ತಮಿಳುನಾಡಿನಲ್ಲಿ ವರುಣನ ಆರ್ಭಟ: ನಾಲ್ವರು ಬಲಿ, ಆರೆಂಜ್ ಅಲರ್ಟ್ ಘೋಷಣೆ
ಚೆನ್ನೈ, ನವೆಂಬರ್ 09: ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಇತರೆ ಪ್ರದೇಶಗಳಲ್ಲಿ ವರುಣನ ಆರ್ಭಟ ನಿಲ್ಲುತ್ತಿಲ್ಲ. ಈವರೆಗೆ ನಾಲ್ವರು ಈ ಮಳೆಯಿಂದ ಉಂಟಾದ ಅವಘಡದಲ್ಲಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಚೆನ್ನೈ ಹಾಗೂ ಬೇರೆ ಪ್ರದೇಶಗಳಲ್ಲಿ ಇಂದೂ ಕೂಡಾ ಭಾರೀ ಮಳೆ ಆಗುವ ಸಾಧ್ಯತೆಗಳು ಇದೆ ಎಂದು ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಚೆನ್ನೈ ಹಾಗೂ ತಮಿಳುನಾಡಿನ ಇತರೆ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಹಲವಾರು ಅವಘಡಗಳು ಸಂಭವಿಸಿದೆ. ಈಗಾಗಲೇ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 263 ಹಟ್ಟಿಗಳು ಹಾಗೂ 70 ಮನೆಗಳಿಗೆ ಹಾನಿ ಉಂಟಾಗಿದೆ. ಈ ನಡುವೆ ಸುಮಾರು 16 ಹಸುಗಳು ಸಾವನ್ನಪ್ಪಿದೆ. 300 ಕ್ಕೂ ಅಧಿಕ ಮಂದಿಯನ್ನು ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಚೆನ್ನೈ ಮಳೆ: ಅಗತ್ಯ ಸೇವೆ ಹೊರತುಪಡಿಸಿ ಸರ್ಕಾರಿ ಕಚೇರಿಗಳಿಗೆ ರಜೆ
ಶನಿವಾರ ಮುಂಜಾನೆಯಿಂದ ಚೆನ್ನೈ, ಚೆಂಗಲ್ಪೇಟೆಯ ಉಪನಗರಗಳಾದ ಕಂಚೀನಪುರಂ, ತಿರುವಳ್ಳೂರು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯತ್ತಲಿದೆ. ಶನಿವಾರ ರಾತ್ರಿಯಾಗುತ್ತಿದ್ದಂತೆ ಮಳೆಯು ಭಾರೀ ಅಧಿಕವಾಗಿದ್ದು ನೆರೆಗೆ ಕಾರಣವಾಗಿದೆ. 2015 ರ ನೆರೆಯ ಬಳಿಕ ಚೆನ್ನೈನಲ್ಲಿ ಈಗ ನೆರೆ ಉಂಟಾಗಿದೆ ಎಂದು ಮಾಧ್ಯಮಗಳ ವರದಿಗಳು ಉಲ್ಲೇಖ ಮಾಡಿದೆ.
ಇನ್ನು ಈ ನಡುವೆ ಚೆನ್ನೈ ಹಾಗೂ ತಮಿಳುನಾಡಿನ ಬೇರೆ ಪ್ರದೇಶಗಳಲ್ಲಿ ಮಂಗಳವಾರ ಇನ್ನೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಗಳು ಇದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಪುದುಚೇರಿಯಲ್ಲಿಯೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಮಳೆಯ ಆರ್ಭಟದಿಂದಾಗಿ ತಮಿಳುನಾಡಿನಲ್ಲಿ ಭಾರೀ ಅವಘಡಗಳು ಉಂಟಾಗಿದ್ದು, ಈಗ ಹವಾಮಾನ ಇಲಾಖೆ ಮತ್ತಷ್ಟು ಮಳೆ ಅಧಿಕವಾಗುವ ಎಚ್ಚರಿಕೆಯನ್ನು ನೀಡಿದೆ.
