"ಅಮ್ಮಾ" ಸರ್ಕಾರದಿಂದ ರೈತರಿಗೆ 24 ಗಂಟೆ ವಿದ್ಯುತ್; ಚುನಾವಣೆ ಸಮೀಪದಲ್ಲಿ ಸಿಎಂ ಘೋಷಣೆ
ಚೆನ್ನೈ, ಫೆಬ್ರುವರಿ 13: ಇನ್ನು ಮುಂದೆ ರೈತರಿಗೆ 24 ಗಂಟೆಗಳ ಅವಧಿ ವಿದ್ಯುತ್ ಲಭ್ಯವಾಗಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಿಸಿದ್ದಾರೆ. ಉದುಮಲೈಪೆಟ್ಟೈನಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಮೆರವಣಿಗೆ ಹಮ್ಮಿಕೊಂಡಿದ್ದ ಸಂದರ್ಭ ಮಾತನಾಡಿದ ಅವರು, "ರೈತರಿಗೆ ಇನ್ನು ಮುಂದೆ ಪಂಪ್ ಸೆಟ್ಗಳಿಗಾಗಿ 24 ಗಂಟೆಗಳ ಕಾಲ ಮೂರು ಹಂತದ ವಿದ್ಯುತ್ ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.
ಈ ಹಿಂದೆ ರೈತರು ಪಂಪ್ ಸೆಟ್ ಕಾರ್ಯನಿರ್ವಹಣೆಗಾಗಿ 24 ಗಂಟೆಗಳ ಕಾಲ ವಿದ್ಯುತ್ಗೆ ಬೇಡಿಕೆ ಇಟ್ಟಿದ್ದರು. ಆ ಮನವಿಯನ್ನು ಒಪ್ಪಿಕೊಂಡು "ಅಮ್ಮಾ ಸರ್ಕಾರ" ವಿದ್ಯುತ್ ನೀಡುತ್ತಿದೆ ಎಂದು ಘೋಷಿಸಿದರು.
ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದ ರೈತರು 12 ಗಂಟೆಗಳ ವಿದ್ಯುತ್ ಹಾಗೂ ಬೇರೆ ಪ್ರದೇಶಗಳಲ್ಲಿ ಪಂಪ್ ಸೆಟ್ ಗಳಿಗೆ ಆರು ಗಂಟೆಗಳ ವಿದ್ಯುತ್ ಪಡೆಯುತ್ತಿದ್ದಾರೆ.

"ಇದು ರೈತರ ಸರ್ಕಾರ. ರೈತರೇ ಇಲ್ಲಿ ಸಿಎಂ. ನಮ್ಮ ಸರ್ಕಾರ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದೆ. ಹಲವು ರೀತಿಗಳಲ್ಲಿ ರೈತರಿಗೆ ನಾವು ನೆರವಾಗುತ್ತಿದ್ದೇವೆ" ಎಂದು ಹೇಳಿದರು. ಇದೇ ಸಂದರ್ಭ ಪಶುವೈದ್ಯಕೀಯ ಕಾಲೇಜು ಸ್ಥಾಪನೆ, ಒಳಚರಂಡಿ, ಕುಡಿಯುವ ನೀರಿನ ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಸ್ತಾಪ ಮಾಡಿದರು.
ಏನೇ ಯೋಜನೆಗಳು ಘೋಷಣೆಯಾದರೂ ನನ್ನಿಂದ ನಡೆಯುತ್ತಿರುವ "ಅಮ್ಮಾ ಸರ್ಕಾರ" ತಕ್ಷಣವೇ ಜಾರಿ ಮಾಡುತ್ತದೆ ಎಂದ ಅವರು, ಡಿಎಂಕೆ ಕುರಿತು ಮಾತನಾಡಿ, ಡಿಎಂಕೆ ರಾಜಕೀಯ ಪಕ್ಷವಲ್ಲ, ಕಾರ್ಪೊರೇಟ್ ಕಂಪನಿ. ಅದರಲ್ಲಿ ಸ್ಟಾಲಿನ್ ಅಧ್ಯಕ್ಷ ಹಾಗೂ ಅವರ ಕುಟುಂಬ ಸದಸ್ಯರಾದ ಉದಯನಿಧಿ, ಕನಿಮೊಳಿ ಹಾಗೂ ದಯಾನಿಧಿ ಇವರೆಲ್ಲಾ ನಿರ್ದೇಶಕರು ಎಂದು ಟೀಕಿಸಿದ್ದಾರೆ.
ಜನರಿಗೆ ನೆರವಾಗುವ ಯೋಜನೆಗಳಿಗೆ ಸಂಬಂಧಿಸಿದಂತೆ ಮಾತ್ರ ಎಐಎಡಿಎಂಕೆ ಕೇಂದ್ರ ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಇದೇ ಮಾರ್ಚ್ ಏಪ್ರಿಲ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ತಮಿಳುನಾಡು ಚುನಾವಣೆಗೆ ಸಜ್ಜಾಗುತ್ತಿದೆ. ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಎಐಎಡಿಎಂಕೆಯಿಂದ ಉಚ್ಛಾಟನೆಗೊಂಡಿದ್ದ ಶಶಿಕಲಾ ನಟರಾಜನ್ ಮರಳಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.












Click it and Unblock the Notifications