ತಮಿಳುನಾಡಿನಲ್ಲಿ ಭಾರಿ ಮಳೆ: 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಚೆನ್ನೈ ನವೆಂಬರ್ 10: ಚೆನ್ನೈನಲ್ಲಿ ಮಳೆಯ ಅರ್ಭಟ ಜೋರಾಗಿದೆ. ಚೆನ್ನೈ ಮತ್ತು ಹತ್ತಿರದ ಚೆಂಗೆಲ್ಪೇಟ್, ತಿರುವಳ್ಳೂರು, ಕಾಂಚೀಪುರಂ ಮತ್ತು ವಿಲ್ಲುಪುರಂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತಡೆರಹಿತ ಭಾರೀ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ ನಿರೀಕ್ಷೆ ಇದೆ. ನವೆಂಬರ್ 11 ರ ಸಂಜೆ ವೇಳೆಗೆ ಹವಾಮಾನ ವ್ಯವಸ್ಥೆಯು ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ತಮಿಳುನಾಡಿನ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಉತ್ತರದ ಜಿಲ್ಲೆಗಳಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. "ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ರಾತ್ರಿ 8 ಗಂಟೆಯ ನಂತರ ವಿಶೇಷವಾಗಿ ಉತ್ತರ ಪ್ರದೇಶಗಳಲ್ಲಿ ಮಳೆ ತೀವ್ರಗೊಂಡಿದೆ" ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನವೆಂಬರ್ 11 ರ ಸಂಜೆಯ ವೇಳೆಗೆ ಹವಾಮಾನ ವ್ಯವಸ್ಥೆಯು ಉತ್ತರ ತಮಿಳುನಾಡು ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ಕಾರೈಕಲ್ ಮತ್ತು ಶ್ರೀಹರಿಕೋಟಾ ನಡುವೆ, ಪುದುಚೇರಿಯ ಉತ್ತರಕ್ಕೆ ಸಮೀಪದಲ್ಲಿ ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ
ಇನ್ನೂ ಮಳೆ ತರಿಸುವ ಮೋಡಗಳು ಚೆನ್ನೈನಿಂದ ಪೂರ್ವ-ಆಗ್ನೇಯಕ್ಕೆ 430 ಕಿಲೋಮೀಟರ್ ಮತ್ತು ಪುದುಚೇರಿಯ ಪೂರ್ವ-ಆಗ್ನೇಯಕ್ಕೆ 420 ಕಿಮೀ ದೂರದಲ್ಲಿದ್ದು ಇದು ನವೆಂಬರ್ 11 ರ ಮುಂಜಾನೆ ಪಶ್ಚಿಮ ವಾಯವ್ಯ ದಿಕ್ಕಿನಲ್ಲಿ ಚಲಿಸಿ ಮತ್ತು ಉತ್ತರ ತಮಿಳುನಾಡು ಕರಾವಳಿಯ ಬಳಿ ತಲುಪುವ ಸಾಧ್ಯತೆಯಿದೆ. ನಂತರ ನವೆಂಬರ್ 11 ರ ಸಂಜೆಯ ವೇಳೆಗೆ ಇದು ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಅತ್ಯಂತ ಮತ್ತು ಹೆಚ್ಚಿನ ಇತರ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವುದು ಎಂದು ನಿರೀಕ್ಷಿಸಲಾಗಿದೆ.
ತಮಿಳುನಾಡಿನ 20 ಜಿಲ್ಲೆಗಳಿಗೆ ರೆಡ್ ಅಲರ್ಟ್
ಮುಂದಿನ ಎರಡು ದಿನಗಳಲ್ಲಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 250 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಕಮಿಷನರ್ ಗಗನ್ದೀಪ್ ಎಸ್ ಬೇಡಿ ಹೇಳಿದ್ದಾರೆ. ಹವಾಮಾನ ಮುನ್ಸೂಚನೆಯ ಬೆನ್ನಲ್ಲೆ ನವೆಂಬರ್ 11 ರಂದು ಚೆನ್ನೈ ಸೇರಿದಂತೆ ತಮಿಳುನಾಡಿನ 20 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
6 ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ
ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಟಿಎನ್ಎಸ್ಡಿಎಂಎ) ತೂತುಕುಡಿ, ವಿಲ್ಲುಪುರಂ, ತಿರುನೆಲ್ವೇಲಿ, ನಾಗಪಟ್ಟಣಂ, ಕಡಲೂರು ಮತ್ತು ಚೆಂಗಲ್ಪೆಟ್ಟು ಜಿಲ್ಲೆಗಳಿಗೆ ನವೆಂಬರ್ 11 ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. 6 ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಮಳೆ ಮುನ್ಸೂಚನೆಯಿಂದ 9 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ನವೆಂಬರ್ 11 ರಂದು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗೆಲ್ಪೇಟ್, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವರೂರು ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ವಿಮಾನ ಹಾರಾಟ ರದ್ದು
ಜೊತೆಗೆ ಬುಧವಾರದಂದು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಚೆನ್ನೈಗೆ ಆಗಮಿಸುವ ನಾಲ್ಕು ಮತ್ತು ಚೆನ್ನೈನಿಂದ ಹೊರಡುವ ನಾಲ್ಕು ವಿಮಾನಗಳನ್ನು ಬುಧವಾರ ರದ್ದುಗೊಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಐದು ಜನರು ಸಾವನ್ನಪ್ಪಿದ್ದಾರೆ. 530 ಮನೆಗಳಿಗೆ ಹಾನಿಯಾಗಿದೆ ಮತ್ತು 1,700 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.