ಚೆನ್ನೈನಲ್ಲಿ ಭಾರೀ ಮಳೆ; ತಿಳಿಯಬೇಕಾದ 10 ಅಂಶಗಳು
ಪ್ರದೇಶಗಳಲ್ಲಿ ತುಂಬಿರುವ ನೀರನ್ನು ತೆಗೆಯುವ ನಿಟ್ಟಿನಲ್ಲಿ ಚೆನ್ನೈ ಕಾರ್ಪೊರೇಷನ್ ಪಂಪ್ ಸೆಟ್ಗಳನ್ನು ಅಳವಡಿಕೆ ಮಾಡಿದೆ. ಈ ಪಂಪ್ ಸೆಟ್ಗಳ ಮೂಲಕ ಸುಮಾರು ಐನ್ನೂರು ಪ್ರದೇಶಗಳಲ್ಲಿ ತುಂಬಿರುವ ನೀರನ್ನು ಖಾಲಿ ಮಾಡುವ ಪ್ರಯತ್ನವನ್ನು ಚೆನ್ನೈ ಕಾರ್ಪೊರೇಷನ್ ಮಾಡುತ್ತಿದೆ. ಇನ್ನು 1,00,000 ದಷ್ಟು ಆಹಾರದ ಪ್ಯಾಕೆಟ್ಗಳನ್ನು ಮುಂಜಾನೆಯ ಉಪಾಹಾರವಾಗಿ ನೀಡಲಾಗಿದೆ. ನಿರಾಶ್ರಿತರ ಕೇಂದ್ರದಲ್ಲಿ ಆಹಾರ, ವಸತಿ ಹಾಗೂ ಔಷಧಿಯನ್ನು ಒದಗಿಸಲಾಗುತ್ತಿದೆ. ಭಾನುವಾರ ಮಧ್ಯಾಹ್ನದವರೆಗೆ ಈ ನೆರೆ ಪೀಡಿತ ಪ್ರದೇಶದ 2,02,350 ಮಂದಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ನಾವು ನೀರಿನ ಚರಂಡಿಗಳನ್ನು ನಿರ್ಮಲಗೊಳಿಸಿದ್ದ ಕಾರಣದಿಂದಾಗಿ ಪ್ರಸ್ತುತ ನೀರಿನ ಪ್ರಮಾಣವು ಇಳಿಕೆ ಕಾಣುತ್ತಿದೆ. 21 ಸೆಂಟಿ ಮೀಟರ್ ಮಳೆಯೂ ಈಗ ಸವಾಲಾಗಿದೆ. ಒಳಚರಂಡಿಯು ತುಂಬಿ ಹೋಗಿದೆ," ಎಂದು ಗ್ರೇಟರ್ ಚೆನ್ನೈನ ಕಾರ್ಪೋರೇಷನ್ ಆಯುಕ್ತರಾದ ಗಗನ್ದೀಪ್ ಸಿಂಗ್ ಭೇಡಿ ಹೇಳಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆಗಳು ಇರುವ ಕಾರಣದಿಂದಾಗಿ ರಕ್ಷಣೆ ಕಾರ್ಯಾಚರಣೆಗೆ ಬೋಟುಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಸ್ಟ್ಯಾಲಿನ್ ನಿರಾಶ್ರಿತರ ಕೇಂದ್ರಕ್ಕೆ ಎಂ ಕೆ ಸ್ಟಾಲಿನ್ ಭೇಟಿ
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಹಾಗೆಯೇ ರಕ್ಷಣಾ ಪಡೆಯೊಂದಿಗೆ ಸೇರಿ ತಾವು ಕೂಡಾ ಅಗತ್ಯ ವಸ್ತುಗಳನ್ನು ಜನರಿಗೆ ಹಂಚುವ ಕಾರ್ಯವನ್ನು ಮಾಡಿದ್ದಾರೆ. ಚೆನ್ನೈ, ತಿರುವಳ್ಳೂರು, ಚೆಂಗಲ್ಪೇಟ್ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಎರಡು ದಿನಗಳ ಕಾಲ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಿದ್ದಾರೆ. ಇಂದು ಎಂಟು ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಮುಖ್ಯಮಂತ್ರ ಅವಲೋಕನ ಮಾಡಲಿದ್ದಾರೆ. ಹಾಗೆಯೇ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ಹಂಚಲಿದ್ದಾರೆ. "ಯಾರು ಚೆನ್ನೈಗೆ ಮರಳಿ ಬರಲು ಮುಂದಾಗಿದ್ದರೋ ಅವರು ಈಗಲೇ ಮರಳಿ ಬರಬಾರದು. ಪರಿಸ್ಥಿತಿ ಹತೋಟಿಗೆ ಬಂದಿಲ್ಲ," ಎಂದು ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)