ಕವನದ ಮೂಲಕ ರಾಜಕೀಯ ಸೇರ್ಪಡೆ ಸುಳಿವು ಕೊಟ್ಟ ಕಮಲ್!
ಚೆನ್ನೈ, ಜುಲೈ 19: ಯೂನಿವರ್ಸಲ್ ಸ್ಟಾರ್, ವಿವಾದಿತ ನಟ ಕಮಲ್ ಹಾಸನ್ ಅವರು ಮಂಗಳವಾರ ರಾತ್ರಿ ತಮಿಳು ಭಾಷೆಯಲ್ಲಿ ಮಾಡಿದ ಟ್ವೀಟ್ ಭಾರಿ ಚರ್ಚೆಯಾಗುತ್ತಿದೆ.
'ನಾನು ಸೋತರೆ ಸಿಡಿದೇಳುತ್ತೇನೆ. ನಾನು ನಿರ್ಧರಿಸಿದರೆ ನಾನೇ ಮುಖ್ಯಮಂತ್ರಿ. ಬನ್ನಿ, ಮೂರ್ಖರ ವಿರುದ್ಧ ಹೋರಾಡುವವನೇ ನಿಜವಾದ ನಾಯಕ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಸ್ವಲ್ಪ ಹೊತ್ತಿನಲ್ಲಿ ಒಂದು ಪ್ರಕಟಣೆ ನೀಡುತ್ತೇನೆ. ಸ್ವಲ್ಪ ತಾಳ್ಮೆಯಿಂದಿರಿ' ಎಂದು ಟ್ವೀಟ್ ಮಾಡಿದ್ದರು.
ಕಮಲ್ ಅವರ ಟ್ವೀಟ್ ಗಳು ರಾಜಕೀಯ ಪ್ರವೇಶದ ಸುಳಿವು ಎಂದು ಹಲವರು ನಂಬಿದ್ದಾರೆ. ಆದರೆ, ಪ್ರೊ ಕಬಡ್ಡಿ ಲೀಗ್ 5ನೇ ಸೀಸನ್ ನಲ್ಲಿ ಸಚಿನ್ ತೆಂಡೂಲ್ಕರ್ ಸಹ ಮಾಲೀಕತ್ವದ ಹೊಸ ತಂಡ 'ತಮಿಳು ತಲೈವಾಸ್' ಗೆ ಕಮಲ್ ಹಾಸನ್ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದು, ಈ ವಿಷಯ ತಿಳಿಸಲು ತಮಾಷೆಯಾಗಿ ಕೆಲ ಟ್ವೀಟ್ ಮಾಡಿದ್ದರು ಎಂದು ತಿಳಿದು ಬಂದಿದೆ.
ಬಿಗ್ ಬಾಸ್ ರಿಯಾಲಿಟಿ ಶೋನ ತಮಿಳು ಆವೃತ್ತಿಯ ನಿರೂಪಕರಾಗಿರುವ ಕಮಲ್ ಹಾಸನ್ ವಿರುದ್ಧ ಹಿಂದು ಮಕ್ಕಳ್ ಕಚ್ಚಿ ಹೋರಾಟ ನಡೆಸಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಹೆಸರು ಹೇಳಿದ ಕಮಲ್ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಜತೆಗೆ ತಮಿಳುನಾಡು ರಾಜಕೀಯದ ಬಗ್ಗೆ ಕಮಲ್ ಸದಾಕಾಲ ಟ್ವೀಟ್ ಮಾಡುತ್ತಾ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿರುತ್ತಾರೆ.
ತಮಿಳುನಾಡು ಸರ್ಕಾರದ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನ ಜಲ್ಲಿಕಟ್ಟು ಮುಂತಾದ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ, ರಾಜಕೀಯ ಪ್ರವೇಶದ ಬಗ್ಗೆ ಕಮಲ್ ನೇರವಾಗಿ ಎಂದಿಗೂ ಮಾತನಾಡಿಲ್ಲ. ರಜನಿಕಾಂತ್, ಅಜಿತ್, ವಿಜಯ್ ಸೇರಿದಂತೆ ಎಲ್ಲಾ ಸೂಪರ್ ಸ್ಟಾರ್ ಗಳನ್ನು ರಾಜಕೀಯ ನಾಯಕರಾಗಿ ನೋಡಲು ಬಯಸಿರುವ ತಮಿಳು ಜನರು, ಕಮಲ್ ಎಂಟ್ರಿಯನ್ನು ಸ್ವಾಗತಿಸುವ ಸಾಧ್ಯತೆ ಹೆಚ್ಚಿದೆ.(ಐಎಎನ್ಎಸ್)