ರಜನೀಕಾಂತ್ ರಾಜಕೀಯ ಪ್ರವೇಶ: 20ರಂದು ಅಂತಿಮ ನಿರ್ಧಾರ?
ರಜನೀಕಾಂತ್ ಅವರ ರಾಜಕೀಯ ಪ್ರವೇಶ ಆಗಸ್ಟ್ 20ರಂದು ನಿರ್ಧಾರ. ತಿರುಚ್ಚಿಯಲ್ಲಿ ನಡೆಯಲಿರುವ ರಜನಿ ಅಭಿಮಾನಿಗಳ ಬೃಹತ್ ಸಮಾವೇಶದಲ್ಲಿ ನಿರ್ಧಾರ.
ಬೆಂಗಳೂರು, ಆಗಸ್ಟ್ 18: ಇದೇ ತಿಂಗಳ 20ರಂದು ತಿರುಚಿಯಲ್ಲಿ ನಡೆಯಲಿರುವ ಗಾಂಧಿಯನ್ ಪೀಪಲ್ಸ್ ಮೂವ್ ಮೆಂಟ್ (ಜಿಪಿಎಂ) ಸಂಸ್ಥೆಯ ಬೃಹತ್ ಸಮಾವೇಶದಲ್ಲಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಆ ಸಮಾವೇಶವೇ ರಜನಿ ಅವರ ರಾಜಕೀಯ ಪ್ರವೇಶದ ಮುನ್ನುಡಿಯಾಗಲಿದೆ ಎಂದು ಜಿಪಿಎಂ ಅಧ್ಯಕ್ಷ ತಮಿಳುಅರವಿ ಮನಿಯನ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ತಮಿಳುನಾಡನ್ನು ಕಳೆದ ಐದು ದಶಕಗಳಿಂದ ಆಳುತ್ತಿರುವ ಡಿಎಂಕೆ, ಎಐಎಡಿಎಂಕೆ ಪಕ್ಷಗಳು ರಾಜ್ಯವನ್ನು ಭ್ರಷ್ಟಾಚಾರದ ಸ್ವರ್ಗವನ್ನಾಗಿಸಿವೆ. ಇಂಥ ಪರಿಸ್ಥಿತಿಯಲ್ಲಿ ರಜನೀಕಾಂತ್ ಅವರು ಈ ಎರಡೂ ಪಕ್ಷಗಳಿಂದ ತಮಿಳುನಾಡನ್ನು ರಕ್ಷಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ತಮ್ಮದೇ ಆದ ಹೊಸ ಸರ್ಕಾರವನ್ನು ರಚಿಸುವ ಮೂಲಕ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಲು ಮುಂದಾಗಿದ್ದಾರೆ'' ಎಂದರು.
''ತಿರುಚ್ಚಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶ ರಜನಿ ಅವರ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆಯಲಿದ್ದು, ಅಂದೇ ಅವರಿಂದ ಸ್ಪಷ್ಟ ಸಂದೇಶ ಹೊರಬೀಳಲಿದೆ'' ಎಂದು ಅವರು ತಿಳಿಸಿದ್ದಾರೆ.