ಮಧುರೈ ಮೀನಾಕ್ಷಿ ದೇವಾಲಯದ 'ಪಾದುಕೆ' ಬಗ್ಗೆ ಹರಿದಾಡುತ್ತಿರುವ ಬೆಚ್ಚಿಬೀಳಿಸುವ ವಿಷಯ
ವಿಶ್ವವಿಖ್ಯಾತ, ತಮಿಳುನಾಡಿನಲ್ಲಿರುವ ಮಧುರೈ ಮೀನಾಕ್ಷಿ ದೇವಾಲಯದ ಪಾದುಕೆಯ ಬಗ್ಗೆ, ಆರು ವರ್ಷದ ಹಿಂದೆ, ಆಂಗ್ಲ ಮಾಧ್ಯಮವೊಂದು ಪ್ರಕಟಿಸಿದ್ದ ಲೇಖನದಲ್ಲಿನ ಅಂಶಗಳು ಈಗ ವೈರಲ್ ಆಗುತ್ತಿವೆ.
Recommended Video
ವೈಗೈ ನದಿ ದಡದ ಮೇಲೆ ಇರುವ ಪ್ರಾಚೀನ ನಗರ ಮಧುರೈಯಲ್ಲಿ, ಬಣ್ಣ ಬಣ್ಣದ ಗೋಪುರಗಳಿಂದ ಭಕ್ತರನ್ನು ಆಕರ್ಷಿಸುವ ದೇಗುಲವೇ ಮೀನಾಕ್ಷಿ ಅಮ್ಮನ ದೇವಸ್ಥಾನ. 2,500 ವರ್ಷಗಳ ಇತಿಹಾಸ ಈ ದೇವಾಲಯ ಹೊಂದಿದೆ ಎಂದು ಹೇಳಲಾಗುತ್ತದೆ.
12 ಭವ್ಯ ಗೋಪುರಗಳನ್ನು ಒಳಗೊಂಡಿರುವ ಈ ದೇಗುಲದಲ್ಲಿ ಶಿವ ಹಾಗೂ ಪಾರ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ಗೋಪುರಗಳಲ್ಲಿ ದಕ್ಷಿಣ ಗೋಪುರವು ಅತ್ಯಂತ ಎತ್ತರ ಹಾಗೂ ಪುರಾತನ ಗೋಪುರ.
ಈಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಇಸವಿ 1812-1828 ಅವಧಿಯದ್ದು. ಆ ವೇಳೆ, ಮಧುರೈಯಲ್ಲಿ ಬ್ರಿಟಿಷ್ ಕಲೆಕ್ಟರ್ ಆಗಿದ್ದ, ಈಸ್ಟ್ ಇಂಡಿಯ ಕಂಪೆನಿಯ ರೂಸ್ ಪೀಟರ್ ಮತ್ತು ಮೀನಾಕ್ಷಿ ದೇವಾಲಯದ ಪಾದುಕೆ ಬಗೆಗಿನ ಕುತೂಹಲಕಾರಿ ಅಂಶವನ್ನು ಲೇಖನದಲ್ಲಿ ಬರೆಯಲಾಗಿದೆ. ಅದು ಹೀಗಿದೆ:

ಈಸ್ಟ್ ಇಂಡಿಯನ್ ಕಂಪೆನಿಯ ರೂಸ್ ಪೀಟರ್
ಕಲೆಕ್ಟರ್ ರೂಸ್ ಪೀಟರ್, ಕ್ರಿಶ್ಚಿಯನ್ ಸಮುದಾಯದವರಾಗಿದ್ದರೂ, ಹಿಂದೂ ಮತ್ತು ಸ್ಥಳೀಯ ನಂಬಿಕೆ, ಸಂಪ್ರದಾಯಕ್ಕೆ ಗೌರವ ನೀಡುತ್ತಿದ್ದವರು. ದೇವಾಲಯದ ಆಡಳಿತ ಮುಖ್ಯಸ್ಥರೂ ಆಗಿದ್ದ ಪೀಟರ್, ದೇವಾಲಯದಲ್ಲಿ ನಡೆದುಕೊಂಡು ಬರುತ್ತಿರುವ ಪೂಜಾ ಪದ್ದತಿಗಳಿಗೆ ಯಾವುದೇ ಚ್ಯುತಿ ಬರದಂತೆ ನೋಡಿಕೊಳ್ಳುತ್ತಿದ್ದರು. ಉತ್ತಮ ಆಡಳಿತಗಾರನೂ ಆಗಿದ್ದ ಪೀಟರ್ ನನ್ನು ಸ್ಥಳೀಯರು ಪೀಟರ್ ಪಾಂಡ್ಯನ್ ಎಂದೇ ಕರೆಯುತ್ತಿದ್ದರು. (ಮೀನಾಕ್ಷಿ ದೇವಾಲಯ ನಿರ್ಮಾಣಗೊಂಡಿದ್ದು ಕುಲಶೇಖರ ಪಾಂಡ್ಯ ಎನ್ನುವ ಅರಸನ ಕಾಲದಲ್ಲಿ).

