ತಮಿಳುನಾಡು: 100ಕ್ಕೂ ಅಧಿಕ ಶಾಸಕರಿಂದ ರಾಜಿನಾಮೆ ?
ಚೆನ್ನೈ, ಸೆಪ್ಟೆಂಬರ್ 19: ಕಳೆದ ವರ್ಷಾಂತ್ಯದಿಂದಲೂ ಹಲವಾರು ನಾಟಕೀಯ ಬದಲಾವಣೆಗಳ ಗೂಡಾಗಿರುವ ತಮಿಳುನಾಡು ರಾಜಕೀಯ ರಂಗ ಈಗ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದೆ.
ಚೆನ್ನೈ: ಬಂಡೆದ್ದ ಎಐಎಡಿಎಂಕೆ 19 ಶಾಸಕರ ವಜಾಕ್ಕೆ ವ್ಹಿಪ್ ಜಾರಿ
ತಮಿಳುನಾಡು ವಿಧಾನಸಭೆಯಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ ಎಂಬ ಕಾರಣವೊಡ್ಡಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳ ಶಾಸಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಲು ನಿರ್ಧರಿಸಲು ಮುಂದಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ, ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಸಿಡಿದೆದ್ದಿದ್ದ ಐಐಎಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರ ಬೆಂಬಲಿತ 18 ಶಾಸಕರನ್ನು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಸೆ. 18ರಂದು ಶಾಸಕತ್ವ ಸ್ಥಾನದಿಂದ ಅಮಾನತುಗೊಳಿಸಿದ್ದರು.
ಇದರ ಬೆನ್ನಲ್ಲೇ, ಅಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದೆ. ಸ್ಪೀಕರ್ ನಿರ್ಧಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಹಾಗಾಗಿ, ಶಾಸಕರ ಅಮಾನತು ವಿಚಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಸೆ. 20ರಂದು ಇದರ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳಲಿದ್ದು, ಅಂದೇ ಬಗ್ಗೆ ತೀರ್ಪು ಹೊರಬೀಳಲಿದೆ.
ಹಾಗೊಂದು ವೇಳೆ, ಮದ್ರಾಸ್ ಹೈಕೋರ್ಟ್, ಸ್ಪೀಕರ್ ನಿರ್ಧಾರವನ್ನು ಎತ್ತಿ ಹಿಡಿದರೆ, ಎಲ್ಲಾ ವಿಪಕ್ಷ ಶಾಸಕರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ.
ಹಾಗಾಗೆ, ಸೆ. 20ರ ಸಂಜೆ ತೀರ್ಪು ಹೊರಬಿದ್ದಲ್ಲಿ, ಡಿಎಂಕೆ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಇತರ ವಿಪಕ್ಷ ಶಾಸಕರ ಸಭೆ ನಡೆಯಲಿದೆ. ಅಲ್ಲಿ ಮುಂದಿನ ತೀರ್ಮಾನವನ್ನು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.