪಿಸಿದ್ದಾರೆ.
ಅಕ್ಟೋಬರ್ 9 ರಂದು, ರಾಜ್ಯದಲ್ಲಿ ಇಶಾ ಫೌಂಡೇಶನ್ನ ಹೊಸ ಕೇಂದ್ರವನ್ನು ಘೋಷಿಸಲು ಸದ್ಗುರು ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಹೊಸ ಕೇಂದ್ರದಲ್ಲಿ 112 ಅಡಿ ಎತ್ತರದ ಶಿವನ ಪ್ರತಿಮೆಯೂ ನಿರ್ಮಾಣ ಹಂತದಲ್ಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭಾಗವಹಿಸಿದ್ದರು.
ದೂರಿನ ಬಗ್ಗೆ ಇಶಾ ಫೌಂಡೇಶನ್ ಅಥವಾ ಸದ್ಗುರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.