ತ.ನಾಡು ವಿಶ್ವಾಸಮತ, ಅಸಮಾಧಾನ ಇದ್ದರೆ ಕೋರ್ಟ್ ಗೆ ಹೋಗಿ
ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ನಡೆದ ವಿಶ್ವಾಸ ಮತ ಸಾಬೀತು ಪ್ರಕ್ರಿಯೆ ಬಗ್ಗೆ ಒ.ಪನ್ನೀರ್ ಸೆಲ್ವಂ ಬಣ ಹಾಗೂ ಡಿಎಂಕೆ ರಾಜ್ಯಪಾಲರಿಗೆ ದೂರು ನೀಡಿದೆ. ಈ ಬಗ್ಗೆ ಅಸಮಾಧಾನ ಇದ್ದರೆ ನೀವು ಕೋರ್ಟ್ ಗೆ ಹೋಗಬಹುದು ಎಂದು ಅವರು ಸಲಹೆ ನೀಡಿದ್ದಾರೆ
ಚೆನ್ನೈ, ಫೆಬ್ರವರಿ 20: ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ನಡೆದ ವಿಶ್ವಾಸಮತ ಸಾಬೀತಿನ ಬಗ್ಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ವರದಿ ಕೇಳಿದ್ದು, ಮೂಲಗಳ ಪ್ರಕಾರ ಈ ವಿಚಾರದಲ್ಲಿ ಅವರು ಮಧ್ಯಪ್ರವೇಶಿಸುವ ಸಾಧ್ಯತೆ ಇಲ್ಲ. ವಿಶ್ವಾಸ ಮತ ಸಾಬೀತಿನ ವೇಳೆ ನಿಯಮಗಳನ್ನು ಪಾಲಿಸಿಲ್ಲ ಎಂದು ಡಿಎಂಕೆ ಹಾಗೂ ಒ.ಪನ್ನೀರ್ ಸೆಲ್ವಂ ಬಣ ದೂರು ನೀಡಿದೆ.
ಇದೇ ವೇಳೆ ಈ ವಿಚಾರವಾಗಿ ತನಿಖೆ ಮಾಡುವಂತೆ ಸಹ ಕೇಳಲಾಗಿದೆ. ಈ ಬಗ್ಗೆ ದೂರು ನೀಡಲು ತೆರಳಿದ್ದ ನಿಯೋಗಕ್ಕೆ ರಾಜ್ಯಪಾಲರು, ವಿರೋಧ ಪಕ್ಷಗಳು ಹಾಜರಿದ್ದರೂ ರಹಸ್ಯ ಮತದಾನ ಅಂತ ಮಾಡಿದ್ದರೂ ವಿಶ್ವಾಸಮತ ಸಾಬೀತು ಪಡಿಸುತ್ತಿದ್ದರು. ಏಕೆಂದರೆ, ಇ.ಪಳನಿಸ್ವಾಮಿ ಅವರಿಗೆ 122 ಶಾಸಕರ ಬೆಂಬಲವಿತ್ತು. ಆ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಎಂದಿದ್ದಾರೆ.[ತಮಿಳುನಾಡು ಹೈಡ್ರಾಮ: ಸ್ಟಾಲಿನ್ ಸೇರಿ 2,000 ಜನರ ಮೇಲೆ ಎಫ್ಐಆರ್]
ಇದರ ಜತೆಗೆ ಸಭಾಧ್ಯಕ್ಷರು ಕಲಾಪ ಹೇಗೆ ನಡೆಯಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ವರದಿ ಕೇಳ್ತೀನಿ, ಆದರೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಇಂಥ ವಿಚಾರಗಳ ಬಗ್ಗೆ ಸಭಾಧ್ಯಕ್ಷರು ತೀರ್ಮಾನ ಕೈಗೊಳ್ಳಬೇಕು. ಹೇಗೆ ಮತದಾನ ನಡೆಯಬೇಕು ಎಂದು ನಿರ್ಧರಿಸುವ ಅಧಿಕಾರ ಅವರಿಗೆ ಇರುತ್ತದೆ ಎಂದು ಕೂಡ ವಿದ್ಯಾಸಾಗರ್ ರಾವ್ ಹೇಳಿದ್ದಾರೆ.[ಪಳನಿಸ್ವಾಮಿ ಸಿಎಂ ಆಗಿ ತುಂಬ ಕಾಲ ಉಳಿಯಲ್ಲ ಅನ್ನೋಕೆ ಇಲ್ಲಿವೆ 5 ಕಾರಣ]
ಒಂದು ವೇಳೆ ವಿಶ್ವಾಸ ಮತ ಸಾಬೀತಿನ ಬಗ್ಗೆ ಅಸಮಾಧಾನ ಇದ್ದರೆ ನ್ಯಾಯಾಂಗದ ಮೊರೆ ಹೋಗಿ. ನ್ಯಾಯಾಂಗವು ವರದಿ ತರಿಸಿಕೊಂಡು ವಿಶ್ವಾಸ ಮತ ಸಾಬೀತಿನ ಪ್ರಕ್ರಿಯೆ ನ್ಯಾಯಸಮ್ಮತವಾಗಿದ್ದೇ ಅಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಹೊಸದಾಗಿ ವಿಶ್ವಾಸ ಮತ ಸಾಬೀತಿಗೆ ಕೂಡ ನ್ಯಾಯಾಂಗವು ಸೂಚನೆ ನೀಡಬಹುದು ಎಂದು ಕೂಡ ರಾಜ್ಯಪಾಲರು ನಿಯೋಗಕ್ಕೆ ಹೇಳಿದ್ದಾರೆ.