ಸಿಎಂ ಆಗಮನ ಹಿನ್ನೆಲೆ ಯರಗೋಳ್ ರಸ್ತೆಗೆ ದಿಢೀರ್ ಡಾಂಬರೀಕರಣ
ಕೋಲಾರ, ಅಕ್ಟೋಬರ್, 31: ಹಲವು ವರ್ಷಗಳಿಂದ ಹಾಳಾಗಿದ್ದರೂ ದುರಸ್ತಿ ಕಾಣದೆ ಕಡೆಗಣಿಸಲಾಗಿದ್ದ ಯರಗೋಳ್ ರಸ್ತೆ ಈಗ ಮುಖ್ಯಮಂತ್ರಿಗಳು ಬರುತ್ತಿರುವ ಹಿನ್ನೆಲೆ ದಿಢೀರ್ ಡಾಂಬರೀಕರಣ ಕಾಣುತ್ತಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.
ನವೆಂಬರ್ 10ರಂದು ಯರಗೋಳ್ ಡ್ಯಾಂ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಂಪುಟ ಸಚಿವರು ಆಗಮಿಸುತ್ತಿರುವ ಹಿನ್ನೆಲೆ ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಕಾಣುತ್ತಿದೆ. ಕಳೆದ ನಾಲ್ಕು ದಿನಗಳಿಂದ ಲೋಕೋಪಯೋಗಿ ಇಲಾಖೆ ಯರಗೋಳ್ ರಸ್ತೆಗೆ ಡಾಂಬರೀಕರಣಗೊಳಿಸುವ ಕೆಲಸದಲ್ಲಿ ತಲ್ಲೀಣರಾಗಿದ್ದಾರೆ.

ಹಲವು ವರ್ಷಗಳಿಂದ ಹಾಳಾಗಿರುವ ಈ ರಸ್ತೆಯನ್ನು ದುರಸ್ಥಿಗೊಳಿಸಿ ಎಂದು ವಾಹನ ಸವಾರರು ಇಲಾಖೆ ಹಾಗೂ ಜನಪ್ರತಿನಿಧಿಗಳನ್ನು ಕಾಡಿದರೂ ಸ್ಪಂದಿಸಿರಲಿಲ್ಲ. ಆದರೆ ಈಗ ಸಿಎಂ ಆಗಮಿಸುತ್ತಿರುವ ನೆಪದಲ್ಲಾದರೂ ಈ ರಸ್ತೆಗೆ ಕಾಯಕಲ್ಪ ದೊರೆಯುತ್ತಿರುವುದಕ್ಕೆ ವಾಹನ ಸವಾರರಲ್ಲಿ ಸಂತಸ ಮೂಡಿದೆ.
ಯರಗೋಳ್ ಕನಮನಹಳ್ಳಿ, ದೊಡ್ಡಪೊನ್ನಾಂಡಹಳ್ಳಿ ಸೇರಿ ಹಲವು ಗಡಿ ಗ್ರಾಮಗಳ ಜನರು ಹಳ್ಳಗಳಿಂದ ತುಂಬಿರುವ ರಸ್ತೆಯಲ್ಲಿ ಸಂಚರಿಸಿ ಹಲವು ಬಾರಿ ಅವಘಡಕ್ಕೆ ತುತ್ತಾಗಿದ್ದರು. ಬಾರಿ ಗಾತ್ರದ ವಾಹನಗಳು ಬಂದರೆ ಭಾರೀ ಪ್ರಮಾಣದಲ್ಲಿ ದೂಳು ಏಳುವ ಕಾರಣ ದ್ವಿಚಕ್ರ ವಾಹನ ಸೇರಿ ಸಣ್ಣ ಪ್ರಮಾಣದ ವಾಹನಗಳನ್ನು ಚಲಾಯಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಡುತ್ತಿದ್ದರು.
ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಬಲಮಂದೆ ಕನಮನಹಳ್ಳಿ ಮಾರ್ಗದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಅಭಿವೃದ್ದಿ ಕಾಣದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಗಡಿಗ್ರಾಮಗಳ ಜನರು ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದ ರಸ್ತೆಯಲ್ಲೇ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಸಂಚರಿಸುತ್ತಿದ್ದರು.
ಈ ರಸ್ತೆ ಅಭಿವೃದ್ದಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ 7.70 ಕೋಟಿ ಅನುದಾನ ತಂದು 2021ರ ಡಿಸೆಂಬರ್ ತಿಂಗಳಲ್ಲಿ ಬಲಮಂದೆಯಿಂದ ಕನಮನಹಳ್ಳಿ ಗ್ರಾಮದವರೆಗೂ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದರು. ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಯನ್ನು ಡಾಂಬರೀಕರಣ ಹೆಸರಲ್ಲಿ ರಸ್ತೆಯನ್ನು ಸಂಪೂರ್ಣ ಅಗೆದು ಜೆಲ್ಲಿ ಹಾಕಿದರು. ಆದರೆ ವರ್ಷಗಳೇ ಕಳೆದರೂ ಕಾಮಗಾರಿ ಆರಂಭವಾಗದೆ ಕಡೆಗಣ ಸಲಾಗಿತ್ತು.
ಇದರಿಂದ ತಮಿಳುನಾಡಿಗೆ ಹೋಗಿ ಬರಲು ಹಾಗೂ ಯರಗೋಳ್ ಡ್ಯಾಂ ವೀಕ್ಷಣೆಗೆ ಆಗಮಿಸುತ್ತಿದ್ದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವರಿಗೆ ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡುವಂತಾಗಿ ನಿತ್ಯ ಶಪಿಸಿಕೊಂಡೇ ತೆರಳುತ್ತಿದ್ದರು. ಹಲವು ಬಾರಿ ರಸ್ತೆ ದುರಸ್ಥಿಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆದರೂ ಕ್ಯಾರೆ ಎನ್ನದ ಸರ್ಕಾರ ಈಗ ಮುಖ್ಯಮಂತ್ರಿ ಆಗಮನದ ಹಿನ್ನೆಲೆ ದಿಢೀರನೆ ಡಾಂಬರೀಕರಣ ಕಾಣುತ್ತಿರುವುದು ವಾಹನ ಸವಾರರಲ್ಲಿ ನೆಮ್ಮದಿ ಮೂಡಿಸಿದೆ.
ತಮಿಳುನಾಡು ಹಾಗೂ ಯರಗೋಳ್ ಡ್ಯಾಂ ವೀಕ್ಷಣೆಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ರಸ್ತೆ ಡಾಂಬರೀಕರಣ ಕೇವಲ ಸಿಎಂ ಬಂದು ಹೋಗಲಿಕ್ಕೆ ಮಾತ್ರ ಹಾಕದೆ ಶಾಶ್ವತವಾಗಿ ಉಳಿಯುವಂತೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.












Click it and Unblock the Notifications