ಮೀನಾಕ್ಷಿ ದೇವಾಲಯ
ಮೀನಾಕ್ಷಿ ದೇವಾಲಯ ಪೀಟರ್ ಅವರ ಮನೆ ಮತ್ತು ಕಚೇರಿಯ ನಡುವೆ ಇದ್ದಿದ್ದರಿಂದ, ಪ್ರತೀ ದಿನಾ ದೇವಾಲಯದ ಎದುರಿನಿಂದಲೇ ಕಚೇರಿಗೆ ಹಾದು ಹೋಗಬೇಕಾಗಿತ್ತು. ಕುದುರೆಯ ಮೂಲಕ ಕಚೇರಿಗೆ ಹೋಗುತ್ತಿದ್ದ ಪೀಟರ್, ದೇವಾಲಯದ ಮುಂಭಾಗಕ್ಕೆ ಬಂದಾಗ, ಕುದುರೆಯಿಂದ ಇಳಿದು, ಶೂ ಬಿಚ್ಚಿ, ನಮಸ್ಕರಿಸಿ ಹೋಗುತ್ತಿದ್ದ.

ವೈಗೈ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿತ್ತು
ಒಂದು ದಿನ ಮಧುರೈ ಭಾಗದಲ್ಲಿ ಅತಿವೃಷ್ಟಿ ಉಂಟಾಗಿ ವೈಗೈ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿತ್ತು. ಗಾಢ ನಿದ್ದೆಯಲ್ಲಿದ್ದ ಪೀಟರ್ ನನ್ನು ಕಾಲ್ಗೆಜ್ಜೆಯ ಸದ್ದೊಂದು ಎಬ್ಬಿಸಿತು. ಸದ್ದು ಎಲ್ಲಿಂದ ಬಂತು ಎಂದು ಮನೆಯಿಂದ ಹೊರಗೆ ಬಂದು ನೋಡಿದಾಗ ರೇಷ್ಮೆ ಉದ್ದಲಂಗ, ಆಭರಣ ಧರಿಸಿಕೊಂಡಿದ್ದ ಮೂರು ವರ್ಷದ ಬಾಲಕಿಯೊಬ್ಬಳು ಹೊರಗೆ ನಿಂತಿದ್ದಳು.

ಮೀನಾಕ್ಷಿ ಅಮ್ಮನೇ ನನ್ನನ್ನು ಉಳಿಸಿದ್ದು ಎನ್ನುವ ನಂಬಿಕೆಗೆ ಬಂದ ಪೀಟರ್
ಪೀಟರ್ ಹೆಸರನ್ನು ಕರೆದು ನನ್ನ ಹಿಂದೆ ಬಾ ಎಂದು ಆ ಹುಡುಗಿ ದೇವಾಲಯದ ಕಡೆಗೆ ಓಡಲಾರಂಭಿಸಿದಳು. ಪೀಟರ್ ಕೂಡಾ ಬಾಲಕಿಯ ಹಿಂದೆನೇ ಓಡಲಾರಂಭಿಸಿ, ಹಿಂದಿರುಗಿ ನೋಡಿದಾಗ, ಪೀಟರ್ ಮನೆಗೆ ಸಿಡಿಲು ಬಡಿದಿತ್ತು. ಅಷ್ಟರಲ್ಲಿ ಆ ಬಾಲಕಿ ಕೂಡಾ ಅದೃಶ್ಯಳಾಗಿದ್ದಳು. ಮೀನಾಕ್ಷಿ ಅಮ್ಮನೇ ನನ್ನನ್ನು ಉಳಿಸಿದ್ದು ಎನ್ನುವ ನಂಬಿಕೆಗೆ ಬಂದ ಪೀಟರ್, ತಾಯಿಗೆ ಕಾಣಿಕೆ ನೀಡಲು ಮುಂದಾದ.

ಮೀನಾಕ್ಷಿಗೆ ಪಾದುಕೆ ನೀಡಲು ಪೀಟರ್ ನಿರ್ಧರಿಸಿದ
ದೇವಾಲಯದ ಅರ್ಚಕರನ್ನು ಸಂಪರ್ಕಿಸಿ ಮೀನಾಕ್ಷಿಗೆ ಪಾದುಕೆ ನೀಡಲು ಪೀಟರ್ ನಿರ್ಧರಿಸಿದ. 412 ಕೆಂಪು ಹರಳು,72 ಪಚ್ಚೆ, 80 ವಜ್ರದ ಹರಳಿನ ಜೊತೆಗೆ, ಚಿನ್ನದ ಪಾದುಕೆಯನ್ನು ಮೀನಾಕ್ಷಿ ತಾಯಿಗೆ ಅರ್ಪಿಸಿದ. ಪೀಟರ್ ಪಾದುಕಂ ಎಂದೇ ಹೆಸರಾಗಿರುವ ಈ ಅಪರೂಪದ ಪಾದುಕೆಯನ್ನು ಚೈತ್ರ ಮಾಸದ ಉತ್ಸವದ ವೇಳೆ ಮೀನಾಕ್ಷಿ ಅಮ್ಮನ ಉತ್ಸವ ಮೂರ್ತಿಯ ಪಾದಕ್ಕೆ ತೊಡಿಸಲಾಗುತ್ತದೆ. ತನ್ನ ಸೇವಾವಧಿ ಮುಗಿದರೂ ಇಂಗ್ಲೆಂಡ್ ಗೆ ವಾಪಸ್ ಹೋಗದೆ, ತಾಯಿಯ ಸೇವೆಯನ್ನು ಮಾಡುತ್ತಾ ಪೀಟರ್ ಮಧುರೈಯಲ್ಲೇ ಅಂತಿಮ ದಿನವನ್ನು ಕಳೆದ.












Click it and Unblock the Notifications