ತಮಿಳುನಾಡು ರಾಜ್ಯಪಾಲರು ಆಸ್ಪತ್ರೆಗೆ ದಾಖಲು
ಚೆನ್ನೈ, ಆಗಸ್ಟ್ 02: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜುಲೈ 29ರಿಂದ ಅವರು ರಾಜಭವನದಲ್ಲಿ ಕ್ವಾರಂಟೈನ್ನಲ್ಲಿದ್ದರು.
ಕಳೆದ ವಾರ ತಮಿಳುನಾಡು ರಾಜಭವನದ 84 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಆದ್ದರಿಂದ ರಾಜ್ಯಪಾಲರು ಕ್ವಾರಂಟೈನ್ಗೆ ಒಳಗಾಗಿದ್ದರು.
ಬನ್ವಾರಿಲಾಲ್ ಪುರೋಹಿತ್ (81)ರನ್ನು ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ರಾಜಭವನ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯಪಾಲರು ಆರೋಗ್ಯವಾಗಿದ್ದಾರೆ.

ವೈದ್ಯರ ತಂಡ ರಾಜ್ಯಪಾಲರ ಆರೋಗ್ಯದ ಬಗ್ಗೆ ನಿರಂತರ ತಪಾಸಣೆಯನ್ನು ಮಾಡುತ್ತಿದೆ. ರಾಜ್ಯಪಾಲರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಏಕೆ? ಎಂದು ರಾಜಭವನ ಮಾಹಿತಿ ನೀಡಿಲ್ಲ.
ಜುಲೈ 23ರಂದು ತಮಿಳುನಾಡು ರಾಜ್ಯಪಾಲರ ಕಚೇರಿ 23 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಜುಲೈ 29ರಂದು ಮತ್ತೆ ಮೂವರು ಸಿಬ್ಬಂದಿಗೆ ಸೋಂಕು ತಗುಲಿದ್ದು ಖಚಿತವಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ರಾಜಭವನದ ಉಳಿದ 38 ಸಿಬ್ಭಂದಿಗಳಿಗೂ ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡಿಸಲಾಗಿತ್ತು. ಇವರಲ್ಲಿ 35 ಜನರ ವರದಿ ನೆಗೆಟಿವ್ ಬಂದಿತ್ತು. ಸೋಂಕು ತಗುಲಿದ್ದ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ರಾಜಭವನದ 84 ಸಿಬ್ಬಂದಿಗಳ ಪೈಕಿ ಯಾರೂ ಸಹ ರಾಜ್ಯಪಾಲರ ಸಂಪರ್ಕಕ್ಕೆ ಬಂದಿರಲಿಲ್ಲ ಎಂದು ರಾಜಭವನ ಹೇಳಿದೆ. 2017ರ ಸೆಪ್ಟೆಂಬರ್ 30ರಿಂದ ಬನ್ವಾರಿಲಾಲ್ ಪುರೋಹಿತ್ ತಮಿಳುನಾಡು ರಾಜ್ಯಪಾಲರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.












Click it and Unblock the Notifications