ಸಖತ್ ಸುದ್ದಿ: 2027ರವರೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಶಶಿಕಲಾ ನಟರಾಜನ್!?
ಚೆನ್ನೈ, ಫೆಬ್ರವರಿ.08: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ಚೆನ್ನೈನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸಿದ ಶಶಿಕಲಾ ನಟರಾಜನ್ ಜನವರಿ.27ರಂದು ಬಿಡುಗಡೆಯಾಗಿದ್ದು, ನಾಲ್ಕು ದಿನ ಬೆಂಗಳೂರಿನಲ್ಲೇ ತಂಗಿದ್ದರು. ಸೋಮವಾರ ಬೆಂಗಳೂರಿನಿಂದ ಚೆನ್ನೈಗೆ ರಸ್ತೆ ಮಾರ್ಗವಾಗಿ ಶಶಿಕಲಾ ನಟರಾಜನ್ ತೆರಳಿದ್ದು, ಮೊದಲಿಗೆ ಹೊಸೂರಿನ ಜೂಜುವಾಡಿ ಚೆಕ್ ಪೋಸ್ಟ್ ಬಳಿ ಸಾವಿರಾರು ಅಭಿಮಾನಿಗಳು, ಜನಪದಾ ಕಲಾ ತಂಡಗಳು ಜಮಾಯಿಸಿವೆ. ಜೂಜುವಾಡಿ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಚಿನ್ನಮ್ಮನಿಗೆ ಅದ್ಧೂರಿ ಸ್ವಾಗತ ಕೋರಿದರು.
ತವರು ರಾಜ್ಯಕ್ಕೆ ಎಂಟ್ರಿ ಕೊಡುತ್ತಿರುವ ಶಶಿಕಲಾಗೆ ಭರ್ಜರಿ ಸ್ವಾಗತ !
ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಶಶಿಕಲಾ ನಟರಾಜನ್ ವಾಪಸ್ಸಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸಿದೆ. ಪ್ರತಿಸ್ಪರ್ಧಿಗಳನ್ನು ಹಣಿಯಲೆಂದೇ ಭರ್ಜರಿ ಸ್ವಾಗತದ ಮೂಲಕ ಶಕ್ತಿ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳುನಾಡು ರಾಜಕೀಯದಲ್ಲಿ "ಚಿನ್ನಮ್ಮ" ಹೊಸ ಅಲೆ ಸೃಷ್ಟಿಸುವುದಂತೂ ಪಕ್ಕಾ. ಹೀಗಿದ್ದರೂ 2027ರವರೆಗೂ ಶಶಿಕಲಾ ನಟರಾಜನ್ ಅವರು ಚುನಾವಣೆಗಳಿಂದ ದೂರ ಉಳಿದಿರುತ್ತಾರೆ. ಅದ್ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಮತ್ತು ತಮಿಳುನಾಡು ರಾಜಕಾರಣದ ಭವಿಷ್ಯದ ಚಿತ್ರಣ ಇಲ್ಲಿದೆ ನೋಡಿ.
ಉಲ್ಟಾ-ಪಲ್ಟಾ ಆಗುತ್ತದೆಯೇ ಲೆಕ್ಕಾಚಾರ?
ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಶಶಿಕಲಾ ನಟರಾಜನ್ ರಾಜಕೀಯ ತಂತ್ರಗಳನ್ನು ಹೆಣೆದಿದ್ದಾರೆ. ವಿರೋಧಿಗಳನ್ನು ಹಣಿಯುವುದಕ್ಕಾಗಿ ಯೋಜನೆ ಹಾಕಿಕೊಂಡಿದ್ದಾರೆ. ಸಾಕಷ್ಟು ಲೆಕ್ಕಾಚಾರಗಳಿಂದ ರಾಜ್ಯಕ್ಕೆ ಪ್ರವೇಶಿಸಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಅದೇನೇ ಇದ್ದರೂ 2027ರವರೆಗೂ ಸಾರ್ವಜನಿಕ ಚುನಾವಣೆಗಳಲ್ಲಿ ಶಶಿಕಲಾ ನಟರಾಜನ್ ಅವರು ಸ್ಪರ್ಧಿಸುವ ಅವಕಾಶವಿಲ್ಲ.
2027ರವರೆಗೂ ಚುನಾವಣೆಯಿಂದ ಚಿನ್ನಮ್ಮ ದೂರ ದೂರ
ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಯಾವುದೇ ಕಾರಣಕ್ಕೂ 2027ರವರೆಗೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಅನುಮತಿ ಇರುವುದಿಲ್ಲ. ಜನಪ್ರತಿನಿಧಿಗಳ ಕಾಯ್ದೆ 1958ರ 8ನೇ ಸೆಕ್ಷನ್ ಅಡಿಯಲ್ಲಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ ಅಪರಾಧಿಯು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲಾಗುತ್ತದೆ.
ಶಶಿಕಲಾ ಜೈಲುಶಿಕ್ಷೆಗೆ ಕಾರಣವಾದ ಭ್ರಷ್ಟಾಚಾರ
ಆದಾಯ ಮೀರಿ ಆಸ್ತಿ ಗಳಿಕೆ ಮತ್ತು ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್ 13(2)ರ ಅಡಿಯಲ್ಲಿ ಶಶಿಕಲಾ ನಟರಾಜನ್ ಅವರಿಗೆ ನಾಲ್ಕು ವರ್ಷ ಜೈಲುಶಿಕ್ಷೆ ಮತ್ತು 10 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿತ್ತು. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ನಟರಾಜನ್ ಅವರ ಸಂಬಂಧಿ ಇಳವರಸಿ ಮತ್ತು ಸಹೋದರ ಸುಧಾಕರ್ ಜೈಲುವಾಸ ಅನುಭವಿಸಿದ್ದರು. 2017ರ ಫೆಬ್ರವರಿ.14ರಂದು ವಿ.ಕೆ.ಶಶಿಕಲಾರಿಗೆ ಜೈಲುಶಿಕ್ಷೆ ಜೊತೆಗೆ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಇದೇ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರು ಮೊದಲ ಅಪರಾಧಿಯಾಗಿದ್ದರು.
ಶಶಿಕಲಾ ನಟರಾಜನ್ ಚುನಾವಣಾ ಭವಿಷ್ಯ ಹೀಗಿದೆ?
ಜನಪ್ರತಿನಿಧಿ ಕಾಯ್ದೆ 1958ರ ಅಡಿಯಲ್ಲಿ ಜೈಲುಶಿಕ್ಷೆಗೆ ಗುರಿಯಾದವರನ್ನು ಚುನಾವಣೆಗಳಿಂದ ಅನರ್ಹಗೊಳಿಸಲಾಗುತ್ತದೆ. ಜೈಲಿನಿಂದ ಬಿಡುಗಡೆಯಾದ ದಿನಾಂಕದಿಂದ ಮುಂದಿನ ಆರು ವರ್ಷಗಳವರೆಗೂ ಅಂಥ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ಇರುವುದಿಲ್ಲ. ಅಂದರೆ ತಮಿಳುನಾಡಿನಲ್ಲಿ 2021ರ ವಿಧಾನಸಭಾ ಚುನಾವಣೆ, 2024ರ ಲೋಕಸಭಾ ಚುನಾವಣೆ ಮತ್ತು 2026ರ ವಿಧಾನಸಭಾ ಚುನಾವಣೆಗಳಲ್ಲಿ ಶಶಿಕಲಾ ನಟರಾಜನ್ ಸ್ಪರ್ಧಿಸುವುದಕ್ಕೆ ಅನುಮತಿ ಇರುವುದಿಲ್ಲ.