ತಮಿಳುನಾಡಿಗೆ ಶಶಿಕಲಾ ನಟರಾಜನ್ ಗ್ರ್ಯಾಂಡ್ ಎಂಟ್ರಿ: ಮತ್ತೆ ಘರ್ಜಿಸುವುದೇ ಮನ್ನಾರ್ ಗುಡಿ ಗ್ಯಾಂಗ್
ತಮಿಳುನಾಡು ರಾಜಕೀಯವನ್ನು ಹೀಗೇ.. ಎಂದು ಗ್ರಹಿಸಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ, ದಿವಂಗತ ಸಿಎಂ ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಜೈಲಿನಿಂದ ಹೊರಬಂದು, ಭಾರೀ ಅಬ್ಬರದೊಂದಿಗೆ ಮತ್ತೆ ತಮಿಳುನಾಡು ಪ್ರವೇಶಿಸುವುದು ಅಲ್ಲಿನ ರಾಜಕೀಯ ಪಕ್ಷಗಳಿಗೆ ಬೇಕಾಗಿರುವುದಿಲ್ಲ. ಅದರಲ್ಲೂ ಪ್ರಮುಖವಾಗಿ ಎಐಎಡಿಎಂಕೆ ಪಕ್ಷಕ್ಕೆ.
ಶಶಿಕಲಾ ಅವರು ಬೆಂಗಳೂರಿನಿಂದ ಚೆನ್ನೈಗೆ ರಸ್ತೆ ಮೂಲಕ ಹೋಗುತ್ತಿದ್ದಾಗ, ತಮಿಳುನಾಡಿನ ಎರಡು ಪ್ರಮುಖ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷದ ಮುಖಂಡರು ನಾಚಿಸುವಂತೆ ಸ್ವಾಗತ ಅವರಿಗೆ ಸಿಗುತ್ತಿದೆ. ಮೊದಲು ಎಐಎಡಿಎಂಕೆ ಪಕ್ಷದ ಧ್ವಜ, ನಂತರ ಜಯಲಲಿತಾ ಅವರ ಫೋಟೋ ಅನ್ನು ಕಾರಿನ ಮುಂಭಾಗದಲ್ಲಿ ಹಾಕಿಕೊಂಡು ಪ್ರಯಾಣಿಸುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಅತ್ಯಂತ ಸ್ಪಷ್ಟ.
ಶಶಿಕಲಾರಿಂದ ಎಐಎಡಿಎಂಕೆ ಬಾವುಟ ಬಳಕೆ ಬಗ್ಗೆ ಖುಷ್ಬು ಕಿಡಿ
ಶಶಿಕಲಾ ಆಗಮನ ಆಗುತ್ತಿದ್ದಂತೆಯೇ ಚಾಲ್ತಿಗೆ ಬರುವ ಹೆಸರು ಮನ್ನಾರ್ ಗುಡಿ ಗ್ಯಾಂಗ್. ವಿಡಿಯೋ ಕ್ಯಾಸೆಟ್ ಅಂಗಡಿ ಇಟ್ಟುಕೊಂಡು, ಎಐಎಡಿಎಂಕೆ ಪಕ್ಷದ ಕಾರ್ಯಕ್ರಮವನ್ನು ಕವರ್ ಮಾಡಿಕೊಂಡು ಬರುತ್ತಿದ್ದ ಶಶಿಕಲಾ ಇಂದು ತಮಿಳುನಾಡಿನಲ್ಲಿ ಈ ಮಟ್ಟಕ್ಕೆ ಬೆಳೆದರೆಂದರೆ, ಅದಕ್ಕೆ ಆಕೆಯ ಬೆನ್ನಿಗೆ ನಿಂತಿದ್ದು ಮನ್ನಾರ್ ಗುಡಿ ಗ್ಯಾಂಗ್, ಆಕೆ ಪ್ರತಿನಿಧಿಸುವ ದೇವರ್ ಸಮುದಾಯ ಮತ್ತು ಜಯಲಲಿತಾ ಮೇಲಿನ ನಿಷ್ಠೆ.
