ವಿದ್ಯಾರ್ಥಿನಿ ಆತ್ಮಹತ್ಯೆ, ಚೆನ್ನೈನಲ್ಲಿ ಕ್ಯಾಂಪಸ್ ಗೆ ಬೆಂಕಿಯಿಟ್ಟ ವಿದ್ಯಾರ್ಥಿಗಳು
ಚೆನ್ನೈ, ನವೆಂಬರ್ 22: ಇಲ್ಲಿನ ಸತ್ಯಭಾಮಾ ಡೀಮ್ಡ್ ವಿ.ವಿ.ಯ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಿನ ವಸ್ತುಗಳಿಗೆ ಬೆಂಕಿ ಇರಿಸಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಅದೇ ಕ್ಯಾಂಪಸ್ ನ ಹಾಸ್ಟೆಲ್ ಕೋಣೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದರು.
ದುವ್ವೂರು ರಾಧಾ ಮೌನಿಕಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬುಧವಾರ ಬೆಳಗ್ಗೆ ಪರೀಕ್ಷೆ ಬರೆಯುತ್ತಿದ್ದ ವೇಳೆ ನಕಲು ಮಾಡುವಾಗ ಆಕೆ ಸಿಕ್ಕಿಬಿದ್ದಿದ್ದರು. ಆ ನಂತರ ಪರೀಕ್ಷಾ ಕೊಠಡಿಯಿಂದ ಆಚೆ ಕಳುಹಿಸಲಾಗಿತ್ತು. "ವಿವಿ ಸಿಬ್ಬಂದಿ ಆಕೆಗೆ ಅವಮಾನ ಮಾಡಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂಬುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಕಿರುಕುಳಕ್ಕೆ ನೊಂದು, ಆತ್ಮಹತ್ಯೆಗೆ ಶರಣಾದ ನಿರ್ಮಾಪಕ
ಹೈದರಾಬಾದ್ ಮೂಲಕ ರಾಧಾ ಮೌನಿಕಾ ಎಂಜಿನಿಯರಿಂಗ್ ನ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ. ಎಂಜಿನಿಯರಿಂಗ್ ಕೆಮಿಸ್ಟ್ರಿ ಪರೀಕ್ಷೆ ಬುಧವಾರ ನಡೆಯುತ್ತಿತ್ತು. ಆ ವೇಳೆ ನಕಲು ಮಾಡುತ್ತಿದ್ದ ಆಕೆ ಸಿಕ್ಕಿಬಿದ್ದಿದ್ದರು. ಆ ನಂತರ ಪರೀಕ್ಷಾ ಕೊಠಡಿಯಿಂದ ಹೊರಗೆ ಕಳುಹಿಸಲಾಗಿತ್ತು.
ಆ ಮೇಲೆ ಅದೇ ವಿ.ವಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ಅವಳಿ ಸೋದರ ರಾಕೇಶ್ ಎಂಬುವರಿಗೆ ಸಂದೇಶ ಕಳುಹಿಸಿದ ಮೋನಿಕಾ, ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ ಎಂದು ತಿಳಿಸಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಎಲ್ಲ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿತ್ತು.
ಸಂಜೆ ಹೊತ್ತಿಗೆ ಗುಂಪುಗೂಡಿದ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಿನ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಕೆಲ ವಿದ್ಯಾರ್ಥಿಗಳು ಹೇಳುವ ಪ್ರಕಾರ, ಮೋನಿಕಾರನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ್ದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ರೀತಿ ಯುವಕನೊಬ್ಬನನ್ನು ಕೂಡ ಈಚೆಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.