ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸರ್ಕಾರ ಬದ್ಧ : ಒಪಿಎಸ್
ಚೆನ್ನೈ, ಮೇ 20: ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆಗಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ ಆಡಳಿತಾರೂಢ ಎಐಎಡಿಎಂಕೆ, ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಬದ್ಧವಾಗಿರುವುದಾಗಿ ತಿಳಿಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ತಮಿಳುನಾಡು ಸರ್ಕಾರವು 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವೆಲ್ಲೂರು ಜೈಲಿನಲ್ಲಿರುವ ನಳಿನಿ ಸೇರಿದಂತೆ ಅಪರಾಧಿಗಳನ್ನು ಬಿಡುಗಡೆ ಮಾಡಲು ನಿರ್ಣಯ ಕೈಗೊಂಡಿತ್ತು. ಆದರೆ, ಈ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಕಾನೂನು ಸಮರ ಮುಂದುವರೆದಿತ್ತು.
ಅಪರಾಧಿಗಳ ತ್ವರಿತ ಬಿಡುಗಡೆಗೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರಂಜನ್ ಗೋಗೊಯ್, ನವೀನ್ ಸಿನ್ಹಾ, ಕೆಎಂ ಜೋಸೆಫ್ ಅವರಿದ್ದ ನ್ಯಾಯಪೀಠವು, ಈ ಸಂಬಂಧ ರಾಜ್ಯದ ರಾಜ್ಯಪಾಲ(ಬಾನ್ವಾರಿಲಾಲ್ ಪುರೋಹಿತ್) ರ ಅಭಿಪ್ರಾಯ ಮತ್ತು ನಿರ್ದೇಶನಗಳನ್ನು ಪಾಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು.

ಸಂವಿಧಾನದ ಪರಿಚ್ಛೇಧ 161ರ ಅನ್ವಯ ರಾಜ್ಯಪಾಲರಿಗೆ ಕೆಲವು ವಿಶೇಷ ಪ್ರಕರಣಗಳಲ್ಲಿ ಅಪರಾಧಿಗಳ ಶಿಕ್ಷೆ ಪ್ರಮಾಣ ತಗ್ಗಿಸುವ ಹಾಗೂ ಕ್ಷಮಾದಾನ ನೀಡುವ ಅಧಿಕಾರವಿರುತ್ತದೆ. ಆದರೆ, ರಾಜ್ಯಪಾಲರು ಇದಕ್ಕೆ ಇನ್ನೂ ಅನುಮತಿ ಕೊಟ್ಟಿಲ್ಲ.
ಪ್ರಭಾಕರನ್ ನೇತೃತ್ವದ ಎಲ್ ಟಿಟಿಐನ ಆತ್ಮಾಹುತಿ ದಳದ ಮೂಲಕ ಶ್ರೀಪೆರಂಬದೂರಿನಲ್ಲಿ ಚುನಾವಣಾ ಪ್ರಚಾರ ನಿರತ ರಾಜೀವ್ ಗಾಂಧಿ ಅವರನ್ನು ಆತ್ಮಾಹುತಿ ದಾಳಿ ಮೂಲಕ ಮೇ 21, 1991ರಂದು ಹತ್ಯೆ ಮಾಡಲಾಗಿತ್ತು. ನಳಿನಿ, ಮುರುಗನ್, ಎಜೆ ಪೆರಾರಿವಾಲನ್, ರಾಬರ್ಟ್ ಫಿಯೋಸ್, ಜಯಕುಮಾರ್, ರವಿಚಂದ್ರನ್ ಅವರಿಗೆ ಶಿಕ್ಷೆಯಾಗಿದೆ. 28 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ.












Click it and Unblock the Notifications