ತಮಿಳುನಾಡಿನ 38ನೇ ಜಿಲ್ಲೆಯಾಗಿ ಮಯಿಲದುತುರೈ : ಇಪಿಎಸ್
ಚೆನ್ನೈ, ಡಿ. 28: ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು 38ನೇ ಜಿಲ್ಲೆ ಇಂದಿನಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದ್ದಾರೆ.ಮಯಿಲದುತುರೈ 38ನೇ ಜಿಲ್ಲೆಯಾಗಿದೆ.
ನಾಗಪಟ್ಟಿಣಂ ಜಿಲ್ಲೆಯನ್ನು ವಿಭಜಿಸಿ ಮಯಿಲದುತುರೈ ಹೊಸ ಜಿಲ್ಲೆಯಾಗಿ ರೂಪಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಹೊಸ ಜಿಲ್ಲೆ ಬಗ್ಗೆ ಘೋಷಿಸಲಾಗಿತ್ತು.
ಮಯಿಲದುತುರೈ ಹೊಸ ಜಿಲ್ಲೆಯಲ್ಲಿ ಮಯಿಲದುತುರೈ ಪಟ್ಟಣವೇ ಜಿಲ್ಲಾಕೇಂದ್ರವಾಗಿರಲಿದೆ. ಹೊಸ ಜಿಲ್ಲೆಯ ಉತ್ತರಕ್ಕೆ ಕಡಲೂರು ಜಿಲ್ಲೆಯ ಕೊಲ್ಲಿಡಾಂ, ದಕ್ಷಿಣಕ್ಕೆ ತಿರುವಾರೂರ್ ಜಿಲ್ಲೆಯ ಕೊಲ್ಲುಮಾಂಗುಡಿ, ಪಶ್ಚಿಮದಲ್ಲಿ ತಂಜಾವೂರು ಜಿಲ್ಲೆಯ ಆಡುಥುರೈ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ಆಗ್ನೇಯದಲ್ಲಿ ಪುದುಚೇರಿಯ ಕಾರೈಕಲ್ ಜಿಲ್ಲೆಯನ್ನು ಗಡಿಯಾಗಿ ಹೊಂದಿದೆ.
ಚೋಳನಾಡು ಎಂದು ಕರೆಯಲ್ಪಡುವ ಈ ಪ್ರದೇಶ ಕಡಲು, ಕಾವೇರಿ ನದಿ ಪ್ರದೇಶವನ್ನು ಹೊಂದಿದೆ. ಕುಂಥಲಂ, ಮಯಿಲದುತುರೈ, ಸಿರ್ಕಾಳಿ, ಥರಂಗಾಂಬಾಡಿ, ಕೊಲ್ಲಿಡಂ, ಸೆಂಬಾನಾರ್ ಕೊಯಿಲ್ ತಾಲೂಕುಗಳನ್ನು ಹೊಂದಿದೆ. ಆರ್ ಲಲಿತಾ ಜಿಲ್ಲಾಧಿಕಾರಿ ಹಾಗೂ ಎನ್ ಶ್ರೀನಾಥ ಜಿಲ್ಲಾ ಎಸ್ಪಿಯಾಗಿದ್ದಾರೆ.
ಮಯಿಲದುತುರೈ ಲೋಕಸಭಾ ಕ್ಷೇತ್ರ, ಸಿರ್ಕಾಳಿ(ಎಸ್ ಸಿ), ಪೂಂಪುಹಾರ್, ಮಯಿಲದುತುರೈ ವಿಧಾನಸಭಾ ಕ್ಷೇತ್ರಗಳಾಗಿವೆ. ಕೃಷಿ, ಮೀನುಗಾರಿಕೆ, ಕಬ್ಬುಬೆಳೆ ಜಿಲ್ಲೆಯ ಪ್ರಮುಖ ಉದ್ಯಮವಾಗಿದೆ.