ಏನಿದು ಮನ್ನಾರ್ ಗುಡಿ ಗ್ಯಾಂಗ್: ಚೆನ್ನೈನಿಂದ 310ಕಿಲೋಮೀಟರ್ ದೂರದಲ್ಲಿರುವ ಕಾವೇರಿ ಜಲಾಯನ ಪ್ರದೇಶದ ತಿರುವರೂರು ಜಿಲ್ಲೆಯಲ್ಲಿನ ಹಳ್ಳಿಯೊಂದರ ಹೆಸರು ಮನ್ನಾರ್ ಗುಡಿ, ಶಶಿಕಲಾ ಬೆಳೆದಿದ್ದು ಇದೇ ಊರಲ್ಲಿ. ಎಂಬತ್ತರ ದಶಕದಲ್ಲಿ ಸೌತ್ ಆರ್ಕಾಟ್ ಜಿಲ್ಲೆಯ ಕಲೆಕ್ಟರ್ ವಿ ಎಸ್ ಚಂದ್ರಲೇಖಾ ಮೂಲಕ ಶಶಿಕಲಾಗೆ ಸೆಲ್ವಿ ಜಯಲಲಿತಾ ಅವರ ಪರಿಚಯವಾಗುತ್ತದೆ. ಇಂಟರೆಸ್ಟಿಂಗ್ ಸ್ಟೋರಿ ಮುಂದೆ ಓದಿ...
ದಿನದಿಂದ ದಿನಕ್ಕೆ ಜಯಾಗೆ ಆಪ್ತರಾಗುವ ಶಶಿಕಲಾ
ಜಯಲಲಿತಾ ಸಿಎಂ ಆಗಿದ್ದ ವೇಳೆ, ಅವರ ಮೇಲಿನ ತೋರಿಕೆಯ ಪ್ರೀತಿ, ಕಾಳಜಿಯಿಂದಾಗಿ ದಿನದಿಂದ ದಿನಕ್ಕೆ ಜಯಾಗೆ ಆಪ್ತರಾಗುವ ಶಶಿಕಲಾ, ಜಯಾ ಸುತ್ತಮುತ್ತ ಮನ್ನಾರ್ ಗುಡಿಯ ತನ್ನ ಆಪ್ತರು, ಸಂಬಂಧಿಕರನ್ನು ನೇಮಿಸುತ್ತಾರೆ. ಜೊತೆಗೆ, ಜಯಾ ಅಧಿಕೃತ ನಿವಾಸವಾದ ಪೊಯೀಸ್ ಗಾರ್ಡನ್ ನಲ್ಲಿ ನಲವತ್ತಕ್ಕೂ ಹೆಚ್ಚು ಮುನ್ನಾರ್ ಗುಡಿ ಗ್ಯಾಂಗ್ ನವರನ್ನು ನೇಮಿಸುತ್ತಾರೆ. ಜಯಾ ರಕ್ಷಣೆ ಮತ್ತು ದೈನಂದಿನ ವ್ಯವಹಾರಗಳಲ್ಲಿ ಕಿಂಚಿತ್ತೂ ಲೋಪ ಬರದಂತೆ, ಅಸಾಧಾರಣ ವೃತ್ತಿಪರತೆ ತೋರಿ ಒಂದೊಂದೇ ಮೆಟ್ಟಲು ಏರುವ ಶಶಿಕಲಾ ಅವರು ಜಯಾಗೆ ಮತ್ತಷ್ಟು ಆಪ್ತರಾಗುತ್ತಾರೆ.
ಪೊಯೀಸ್ ಗಾರ್ಡನ್ (ಜಯಾ ನಿವಾಸ)
ಪೊಯೀಸ್ ಗಾರ್ಡನ್ (ಜಯಾ ನಿವಾಸ) ನಲ್ಲಿ ಶಶಿಕಲಾ ಆಧಿಪತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ, ಸರಕಾರದ ಆಡಳಿತದಲ್ಲೂ ಶಶಿಕಲಾ ಆವರಿಸಿಕೊಂಡು. ಪಕ್ಷದಲ್ಲಿ ನಂಬರ್ 2 ಎನ್ನುವ ಮಟ್ಟಿಗೆ ಪ್ರಭಾವಿಯಾಗಿ ಬೆಳೆಯುತ್ತಾರೆ. ಜೊತೆಗೆ ಮನ್ನಾರ್ ಗುಡಿ ಗ್ಯಾಂಗನ್ನೂ ಆಡಳಿತ ವ್ಯವಸ್ಥೆಯೊಳಗೆ ತರಲು ಶಶಿಕಲಾ ಯಶಸ್ವಿಯಾಗುತ್ತಾರೆ. ಶಶಿಕಲಾ, ಸರಕಾರದ ಎಲ್ಲಾ ಟೆಂಡರುಗಳು ತಾನೇ ಹುಟ್ಟು ಹಾಕಿದ ಮನ್ನಾರ್ ಗುಡಿ ಗ್ಯಾಂಗ್ ಕೈತಪ್ಪದಂತೆ ನೋಡಿಕೊಳ್ಳುತ್ತಾರೆ. ಕೋಟ್ಯಾಂತರ ರೂಪಾಯಿ ಸರಕಾರದ ಪ್ರಾಜೆಕ್ಟುಗಳು ಶಶಿಕಲಾ ಅಣತಿಯಂತೇ ಅನುಮೋದನೆಗೊಳ್ಳುತ್ತವೆ. ಬಹುತೇಕ ಟೆಂಡರುಗಳು ಮನ್ನಾರ್ ಗುಡಿ ಗ್ಯಾಂಗಿನಿಂದ ಬಿಟ್ಟು ಬೇರೆಯವರಿಗೆ ಹೋಗುವುದು ಬಹಳ ಅಪರೂಪ.
