ತಮಿಳುನಾಡಿನಲ್ಲಿ ಸಡಿಲಿಕೆಯೊಂದಿಗೆ ಲಾಕ್ಡೌನ್ ವಿಸ್ತರಣೆ: ರಾತ್ರಿ 11ರವರೆಗೆ ಹೋಟೆಲ್ಸ್, ಶಾಪ್ಸ್ ಓಪನ್
ಚೆನ್ನೈ, ಅಕ್ಟೋಬರ್ 14: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದ್ದಂತೆ ಜನ ಜೀವನ ಸಹಜ ಸ್ಥಿತಿಯತ್ತ ಮರುಕಳಿಸುತ್ತಿದೆ. ತಮಿಳಿನಾಡಿನಲ್ಲೂ ಹಂತ ಹಂತವಾಗಿ ಕೊರೊನಾ ಲಾಕ್ಡೌನ್ ಸಡಿಲಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಿದ ತಮಿಳುನಾಡು ಸರ್ಕಾರ, ಗುರುವಾರ ಲಾಕ್ಡೌನ್ ಅನ್ನು ಅಕ್ಟೋಬರ್ 31 ರವರೆಗೆ ಸಡಿಲಿಕೆಗಳೊಂದಿಗೆ ವಿಸ್ತರಿಸಿದೆ. ಕೊರೊನಾ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಎಂಕೆ ಸ್ಟಾಲಿನ್ ಸರ್ಕಾರ, ಅಂಗಡಿಗಳು ಮತ್ತು ಹೋಟೆಲ್ಗಳನ್ನು ರಾತ್ರಿ 11 ಗಂಟೆಯವರೆಗೆ ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ವಾರದಲ್ಲಿ 3 ದಿನ ಧಾರ್ಮಿಕ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ಕೊರೊನಾ ಹರಡುವ ಭೀತಿಯಿಂದ ಬಂದ್ ಮಾಡಲಾಗಿದ್ದ ಧಾರ್ಮಿಕ ಕ್ಷೇತ್ರಗಳಿಗೆ ಸ್ಟಾಲಿನ್ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈ ಬಾರಿ ಬಿಡುಗಡೆ ಮಾಡಿದ ಕೊರೊನಾ ಹೊಸ ಮಾರ್ಗಸೂಚಿಯಲ್ಲಿ ವಾರದಲ್ಲಿ ಮೂರು ದಿನ ಧಾರ್ಮಿಕ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ವಾರದ ಕೊನೆಯಲ್ಲಿ ಅಂದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಧಾರ್ಮಿಕ ಸಂಸ್ಥೆಗಳು ಕಾರ್ಯ ನಿರ್ವಹಿಸಲು ತಮಿಳುನಾಡು ಸರ್ಕಾರ ಅನುವು ಮಾಡಿಕೊಟ್ಟಿದೆ.
ನವೆಂಬರ್ 1 ರಿಂದ ನರ್ಸರಿ ಶಾಲೆಗಳು ಆರಂಭ
ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಇಳಿಕೆಯಾಗುತ್ತಿದ್ದರಿಂದ ಕೆಲ ಕ್ಷೇತ್ರಗಳಿಗೆ ಸಡಿಲಿಕೆ ನೀಡಲಾಗಿದೆ. ನವೆಂಬರ್ 1 ರಿಂದ ಕಡಲತೀರಗಳನ್ನು ತೆರೆಯಲು ಮುಖ್ಯಮಂತ್ರಿಗಳ ಹೊಸ ಕೊರೊನಾ ಮಾರ್ಗಸೂಚಿಯಲ್ಲಿ ನಿರ್ಧರಿಸಲಾಗಿದೆ. ಆದರೆ ಅಂತ್ಯಕ್ರಿಯೆಯಲ್ಲಿ 50 ಜನ ಭಾಗಿಯಾಗಲು ಮತ್ತು ಮದುವೆ ಸಮಾರಂಭಗಳಲ್ಲಿ 100 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಮತ್ತೊಂದೆಡೆ, ರಾಜ್ಯ ಸರ್ಕಾರ ನವೆಂಬರ್ 1 ರಿಂದ ಷರತ್ತುಬದ್ಧವಾಗಿ ಪ್ಲೇಸ್ಕೂಲ್ಗಳು, ನರ್ಸರಿ ಶಾಲೆಗಳು (ಎಲ್ಕೆಜಿ, ಯುಕೆಜಿ) ಮತ್ತು ಅಂಗನವಾಡಿಗಳನ್ನು ಪುನಃ ತೆರೆಯಲು ಅನುಮತಿ ನೀಡಲು ನಿರ್ಧರಿಸಿದೆ. ಶಾಲಾ ಅಧಿಕಾರಿಗಳಿಗೆ ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾರ್ಗಸೂಚಿಗಳ ಪ್ರಕಾರ, ಶಾಲಾ ಅಧಿಕಾರಿಗಳು ಪೋಷಕರು ಸಂಪೂರ್ಣ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು.

ಆದಾಗ್ಯೂ, ರಾಜ್ಯ ಸರ್ಕಾರವು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲಿನ ನಿಷೇಧವನ್ನು ಮುಂದುವರಿಸುವುದಾಗಿ ಹೇಳಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು:
ರಾಜ್ಯದಲ್ಲಿ ಬುಧವಾರ 1,280 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ರಾಜ್ಯದ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 26,82,137 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 19 ಜನರು ಈ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಈವರೆಗೆ ರಾಜ್ಯದಲ್ಲಿ 35,833 ಜನ ಸೋಂಕಿಗೆ ಬಲಿಯಾಗಿದ್ದಾರೆ.
ಚೆನ್ನೈ ಮತ್ತು ಕೊಯಮತ್ತೂರು ಕ್ರಮವಾಗಿ 173 ಮತ್ತು 145 ಹೊಸ ಪ್ರಕರಣಗಳನ್ನು ದಾಖಲಿಸಿವೆ. ಏಳು ಜಿಲ್ಲೆಗಳು ಎರಡು ಅಂಕಿಗಳ ಹೊಸ ಪ್ರಕರಣಗಳು ದಾಖಲಾಗಿದ್ದು, 23 ಜಿಲ್ಲೆಗಳಲ್ಲಿ ಯಾವುದೇ ಹೊಸ ಸಾವು ಸಂಭವಿಸಿಲ್ಲ. ಪೆರಂಬಲೂರು ಮತ್ತು ತೆಂಕಾಸಿ ಕ್ರಮವಾಗಿ ಎರಡು ಸೋಂಕುಗಳನ್ನು ಸೇರಿಸುವ ಮೂಲಕ ಅತ್ಯಂತ ಕಡಿಮೆ ಹೊಸ ಸೋಂಕುಗಳನ್ನು ದಾಖಲಿಸಿದೆ.












Click it and Unblock the Notifications