ವಿರೋಧಿಗಳನ್ನು ಬೆಚ್ಚಿಬೀಳಿಸುವ ಜಯಲಲಿತಾ ವಿಡಿಯೋ!
Recommended Video

ಚೆನ್ನೈ, ಡಿಸೆಂಬರ್ 20 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಅಪೋಲೋ ಆಸ್ಪತ್ರೆ ಸೇರುವ ಮೊದಲೇ ಪ್ರಜ್ಞೆ ಕಳೆದುಕೊಂಡಿದ್ದರು, ಅವರನ್ನು ಮೊದಲೇ ಸಾಯಿಸಲಾಗಿತ್ತು ಎಂಬಿತ್ಯಾದಿ ಮಾತುಗಳಿಗೆ ಬೀಗ ಜಡಿಯುವಂಥ ವಿಡಿಯೋವೊಂದನ್ನು ಶಶಿಕಲಾ ಬಣ ಬಿಡುಗಡೆ ಮಾಡಿದೆ.
ಜಯಲಲಿತಾ ಅವರನ್ನು ಶಶಿಕಲಾ ಮೊದಲೇ ಸಾಯಿಸಿ, ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿ ನಾಟಕವಾಡಿದ್ದರು ಎಂದು ಶಶಿಕಲಾ ವಿರೋಧಿಗಳು ಆರೋಪಿಸಿದ್ದರು. ಇದೀಗ ಟಿಟಿವಿ ದಿನಕರನ್ ಬಣ ಬಿಡುಗಡೆ ಮಾಡಿರುವ ಈ ವಿಡಿಯೋ, ಶಶಿಕಲಾ ವಿರೋಧಿಗಳು ದಂಗಾಗುವಂತೆ ಮಾಡಿದೆ.
ಅತ್ಯಂತ ಪ್ರತಿಷ್ಠಿತ ಕಣವಾಗಿರುವ ಚೆನ್ನೈನ ಆರ್ ಕೆ ನಗರ ಉಪ ಚುನಾವಣೆ (ಡಿಸೆಂಬರ್ 21) ಕೇವಲ ಇನ್ನೊಂದು ದಿನ ಮಾತ್ರ ಇರುವಾಗ, ಬಿಡುಗಡೆ ಮಾಡಲಾಗಿರುವ ಈ ವಿಡಿಯೋ ಚುನಾವಣೆಯಲ್ಲಿ ಧೂಳೆಬ್ಬಿಸುವುದಂತೂ ಗ್ಯಾರಂಟಿ. ಸಮಯಸ್ಫೂರ್ತಿಯಿಂದ, ವಿರೋಧಿಗಳು ಬೆಚ್ಚಿಬೀಳುವಂತೆ ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಜಯಲಲಿತಾ ಆಸ್ಪತ್ರೆ ಸೇರುವ ಮುನ್ನವೇ ಹತ್ಯೆಗೀಡಾಗಿದ್ದರು ಎಂಬ ಆರೋಪವನ್ನು ಇತ್ತೀಚೆಗೆ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರೇ ಮಾಡಿದ್ದರು. ಅದನ್ನು ಆಸ್ಪತ್ರೆ ಆಡಳಿತ ಮಂಡಳಿ ಅಲ್ಲಗಳೆದಿತ್ತು. ಅವರು ಕಡೆಯವರೆಗೆ ಹೋರಾಟ ಮಾಡಿ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು ಎಂದಿದ್ದರು.

ಅಷ್ಟಕ್ಕೂ ಆ ವಿಡಿಯೋದಲ್ಲಿರುವುದೇನು?
ಅಷ್ಟಕ್ಕೂ ಆ ವಿಡಿಯೋದಲ್ಲಿರುವುದೇನು? ಕೇವಲ 20 ಸೆಕೆಂಡುಗಳಿರುವ ಈ ವಿಡಿಯೋವನ್ನು ಪ್ರಮೋದ್ ಮಾಧವ್ ಎಂಬುವವರು ಟ್ವಿಟ್ಟರಿನಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿ ಹಬ್ಬುತ್ತಿದ್ದು, ಆರ್ ಕೆ ನಗರ ಚುನಾವಣೆ ಮತ್ತಷ್ಟು ಕಳೆಗಟ್ಟುವಂತೆ ಮಾಡಿದೆ. (ಚುನಾವಣಾ ಆಯೋಗದ ನಿರ್ಬಂಧವಿರುವುದರಿಂದ ಆ ವಿಡಿಯೋವನ್ನು ಪ್ರಕಟಿಸಲಾಗುತ್ತಿಲ್ಲ.)

