ಬಿಜೆಪಿ ಸಹವಾಸ ರಜನಿ ಪಾಲಿನ 'ರಾಜಕೀಯ ಆತ್ಮಹತ್ಯೆ' ಯಾಕೆ?
ಚೆನ್ನೈ, ಜನವರಿ 1: 2017ರ ಕೊನೆಯ ದಿನ ಸೂಪರ್ ಸ್ಟಾರ್ ರಜನಿಕಾಂತ್ ಬಹುದೊಡ್ಡ ಘೋಷಣೆ ಹೊರಹಾಕಿದ್ದಾರೆ. ಬಹುನಿರೀಕ್ಷಿತ ತಮ್ಮ ರಾಜಕೀಯ ಪ್ರವೇಶವನ್ನು ಅವರು ಖಚಿತಪಡಿಸಿದ್ದಾರೆ. ಇದೀಗ ಅವರು ಬಿಜೆಪಿ ಜತೆ ಕೈಜೋಡಿಸುತ್ತಾರಾ ಇಲ್ವಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ರಜನಿಕಾಂತ್ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ತಮ್ಮ ರಾಜಕೀಯ ಪ್ರವೇಶದ ಘೋಷಣೆ ಸಂದರ್ಭದಲ್ಲೂ ಅವರು ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖ ಮಾಡಿ 'ಆಧ್ಯಾತ್ಮಿಕ ರಾಜಕೀಯ'ಕ್ಕೆ ಕರೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ರಜನಿಕಾಂತ್ ಬಿಜೆಪಿ ಸಹವಾಸ ಮಾಡುತ್ತಾರಾ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ. ರಜನಿಕಾಂತ್ ಮೂಲಕ ತಮಿಳುನಾಡು ರಾಜಕೀಯಕ್ಕೆ ಬಿಜೆಪಿ ಹಿಂಬಾಗಿಲ ಪ್ರವೇಶ ಮಾಡಲು ಯತ್ನಿಸುತ್ತಿದೆ ಎಂಬ ಆರೋಪವೂ ಈ ಸಂದರ್ಭದಲ್ಲಿ ಕೇಳಿ ಬಂದಿದೆ. ರಜನಿಕಾಂತ್ ಬಿಜೆಪಿ ಜತೆ ಕೈಜೋಡಿಸಲಿದ್ದಾರೆ ಎಂಬ ಚರ್ಚೆಗೆ ಪೂರಕವಾಗಿ ಪಕ್ಷದ ನಾಯಕರ ಹೇಳಿಕೆಗಳೂ ಇದಕ್ಕೆ ಪುಷ್ಠಿ ನೀಡುತ್ತಿವೆ.

ಆದರೆ ಈ ಸಂದರ್ಭದಲ್ಲಿ ಬಿಜೆಪಿ ಜತೆ ಕೈಜೋಡಿಸುವುದು ರಜನಿ ಪಾಲಿಗೆ ರಾಜಕೀಯ ಆತ್ಮಹತ್ಯೆಯಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. "ಅವರು (ರಜನಿಕಾಂತ್) ಬಿಜೆಪಿಗೆ ತುಂಬಾ ಆಪ್ತರಂತೆ ಗುರುತಿಸಿಕೊಂಡರೆ ಅವರ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗಲಿದೆ," ಎಂದು ಚೆನ್ನೈನ ರಾಜಕೀಯ ವಿಶ್ಲೇಷಕ ಸುಮಂತ್ ರಾಮನ್ ಹೇಳಿದ್ದಾರೆ.
ರಜನಿಕಾಂತ್ ರಾಜಕೀಯ ಪ್ರವೇಶಿಸಿರುವುದರ ಬಗ್ಗೆ ಬಿಜೆಪಿ ಭಾರೀ ಉತ್ಸಾಹ ತೋರಿದ್ದು ಇದು ಸೂಪರ್ ಸ್ಟಾರ್ ರಜನಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬಹುದು ಎಂದು ಅವರು ಹೇಳಿದ್ದಾರೆ.
"ಆರಂಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಅಂತರ ಕಾಪಾಡಿಕೊಳ್ಳಲಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ. ಈ ಮೂಲಕ ಯಾವುದೇ ಹೊಂದಾಣಿಕೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ," ಎಂಬುದಾಗಿ ರಾಮನ್ ಹೇಳಿದ್ದಾರೆ.
ಹೀಗಿದ್ದೂ ರಜನಿಕಾಂತ್ ರನ್ನು ದೂರಿರುವ ಸುಮಂತ್ ರಾಮನ್, ತಮಿಳುನಾಡು ರಾಜಕೀಯವನ್ನು ನಿಯಂತ್ರಿಸುವ ಬಿಜೆಪಿ ಕೀಲಿಕೈ ರಜನಿಕಾಂತ್ ಎಂದಿದ್ದಾರೆ.
ರಜನಿಕಾಂತ್ ಕಟ್ಟಿಕೊಳ್ಳಲಿರುವ ತಂಡ ಮತ್ತು ಪಕ್ಷದ ಸಿದ್ಧಾಂತ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ. ಒಂದೊಮ್ಮೆ ತನ್ನನ್ನು ತಾನು ರಾಜಕೀಯ ಆಸ್ತಿಯಾಗಿ ರಜನಿ ಗುರುತಿಸಿಕೊಂಡಲ್ಲಿ ಜನರು ಅನುಮಾನದ ಮೇಲೆ ಅವರನ್ನು ಬೆಂಬಲಿಸಬಹುದ," ಎಂದು ರಾಮನ್ ಹೇಳಿದ್ದಾರೆ.
ಒಂದೊಮ್ಮೆ ರಜನಿ ಬಿಜೆಪಿ ಜತೆಗೆ ಯಾವುದೇ ಸಂಬಂಧ ಇಟ್ಟುಕೊಂಡಲ್ಲಿ ಅದು ಅವರಿಗೆ ಮುಳುವಾಗಬಹುದು ಎಂದು ರಾಮನ್ ತಿಳಿಸಿದ್ದಾರೆ.












Click it and Unblock the Notifications