ನೀರಿನಲ್ಲಿ ಮುಳುಗಿ ಒಂದೇ ಗ್ರಾಮದ ಏಳು ಬಾಲಕಿಯರು ಸಾವು
ಚೆನ್ನೈ, ಜೂನ್ 6: ತಮಿಳುನಾಡಿನ ಕಡಲೂರು ಸಮೀಪದ ಎ.ಕುಚಿಪಾಳ್ಯಂನಲ್ಲಿ ಗೆದಿಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆಕ್ ಡ್ಯಾಂ ಬಳಿ ಗುಂಡಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕಿಯರು, ಮೂವರು ಯುವತಿಯರು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಆಯನ ಕುರುಂಜಿಪಾಡಿ ಗ್ರಾಮದ ಆರ್.ಪ್ರಿಯದರ್ಶಿನಿ (15), ಸಹೋದರಿ ದಿವ್ಯ ದರ್ಶಿನಿ (10), ಎ.ಮೋನಿಶಾ (16), ಎಂ.ನವನೀತ (18), ಕೆ.ಪ್ರಿಯಾ (18), ಎಸ್.ಸಂಗವಿ (16) ಮತ್ತು ಎಂ.ಕುಮುದಾ (18) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರು ಕೂಚಿಪಾಳ್ಯಂ ಗ್ರಾಮದ ನಿವಾಸಿಗಳಾಗಿದ್ದಾರೆ.
ಬೆಂಗಳೂರಿನಲ್ಲಿ ನೀರುಪಾಲಾದ ಮೂವರು ಯುಕರು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ
ಗೆದಿಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆಕ್ ಡ್ಯಾಂನಿಂದ 300 ಮೀಟರ್ ದೂರದಲ್ಲಿರುವ 15 ಅಡಿ ಆಳದ ಹೊಂಡದ ಬಳಿ ಬಾಲಕಿಯರು ಸ್ನಾನಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಉತ್ತಮ ಮಳೆಯಾದ ಕಾರಣ ಹೊಂಡದಲ್ಲಿ ನೀರು ತುಂಬಿತ್ತು. ಬಾಲಕಿಯರು ಸ್ನಾನ ಮಾಡಲು ನೀರಿಗೆ ಇಳಿದಿದ್ದಾರೆ ಅವರು ಮುಳುಗಲು ಆರಂಭಿಸುತ್ತಿದ್ದಂತೆ ಉಳಿದವರು ಅವರನ್ನು ರಕ್ಷಿಸಲು ಪ್ರಯತ್ನಿಸಿದರು, ಆದರೆ ರಕ್ಷಿಸಲು ಹೋದವರು ಕೂಡ ನೀರಿನಲ್ಲಿ ಮುಳುಗಿದ್ದಾರೆ.
ಆಸ್ಪತ್ರೆ ಬಳಿ ಪೋಷಕರ ಆಕ್ರಂದನ
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದು, ಕಡಲೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದುರಂತದ ಸುದ್ದಿ ಹರಡುತ್ತಿದ್ದಂತೆ, ಸಂತ್ರಸ್ತರ ಕುಟುಂಬ ಸದಸ್ಯರು ಆಸ್ಪತ್ರೆ ಬಳಿ ಜಮಾಯಿಸಿದರು. ಒಂದೇ ಗ್ರಾಮದ 7 ಬಾಲಕಿಯರು ಮೃತಪಟ್ಟಿದ್ದರಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಬಾಲಕಿಯರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸೆಲ್ಫಿ ಹುಚ್ಚು: ನದಿಯಲ್ಲಿ ಮುಳುಗಿ ಮಹಿಳೆ ಸಾವು
ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ
ಚೆಕ್ಡ್ಯಾಂ ಬಳಿ ಹಲವು ಹೊಂಡಗಳಿದ್ದು, ಬಾಲಕರು, ಬಾಲಕಿಯರು ಹೆಚ್ಚಾಗಿ ಈಜಾಡಲು ಬರುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ. ದುರ್ಘಟನೆಯಿಂದ ಎಚ್ಚೆತ್ತಿರುವ ಅಧಿಕಾರಿಗಳು, ಈ ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ರೀತಿಯ ದುರಂತಗಳನ್ನು ತಡೆಗಟ್ಟಲು ನದಿ, ಹೊಂಡಗಳಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ಘಟನೆ ಬಗ್ಗೆ ಮಾಹಿತಿ ಪಡೆದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಾಲಕಿಯರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಮತ್ತೆ ಈ ರೀತಿ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸ್ಟಾಲಿನ್ ಖಡಕ್ ಸೂಚನೆ ನೀಡಿದ್ದಾರೆ. ಈ ರೀತಿಯ ತುರ್ತು ಸಮಯದಲ್ಲಿ ಸಹಾಯ ಮಾಡಲು ಪ್ರಥಮ ಚಿಕಿತ್ಸಾ ತರಬೇತಿ ನೀಡುವಂತೆ ಹೇಳಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ 25 ಸಾವಿರ ಹಣ
ಬಾಲಕಿಯರು ಮೃತಪಟ್ಟಿರುವ ಹೊಂಡದ ಮಣ್ಣು ಪರೀಕ್ಷೆ ನಡೆಸುವುದಾಗಿ ಪನ್ನೀರ್ ಸೆಲ್ವಂ ತಿಳಿಸಿದ್ದಾರೆ. ಹೊಂಡ ನಿರ್ಮಾಣವಾಗಿರುವ ವಿಧಾನದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು. ಮೃತ ಏಳು ಮಂದಿಯ ಕುಟುಂಬಗಳಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಸೆಲ್ವಂ ತಲಾ 25 ಸಾವಿರ ರೂಪಾಯಿ ನೀಡಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಎಂ.ಆರ್.ಕೆ. ಪನ್ನೀರಸೆಲ್ವಂ ಮತ್ತು ಕಡಲೂರು ಜಿಲ್ಲಾಧಿಕಾರಿ ಕೆ.ಬಾಲಸುಬ್ರಮಣ್ಯಂ ಆಸ್ಪತ್ರೆಯಲ್ಲಿ ಮೃತ ಬಾಲಕಿಯರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.