ತಾವೇ ಜ್ಯೂಸ್ ಹೀರುತ್ತಿರುವ ಜಯಲಲಿತಾ
ತೀವ್ರ ಅಸ್ವಸ್ಥರಾದರೂ ಪ್ರಜ್ಞೆಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು, ಕಣ್ಣು ಮಿಟುಕಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಅಲ್ಲದೆ, ತಾವೇ ಸ್ವತಃ ತಮ್ಮ ಎಡಗೈಯಲ್ಲಿ ಹಿಡಿದಿದ್ದ ಜ್ಯೂಸ್ ಹೀರಿತ್ತಿದ್ದಾರೆ. ಹಾಗಿದ್ರೆ, ಅವರು ಆಸ್ಪತ್ರೆ ಸೇರುವ ಮುನ್ನವೇ ಸತ್ತಿದ್ದರು ಎಂಬ ಮಾತು ಸುಳ್ಳು ಎಂಬುದು ಸಾಬೀತಾಗಿದೆ.

ಡಿಸೆಂಬರ್ 5ರಂದು ದೈವಾಧೀನರಾಗಿದ್ದ ಜಯಾ
ಸೆಪ್ಟೆಂಬರ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು, ಸುಮಾರು 72 ದಿನಗಳ ಕಾಲ ಸತತ ಸಾವು ಮರಣದ ನಡುವೆ ಹೋರಾಟ ಮಾಡಿ ಚಿಕಿತ್ಸೆ ಫಲಕಾರಿಯಾಗದೆ, ಡಿಸೆಂಬರ್ 5ರಂದು ದೈವಾಧೀನರಾದರು. ಅಂದು ಇಡೀ ತಮಿಳುನಾಡೇ ಕಣ್ಣೀರುಹಾಕಿತ್ತು. ಅವರು ಸತ್ತ ಘಳಿಗೆ ಕೂಡ ಆಸ್ಪತ್ರೆಯಲ್ಲಿ ಸಾಕಷ್ಟು ಡ್ರಾಮಾಗಳು ನಡೆದಿದ್ದವು.

ಯಾರನ್ನೂ ಬಿಡುತ್ತಿರಲಿಲ್ಲ ಶಶಿಕಲಾ ನಟರಾಜನ್
ಜಯಲಲಿತಾ ಅವರ ಜೊತೆಗೇ ಇರುತ್ತಿದ್ದ ಶಶಿಕಲಾ ನಟರಾಜನ್ ಅವರು, ಜಯಲಲಿತಾ ಅವರಿದ್ದ ಕೋಣೆಯೊಳಗೆ ಹೋಗಲು ಯಾರನ್ನೂ ಬಿಡುತ್ತಿರಲಿಲ್ಲ. ಈ ಕಾರಣದಿಂದಾಗಿ ನಾನಾ ಊಹಾಪೋಹಗಳೆದ್ದಿದ್ದವು. ಮುಖ್ಯಮಂತ್ರಿ ಪಟ್ಟದ ಮೇಲೆ ಒಂದು ಕಣ್ಣು ಇಟ್ಟೇ ಇದ್ದ ಶಶಿಕಲಾ, ಜಯಲಲಿತಾ ಅವರಿಗೆ ನಿಧಾನವಾಗಿ ವಿಷಪ್ರಾಶನ ಮಾಡುತ್ತಿದ್ದರು ಎಂಬ ಸುದ್ದಿ ಕೂಡ ಹಬ್ಬಿತ್ತು.

ಕಟಕಟನೆ ಹಲ್ಲು ಕಡಿದು ಶಪಥ ಮಾಡಿದ್ದ ಶಶಿಕಲಾ
ವಿರೋಧಿಗಳ ಮಾತುಗಳಿಂದ ಕೋಪೋದ್ರಿಕ್ತರಾಗಿದ್ದ ಶಶಿಕಲಾ ಅವರು ಜಯಲಲಿತಾ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ, ಕಟಕಟನೆ ಹಲ್ಲು ಕಡಿದು, ಅದೇನೋ ಮಿಣಮಿಣ ಅಂತ ಪಠಿಸಿ, ಏನೋ ಶಪಥ ಮಾಡಿದ್ದರು. ಈಗ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿದ್ದಾರೆ.

ಪನ್ನೀರ್ ಸೆಲ್ವಂ, ಪಳನಿಸ್ವಾಮಿ ಆರೋಪ
ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಓ ಪನ್ನೀಸ್ ಸೆಲ್ವಂ ಅವರು, ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದರು. ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಅವರು ಹಲವಾರು ಆರೋಪಗಳನ್ನು ಮಾಡಿದ್ದರು. ಸತ್ಯ ಹೊರಬರಬೇಕೆಂದು ಆಗ್ರಹಿಸಿದ್ದರು.












Click it and Unblock the Notifications