ಸುಬ್ರಮಣಿಯನ್ ಸ್ವಾಮಿ
ದಿನದಿಂದ ದಿನಕ್ಕೆ ಹೆಸರಿಗೆ ಜಯಾ, ತೆರೆಯ ಹಿಂದಿನ ಆಡಳಿತಗಾರ್ತಿಯಾಗಿ ಶಶಿಕಲಾ ಮೆರೆಯುತ್ತಾರೆ. ಜೊತೆಗೆ ತನ್ನ ಮುನ್ನಾರ್ ಗುಡಿ ಗ್ಯಾಂಗ್ ಅನ್ನೂ ಬೆಳೆಸುತ್ತಾರೆ. ಸರಕಾರದ ಎಲ್ಲಾ ಪ್ರಾಜೆಕ್ಟುಗಳು ಮತ್ತು ಟೆಂಡರುಗಳು ಒಂದೇ ಗ್ಯಾಂಗಿಗೆ ಹೋಗುತ್ತಿರುವುದನ್ನು ಅರಿತ ಸುಬ್ರಮಣಿಯನ್ ಸ್ವಾಮಿ ತಮಿಳುನಾಡಿನಲ್ಲಿ ಸದ್ಯ ಚಾಲ್ತಿಯಲ್ಲಿರುವುದು 'ಮುನ್ನಾರ್ ಗುಡಿ ಗ್ಯಾಂಗ್ ಮಾಫಿಯಾ' ಎಂದು ಅಡ್ಡ ಹೆಸರಿಟ್ಟಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಶಶಿಕಲಾ ನಟರಾಜನ್ ಪಕ್ಷದಿಂದ ಹೊರಗೆ
ಆ ಸಮಯದಲ್ಲಿ ಕೊಂಚ ಎಚ್ಚೆತ್ತುಕೊಳ್ಳುವ ಜಯಾ, 2011ರಲ್ಲಿ ಪರಮಾಪ್ತೆ ಶಶಿಕಲಾ ನಟರಾಜನ್ ಸೇರಿ ಮನ್ನಾರ್ ಗುಡಿ ಗ್ಯಾಂಗಿನ ಎಲ್ಲರನ್ನೂ ಮನೆಯಿಂದ / ಪಕ್ಷದಿಂದ ಹೊರಗಟ್ಟುತ್ತಾರೆ. ಆದರೆ ನಂತರ ನಡೆದ ವಿದ್ಯಮಾನದಲ್ಲಿ ಶಶಿಕಲಾ ಮತ್ತೆ ಪೊಯೀಸ್ ಗಾರ್ಡನ್ ಕಂಪೌಂಡಿನಲ್ಲಿ ಕಾಣಿಸಿಕೊಳ್ಳುತ್ತಾರೆ, ಜೊತೆಗೆ ಮನ್ನಾರ್ ಗುಡಿ ಗ್ಯಾಂಗನ್ನೂ ಕರೆದುಕೊಂಡು ಬರುತ್ತಾರೆ. ಇದರ ಜೊತೆಗೆ ಜಯಾ ಆರೋಗ್ಯದಲ್ಲೂ ಏರುಪೇರು ಆರಂಭವಾಗಲು ಶುರುವಾಗುತ್ತದೆ.
