ತಮಿಳುನಾಡಲ್ಲಿ ಹುಲ್ಲುಕಡ್ಡಿ ಅಲುಗಾಡೋಕೂ ಬೇಕಿತ್ತು ಶಶಿಕಲಾ ಅನುಮತಿ!
ಚೆನ್ನೈ, ಮಾರ್ಚ್ 24: ತಮಿಳುನಾಡಿನ ರಾಜಕೀಯದಲ್ಲಿ ಶಶಿಕಲಾ ನಟರಾಜನ್ ಅವರ ಪ್ರಭಾವ ಹೇಗಿತ್ತು..? ತಮಿಳುನಾಡಿನ ಇಡೀ ಸರ್ಕಾರ, ಸರ್ಕಾರಿ ಅಧಿಕಾರಿಗಳನ್ನೂ ತಮ್ಮ ಅಂಗೈಯಲ್ಲೇ ಹಿಡಿದುಕೊಂಡಿದ್ದವರು ಆಗಿನ ಮುಖ್ಯಮಂತ್ರಿ ಜಯಲಲಿತಾ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸರ್ಕಾರದಲ್ಲಿ ಒಂದು ಹುಲ್ಲುಕಡ್ಡಿ ಅಲ್ಲಾಡಬೇಕೆಂದರೂ ತಮ್ಮ ಅನುಮತಿ ಪಡೆಯಬೇಕಾದಂಥ ಪರಿಸ್ಥಿತಿ ಸೃಷ್ಟಿಸಿದ್ದವರು ಶಶಿಕಲಾ ನಟರಾಜನ್!
'ಅಮ್ಮಾ' ಕೊನೆಯ ಕ್ಷಣದ ಬಗ್ಗೆ 'ಚಿನ್ನಮ್ಮ' ಬಿಚ್ಚಿಟ್ಟ ಸ್ಫೋಟಕ ಸತ್ಯ!
ಇಂಥದೊಂದು ಸ್ಫೋಟಕ ಮಾಹಿತಿಯನ್ನು ಅವರ ಹತ್ತಿರದ ಸಂಬಂಧಿಯೊಬ್ಬರು ಹೊರಹಾಕಿದ್ದಾರೆ. ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಆರ್ಮುಗಂ ಸ್ವಾಮಿ ಆಯೋಗದ ವಿಚಾರಣೆಗೆ ಹಾಜರಾಗಿದ್ದ ಶಶಿಕಲಾ ಸಂಬಂಧಿ ಕೃಷ್ಣಪ್ರಿಯಾ ಹಲವು ವಿಚಾರಗಳನ್ನು ಆಯೋಗದ ಮುಂದೆ ಹೇಳಿಕೊಂಡಿದ್ದಾರೆ. ಶಶಿಕಲಾ ಅವರೊಂದಿಗೆ ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ಸೆರೆಯಾಗಿದ್ದ ಇಳವರಸಿ ಅವರ ಪುತ್ರಿಯೇ ಈ ಕೃಷ್ಣಪ್ರಿಯಾ.
ಶಶಿಕಲಾ ಹೇಳಿದ್ದೇ ವೇದವಾಕ್ಯ!
2011 ಕ್ಕೂ ಮೊದಲು ತಮಿಳುನಾಡಿನ ರಾಜಕೀಯ ಈಗಿನಂತಿರಲಿಲ್ಲ. ಶಶಿಕಲಾ ನಟರಾಜನ್ ಅದೆಷ್ಟು ಪ್ರಭಾವೀ ಮಹಿಳೆಯಾಗಿದ್ದರು ಎಂದರೆ ಅವರು ಹೇಳಿದ್ದದೇ ವೇದವಾಕ್ಯವಾಗಿತ್ತು. ಮುಖ್ಯಮಂತ್ರಿಗಳಿಗೆ ಅಗತ್ಯವಿರುವ ಅಧಿಕಾರಿಗಳನ್ನು ನೇಮಿಸುವುದರಿಂದ ಹಿಡಿದು ಐಎಎಸ್ ಅಧಿಕಾರಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದವರು ಶಶಿಕಲಾ. ಅಷ್ಟೇ ಅಲ್ಲ, ತಮಗೆ ವಿಧೇಯವಾಗಿರಬಲ್ಲ ಅಧಿಕಾರಿಗಳನ್ನಷ್ಟೇ ನೇಮಿಸುತ್ತಿದ್ದರು. ಮುಖ್ಯಮಂತ್ರಿಗಳ ಬಳಿ ಕೆಲಸ ಮಾಡುವ ಅಧಿಕಾರಿಗಳನ್ನೂ ನೇಮಿಸುತ್ತಿದ್ದುದು ಶಶಿಕಲಾ ಅವರೇ. ಆ ಎಲ್ಲ ಅಧಿಕಾರಿಗಳು ಮುಖ್ಯಮಂತ್ರಿಗಳಿಗಿಂತ ಹೆಚ್ಚು ವಿಧೇಯರಾಗಿ ಶಶಿಕಲಾ ಅವರ ಬಳಿ ಇರುತ್ತಿದ್ದರು! ಎಂದು ಕೃಷ್ಣಪ್ರಿಯಾ ಹೇಳಿಕೆ ನೀಡಿದ್ದಾರೆ.
