'ಈ ಬೆಂಕಿಯುರಿಯನ್ನು ಸಹಿಸುತ್ತೀಯಾ?' ಶುಭಶ್ರೀ ಶವದ ಮುಂದೆ ತಂದೆಯ ರೋದನ
Recommended Video
'ಮಗಳೇ, ಈ ಬೆಂಕಿಯುರಿಯನ್ನು ಹೇಗೆ ಸಹಿಸುತ್ತೀಯಾ?' ಟೆಕ್ಕಿ ಶುಭಶ್ರಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಚಿತೆಯಲ್ಲಿ ಉರಿಯುತ್ತಿದ್ದ ಶುಭಶ್ರಿಯ ಶವವನ್ನು ಕಂಡು ತಂದೆ ರವಿ ಕಣ್ತುಂಬಿಕೊಂಡು ಹೇಳುತ್ತಿದ್ದ ಮಾತು ಅದು.
ಒಂದು ಕ್ಷಣ ಕೂರದೆ, ತರಲೆ ಮಾಡುತ್ತ, ಮುದ್ದುಮುದ್ದಾಗಿ ಮಾತನಾಡುತ್ತ, ಮನೆತುಂಬ ಓಡಾಡುತ್ತ ಇದ್ದ ಒಬ್ಬಳೇ ಒಬ್ಬಳು ಮಗಳು ಇದ್ದಕ್ಕಿದ್ದಂತೆ ನಿರ್ಜೀವವಾಗಿ, ಬಿಳಿಬಟ್ಟೆಯಲ್ಲಿ ಸುತ್ತಿಟ್ಟ ದೇಹವಷ್ಟೇ ಆಗಿ ಮನೆಬಾಗಿಲಿಗೆ ಬಂದರೆ..!
ಯಾವ ತಂದೆ-ತಾಯಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಇದ್ದುಬಿಡುವುದಕ್ಕೆ ಸಾಧ್ಯ? ಶುಭಶ್ರೀ ತಂದೆ ತಾಯಿಯೂ ಮಗಳಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲಾರರು. ಅದಕ್ಕಿನ್ನೂ ಸಮಯ ಬೇಕು!

ಬದುಕನ್ನು ದುರ್ಬರವಾಗಿಸಿದ ಆ ಫೋನ್ ಕರೆ
ಚೆನ್ನೈನ ಚ್ರೋಮಪೇಟೆ ಎಂಬಲ್ಲಿ ವಾಸವಿದ್ದ ರವಿ ಮತ್ತು ಗೀತಾ ಎಂಬ ನತದೃಷ್ಟ ದಂಪತಿಗೆ ಸೆಪ್ಟೆಂಬರ್ 12ರ ಗುರುವಾರ ಸಂಜೆಯ ಸಮಯದಲ್ಲಿ ಬಂದ ಫೋನ್ ಕರೆಯೊಂದು ಬದುಕನ್ನೇ ದುರ್ಬರವಾಗಿಸಿತ್ತು. ಆಫೀಸು ಮುಗಿಸಿ, ಬಾಯ್ತುಂಬ ಮಾತನಾಡುತ್ತ ಮನೆಯೊಳಗೆ ಅಡಿಯಿಡುತ್ತಿದ್ದ ಮಗಳು ಇನ್ನೆಂದೂ ಬರುವುದಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಆ ಪಾಲಕರಿಗೆ ಇನ್ನೆಷ್ಟು ದಿನ ಬೇಕೋ..?

ಜೀವನ ಚಿಲುಮೆಯ ಹುಡುಗಿ
ಶುಭಶ್ರೀ ಎಂಬ ಜೀವನ ಚಿಲುಮೆಯ ಸಾವು ಕೇವಲ ಆಕೆಯ ತಂದೆ-ತಾಯಿಗಷ್ಟೇ ಅಲ್ಲ, ಚ್ರೋಮಪೇಟೆಯ ಮನೆಮನೆಯನ್ನೂ, ಆಕೆಯ ಸಹೋದ್ಯೋಗಿಗಳನ್ನು, ಸ್ನೇಹಿತರನ್ನು, ಆಫೀಸಿನ ಬಾಸಿನಿಂದ ಹಿಡಿದು ಫಿಯೂನ್ ನನ್ನೂ ಕಾಡುವುದಕ್ಕೆ ಕಾರಣವಿದೆ. ಶುಭಶ್ರೀ ಇದ್ದಿದ್ದೇ ಹಾಗೆ. ಒಂದೇ ಒಂದು ದಿನವೂ ಮತ್ತೊಬ್ಬರಿಗೆ ಬೇಸರ ಮಾಡಿದವಳು ಅವಳಲ್ಲ. ಒಂದು ದಿನವೂ ಬೇಸರದಲ್ಲಿ ಕೂತವಳೂ ಅಲ್ಲ, ಪ್ರತಿಕ್ಷಣವನ್ನೂ ಜೀವಿಸುವ ಉತ್ಕಟ ಬಯಕೆಯ ಹುಡುಗಿ!