ಆಯಕಟ್ಟಿನ ಜಾಗದಲ್ಲಿ ಶಶಿಕಲಾ ಗಂಡ ನಟರಾಜನ್
ತಮಿಳುನಾಡಿನ ಆಡಳಿತ ವ್ಯವಸ್ಥೆಯ ಎಲ್ಲಾ ಆಯಕಟ್ಟಿನ ಜಾಗದಲ್ಲಿ ಶಶಿಕಲಾ ಗಂಡ ನಟರಾಜನ್, ಸಹೋದರ ದಿವಾಕರನ್, ಇತರ ಸದಸ್ಯರಾದ ಮಹದೇವನ್, ಡಾ. ವೆಂಕಟೇಶ್ ಸೇರಿದಂತೆ ಪ್ರಮುಖ ಮನ್ನಾರ್ ಗುಡಿ ಗ್ಯಾಂಗಿನವರು ಆಕ್ರಮಿಸುತ್ತಾರೆ. ಜಯಲಲಿತಾ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವೇಳೆ, ಅಲ್ಲಿ ಸುತ್ತ ನಿಂತ ಪ್ರಮುಖ ವ್ಯಕ್ತಿಗಳೆಲ್ಲಾ ಮನ್ನಾರ್ ಗುಡಿ ಗ್ಯಾಂಗಿನವರು ಎನ್ನುವ ಮಾತಿ ಚಾಲ್ತಿಯಲ್ಲಿತ್ತು.
ಜಯಲಲಿತಾ ಸಾವು ಘೋಷಣೆಯಾಗುವ ಮುಂಚೆ
ಜಯಲಲಿತಾ ಸಾವು ಘೋಷಣೆಯಾಗುವ ಮುಂಚಿನ 6 ಗಂಟೆಗಳ ಮುನ್ನ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಶಶಿಕಲಾ ಪರಮಾಪ್ತ ಪಳನಿಸ್ವಾಮಿಯನ್ನು ಸಿಎಂ ಸ್ಥಾನಕ್ಕೆ ಕೂರಿಸುವ ಬಗ್ಗೆ ತೀವ್ರ ಒತ್ತಡ ಹೇರಲಾಗಿತ್ತು ಎನ್ನುವ ಸುದ್ದಿ ಓಡಾಡುತ್ತಿತ್ತು. ಈ ಸಂದರ್ಭದಲ್ಲಿ, ಕೇಂದ್ರ ಸರಕಾರದ ಮಧ್ಯಪ್ರವೇಶ ಮತ್ತು ಇದನ್ನು ವಿರೋಧಿಸಿದರೆ ತಕ್ಕ ಬೆಲೆ ತೆರಬೇಕಾದೀತು ಎನ್ನುವ ಎಚ್ಚರಿಕೆಯ ನಂತರ ಮನ್ನಾರ್ ಗುಡಿ ಗ್ಯಾಂಗಿನ ಸದಸ್ಯರು ಅಪೋಲೋ ಆಸ್ಪತ್ರೆಯಿಂದ ಹೊರ ನಡೆದರು ಎನ್ನುವ ಸುದ್ದಿ ಜಯಾ ಸಾವಿನ ಘೋಷಣೆಯ ಮುನ್ನ ಹರಿದಾಡುತ್ತಿತ್ತು.
ಮನ್ನಾರ್ ಗುಡಿ ಗ್ಯಾಂಗ್ ಮತ್ತೆ ಏಳುವುದು ಖಚಿತ
ಗೂಂಡಾಗಿರಿ, ಅಕ್ರಮ ವ್ಯವಹಾರ, ಮಾಫಿಯಾ ಮುಂತಾದ ಕಾನೂನಿನ ವಿರುದ್ದವಾಗಿರುವ ಎಲ್ಲಾ ಚಟುವಟಿಕೆಗಳಿಗೆ ಪರ್ಯಾಯ ಪದ ಅಂದರೆ ಅದು ' ಮನ್ನಾರ್ ಗುಡಿ ಗ್ಯಾಂಗ್' ಎನ್ನುವ ಮಾತು ತಮಿಳುನಾಡಿನಲ್ಲಿದೆ. ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಅವ್ಯಹಾರ ಆ ಅವಧಿಯಲ್ಲಿ ನಡೆದಿತ್ತು ಎಂದು ಜಯಾ ಸಾವಿನ ವೇಳೆಯಲ್ಲಿ ಕೇಳಿ ಬರುತ್ತಿತ್ತು. ಈಗ, ಶಶಿಕಲಾ ನಟರಾಜನ್ ಜೈಲಿನಿಂದ ಹೊರಬಂದಿದ್ದಾರೆ, ಅಲ್ಲಿ ಚುನಾವಣೆಯ ಸಮಯ ಬೇರೆ. ಈ ಸಮಯವನ್ನು ಹೇಗೆ ಶಶಿಕಲಾ ಬಳಸಿಕೊಳ್ಳಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಂದು ವೇಳೆ, ಮತ್ತೆ ಅವರು ತಮಿಳುನಾಡು ರಾಜಕೀಯದಲ್ಲಿ ಸಬಲರಾದರೆ, ಮನ್ನಾರ್ ಗುಡಿ ಗ್ಯಾಂಗ್ ಮತ್ತೆ ಏಳುವುದು ಖಚಿತ.