ಕುಗ್ಗಿದ ಪ್ರಭಾವ
2011 ರಲ್ಲಿ ಜಯಲಲಿತಾ ಅವರಿಗೆ ಶಶಿಕಲಾ ಅವರ ಕೆಲವು ನಡೆಯ ಮೇಲೆ ಅನುಮಾನ ಹುಟ್ಟುತ್ತಿದ್ದಂತೆಯೇ ಸ್ವಂತ ಅಕ್ಕ-ತಂಗಿಯಂತಿದ್ದ ಅವರ ನಡುವಲ್ಲಿ ಅಂತರ ಸೃಷ್ಟಿಯಾಗುವುದಕ್ಕೆ ಶುರುವಾಯ್ತು. ಶಶಿಕಲಾ ಮೇಲೆ ಅತಿಯಾಗಿ ವಿಶ್ವಾಸ ಹೊಂದಿದ್ದ ಜಯಲಲಿತಾ ದಂಗಾದರು. ಕ್ರಮೇಣ ಸರ್ಕಾರದಲ್ಲಿ ಶಶಿಕಲಾ ಹಿಡಿತವನ್ನು ಕಡಿಮೆ ಮಾಡಿ, ತಮ್ಮದೇ ಹಿಡಿತ ಸಾಧಿಸುವುದಕ್ಕೆ ಶುರುಮಾಡಿದರು. ಆಗಿನಿಂದ ಶಶಿಕಲಾ ಪ್ರಭಾವ ಕುಸಿಯುವುದಕ್ಕೆ ಶುರುವಾಯ್ತು. ಆ ನಂತರ ಅಧಿಕಾರಿಗಳ ನೇಮಕದಲ್ಲೂ ಅವರ ಮಾತು ನಡೆಯುತ್ತಿರಲಿಲ್ಲ. ಅಧಿಕಾರಿಗಳೂ ಅವರಿಗೆ ವಿಧೇಯರಾಗಿರುವುದನ್ನು ಕಡಿಮೆ ಮಾಡಿದರು. ಇದು ಶಶಿಕಲಾ ಅವರಿಗೆ ತೀರಾ ನೋವು ತಂದಿತ್ತು ಎಂದು ಕೃಷ್ಣಪ್ರಿಯಾ ತಿಳಿಸಿದ್ದಾರೆ.
ಆರ್ಮುಗಂ ಆಯೋಗ
ಜಯಲಲಿತಾ ಸಾವಿನ ಕುರಿತಂತೆ ವಿಚಾರಣೆ ನಡೆಸುತ್ತಿರುವ ಆರ್ಮುಗಂ ಆಯೋಗ ಈಗಾಗಲೇ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿದ್ದ ಹಲವರನ್ನು ವಿಚಾರಣೆಗೊಳಪಡಿಸಿದೆ. ಜಲಲಲಿತಾ ಅವರ ಬಳಿ ಹಲವು ವರ್ಷಗಳಿಂದ ಡ್ರೈವರ್ ಆಗಿದ್ದ ವ್ಯಕ್ತಿಯನ್ನೂ ಆಯೋಗ ವಿಚಾರಣೆಗೊಳಪಡಿಸಿದೆ. ಇವರ ಮೂಲಕ ಜಯಲಲಿತಾ ಕೊನೆಯ ದಿನಗಳ ಕುರಿತು ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಇತ್ತೀಚೆಗೆ ಈ ಆಯೋಗ ಶಶಿಕಲಾ ಅವರನ್ನೂ ವಿಚಾರಣೆ ನಡೆಸಿತ್ತು. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ದೋಷಿಯಾಗಿರುವ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪತಿ ನಟರಾಜನ್ ನಿಧನದಿಂದಾಗಿ 15 ಪೆರೋಲ್ ಮೇಲೆ ತಮಿಳುನಾಡಿಗೆ ತೆರಳಿರುವ ಅವರನ್ನು ಆಯೋಗ ವಿಚಾರಣೆ ನಡೆಸಿದೆ.
ಜಯಾ ಕೊನೆಯ ದಿನಗಳ ಬಗ್ಗೆ ಶಶಿಕಲಾ ವಿವರ
ಸೆ. 22, 2016 ರಂದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಜಯಲಲಿತಾ ಅವರನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಿದಾಗಿನಿಂದ ಹಿಡಿದು, ಡಿ.5 ರಂದು ಅವರ ನಿಧನದ ವಾರ್ತೆ ಘೋಷಣೆಯಾದಾಗಿನವರೆಗಿನ ಹಲವು ಮಹತ್ವದ ಸಂಗತಿಗಳನ್ನು ಆಯೋಗದೆದುರು ಶಶಿಕಲಾ ಹೇಳಿದ್ದಾರೆ. ಶಶಿಕಲಾ ಅವರು ನೀಡಿದ ಹೇಳಿಕೆಯಲ್ಲಿ ಡಿ.4 ರಂದೇ ಅವರು ಹೃದಯಾಘಾತದಿಂದ ಮರಣವಾಗಿದ್ದಾರೆ ಎನ್ನಲಾಗಿದೆ. ತಮ್ಮ ಕೊನೆಯ ಕ್ಷಣಗಳಲ್ಲಿ ಜಯಲಲಿತಾ ಜೈ ವೀರ ಹನುಮಾನ್ ಧಾರಾವಾಹಿ ನೋಡುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಬೆಡ್ ಮೇಲೆ ಕುಸಿದ ಜಯಲಲಿತಾ ಅವರು ನನ್ನ ಬಳಿ ಏನನನ್ನೋ ಹೇಳಲು ಕೈ ಎತ್ತುತ್ತಿದ್ದರು. ಆದರೆ ಅಷ್ಟರಲ್ಲೇ ಅವರು ಹೃದಯಾಘಾತದಿಂದ ಮರಣಹೊಂದಿದ್ದರು ಎಂದು ಶಶಿಕಲಾ ತಮ್ಮ ಹೇಳಿಕೆಯಲ್ಲಿ ಹೇಳಿದ್ದರು.