ಸಿನಿಮಾ ಹೀರೋಯಿನ್ ಅವಳು!
"ಪ್ರತಿದಿನವೂ ಅವಳು ಸಿನಿಮಾ ಹೀರೋಯಿನ್ ಥರವೇ ಆಫೀಸಿಗೆ ಹೋಗುತ್ತಿದ್ದಿದ್ದು... ಬರುವಾಗಲೂ ಮುಖದಲ್ಲಿ ಅದೇ ನಗು, ಅದೇ ಉಲ್ಲಾಸ, ಅವಳನ್ನು ನೋಡಿದರೆ ನಮ್ಮಲ್ಲೂ ಉತ್ಸಾಹ ಪುಟಿಯುತ್ತಿತ್ತು" ಎನ್ನುವ ಶುಭಶ್ರೀ ನೆರೆಹೊರೆಯರ ಮಾತಲ್ಲಿ ಆಕೆಯನ್ನು ಕಳೆದುಕೊಂಡ ನೋವು ಢಾಳಾಗಿ ಕಾಣಿಸುತ್ತದೆ. ಹೀಗೆ ಕೇವಲ ತಂದೆ-ತಾಯಿ ಮಾತ್ರವಲ್ಲದೆ, ತನ್ನೂರಿನ ಜನ, ಆಫೀಸು, ಸ್ನೇಹಿತರು ಎಲ್ಲರೊಂದಿಗೂ ಆತ್ಮೀಯಗಿದ್ದವಳು ಶುಭಶ್ರೀ.

ಆ ಕಣ್ಬೆಳಕು ಕತ್ತಲಾಯ್ತು!
ಸೆಪ್ಟೆಂಬರ್ 12 ರಂದು ಗುರುವಾರ ಬೆಳಿಗ್ಗೆ ಆಫೀಸಿಗೆ ಹೊರಟವಳು, ಎಲ್ಲದಿನದಂತೆಯೇ ಬಾಯ್ ಎಂದು ಕಣ್ಣರಳಿಸಿ ಹೋಗಿದ್ದಳು. ಆ ಕಣ್ಬೆಳಕು ಮತ್ತೆಂದೂ ನಮ್ಮ ಪಾಲಿಗುಳಿಯುವುದಿಲ್ಲ ಎಂಬ ಕ್ಲಪನೆ ನಮಗಿರಲಿಲ್ಲ. ನಮಗಿದ್ದಿದ್ದು ಒಬ್ಬಳೇ ಮಗಳು. ಆಕೆಯನ್ನು ಈ ಅಕ್ರಮ ಬ್ಯಾನರ್ ಸಂಸ್ಕೃತಿ ಬಲಿ ತೆಗೆದುಕೊಂಡಿತು ಎನ್ನುತ್ತಾರೆ ಶುಭಶ್ರೀ ತಂದೆ ರವಿ.
ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶುಭಶ್ರೀ, ಸೆಪ್ಟೆಂಬರ್ 12 ರಂದು ಗುರುವಾರ ಸಂಜೆ ದ್ವಿಚಕ್ರವಾಹನದಲ್ಲಿ ಆಫೀಸ್ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪಲ್ಲವರಂ-ತೋರೈಪಕ್ಕಂ ರೇಡಿಯಲ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಕ್ರಮ ಫ್ಲೆಕ್ಸ್ ವೊಂದು ಅವರ ಮೇಲೆ ಬಿದ್ದ ಪರಿಣಾಮ ಅವರು ಆಯತಪ್ಪಿ ರಸ್ತೆಗೆ ಬಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಶುಭಶ್ರೀ ಮೇಲೆ ಹರಿದ ಪರಿಣಾಮ ಆಕೆ ಸಾವನ್ನಪ್ಪಿದ್ದರು.












Click it and Unblock the Notifications