ಎಷ್ಟೇ ದೊಡ್ಡ ಗುಂಪು ಒಟ್ಟಾಗಿ ಬಂದರೂ ನಾನು ಬಡವರ ಪರ: ಮೋದಿ
ಮದುರೈ (ತಮಿಳುನಾಡು), ಜನವರಿ 27: ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅವರು ಎಷ್ಟು ದೊಡ್ಡ ಗುಂಪು ರಚನೆ ಮಾಡಿಕೊಂಡರು ಎಂಬುದು ನನಗೆ ಮುಖ್ಯವಲ್ಲ. ನಾನಂತೂ ಬಡವರ ಪರ ನಿಲ್ಲುವುದನ್ನು ಮುಂದುವರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದ್ದಾರೆ.
ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಶಂಕು ಸ್ಥಾಪನೆ ನೆರವೇರಿಸಿದ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಿಂದ ದೇಶವನ್ನು ಆಚೆಗೆ ತರಲು ಕೇಂದ್ರ ಸರಕಾರ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ಮೋದಿ ಅಲ್ಲದಿದ್ದರೆ ಭಾರತದ ಮುಂದಿನ ಪ್ರಧಾನಿ ಯಾರಾಗಬೇಕು?
"ಯಾವುದೇ ವ್ಯಕ್ತಿ ದೇಶವನ್ನು ಕೊಳ್ಳೆ ಹೊಡೆದಿದ್ದರೆ ಅಥವಾ ವಂಚನೆ ಮಾಡಿದ್ದರೆ ಅಂಥವರನ್ನು ನ್ಯಾಯದ ಎದುರಿಗೆ ತಂದು ನಿಲ್ಲಿಸುತ್ತೇವೆ. ಅಂಥವರು ಭಾರತದಲ್ಲಿರಲಿ ಅಥವಾ ವಿದೇಶದಲ್ಲಿರಲಿ" ಎಂದು ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿಚಾರದಲ್ಲಿ ಮಾತನಾಡಿದ್ದಾರೆ.
ಯಾರೆಲ್ಲ ಸರಕಾರದ ಗುತ್ತಿಗೆಯಲ್ಲಿ, ರಕ್ಷಣಾ ವ್ಯವಹಾರಗಳಲ್ಲಿ ಮತ್ತು ಸಮಾಜ ಕಲ್ಯಾಣ ಯೋಜನೆಗಳಲ್ಲಿ ತಾವು ಲಾಭ ಮಾಡಿಕೊಂಡರೋ ಅಂಥವರು ಈಗ ಅದರ ಪರಿಣಾಮ ಎದುರಿಸುತ್ತಿದ್ದಾರೆ. ಆದ್ದರಿಂದ ಅವರೆಲ್ಲ ಒಟ್ಟಾಗಿ ಬಂದಿದ್ದಾರೆ. ಈ ವಾಚ್ ಮನ್ ನನ್ನು ತೊಲಗಿಸಲು ನಾವೆಲ್ಲ ಒಟ್ಟಾಗಬೇಕು ಎಂದು ಬೇರೆಲ್ಲವನ್ನೂ ಪಕ್ಕಕ್ಕಿರಿಸಿ ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಭಯ ಹಾಗೂ ನಕಾರಾತ್ಮಕ ಆಲೋಚನೆಯಿಂದ ದೊಡ್ಡ ಗುಂಪು ಕಟ್ಟಿಕೊಂಡಿದ್ದಾರೆ. ನರೇಂದ್ರ ಮೋದಿ ಬಡವರ ಜತೆಗೆ ಗಟ್ಟಿಯಾಗಿ ನಿಲ್ಲುವುದು ಸತ್ಯ. ಈ ನಕಾರಾತ್ಮಕ ಶಕ್ತಿಗಳ ಗುಂಪನ್ನು ತಿರಸ್ಕರಿಸಿ ಎಂದು ಮದುರೈನ ಜನರು, ತಮಿಳುನಾಡಿನ ಯುವ ಜನರನ್ನು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಪ್ರಧಾನಿ ಮೋದಿ ಕೈಚಾಚಿದರೆ, ಆ ಬಾಲಿವುಡ್ ನಟಿ ಕೈ ಮುಗಿಯೋದಾ?
ಸಮಾಜದ ಎಲ್ಲ ವರ್ಗದ ಜನರಿಗೆ ಉದ್ಯೋಗಾವಕಾಶಗಳು ಹಾಗೂ ಶಿಕ್ಷಣ ಒದಗಿಸಬೇಕು ಎಂಬ ಬದ್ಧತೆ ಕೇಂದ್ರ ಸರಕಾರಕ್ಕೆ ಇದೆ. ಆ ಸಂಕಲ್ಪದಿಂದಲೇ ಸರಕಾರದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡಾ ಹತ್ತರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ ಎಂದು ಅವರು ಹೇಳಿ, ತಮಿಳುನಾಡಿನಲ್ಲಿ ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಅನುಮಾನ ಹಾಗೂ ಅಪನಂಬಿಕೆ ಮೂಡಿಸುತ್ತಿದ್ದಾರೆ. ಇದು ದುರದೃಷ್ಟ ಎಂದು ಮೇಲ್ಜಾತಿಯವರಿಗೆ ಮೀಸಲಾತಿ ವಿಚಾರದಲ್ಲಿ ಮಾತನಾಡಿದ್ದಾರೆ.