ವಿಲೇಜ್ ಕುಕ್ಕಿಂಗ್ ಚಾನೆಲ್ ತಂಡದೊಂದಿಗೆ ಮಶ್ರೂಮ್ ಬಿರಿಯಾನಿ ಸವಿದ ರಾಹುಲ್ ಗಾಂಧಿ
ಚೆನ್ನೈ, ಜನವರಿ 30: ಇತ್ತೀಚೆಗೆ ತಮಿಳುನಾಡಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳು ಅಡುಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಸ್ಥಳೀಯರೊಂದಿಗೆ ಆಹಾರ ಸವಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮಸ್ಥರ ಮಧ್ಯೆ ಸಾಮಾನ್ಯರಂತೆ ಕುಳಿತು ಅಣಬೆ ಬಿರಿಯಾನಿಯನ್ನು ರಾಹುಲ್ ಗಾಂಧಿ ಚಪ್ಪರಿಸಿದ್ದಾರೆ. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಕಳೆದ ವಾರ ತೆರಳಿದ್ದರು. ಈ ಸಂದರ್ಭದಲ್ಲಿ 'ವಿಲೇಜ್ ಕುಕ್ಕಿಂಗ್ ಚಾನೆಲ್' ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ನ ಅಡುಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ 14 ನಿಮಿಷಗಳ ವಿಡಿಯೋವನ್ನು ಶುಕ್ರವಾರ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮಶ್ರೂಮ್ ಬಿರಿಯಾನಿ ಸಿದ್ಧಪಡಿಸುವ ಸಂದರ್ಭದಲ್ಲಿ ಅಡುಗೆ ತಯಾರಕರೊಂದಿಗೆ ರಾಹುಲ್ ಗಾಂಧಿ ಸೇರಿಕೊಂಡಿದ್ದಾರೆ.
ರೈತರೇ ಹೋರಾಟದಿಂದ ಒಂದಿಂಚೂ ಹಿಂದೆ ಸರಿಯಬೇಡಿ; ರೈತರಿಗೆ ರಾಹುಲ್ ಸಾಥ್
ನೀಲಿ ಟಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ತೊಟ್ಟು ಬಂದ ರಾಹುಲ್ ಗಾಂಧಿ, ಎಲ್ಲ ಅಡುಗೆ ತಯಾರಕರಿಗೆ ಕೈ ಮುಗಿದು 'ವಣಕ್ಕಂ' ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಅವರ ಜತೆ ಕರೂರು ಕ್ಷೇತ್ರದ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಹಾಜರಿದ್ದರು. ಮುಂದೆ ಓದಿ.
ರಾಯ್ತ ಸಿದ್ಧಪಡಿಸಿದ ರಾಹುಲ್
ರಾಯ್ತಕ್ಕೆ ಪದಾರ್ಥಗಳನ್ನು ಸೇರಿಸುವ ಕೆಲಸದಲ್ಲಿ ರಾಹುಲ್ ಗಾಂಧಿ ಸಹಾಯ ಮಾಡಿದರು. ಜತೆಗೆ ವೆಂಗಾಯಮ್ (ಈರುಳ್ಳಿ), ತಯಿರು (ಮೊಸರು), ಕಲ್ ಉಪ್ಪು (ಹರಳು ಉಪ್ಪು) ಮುಂತಾದ ತಮಿಳು ಹೆಸರುಗಳನ್ನು ಕೂಡ ಉಚ್ಚರಿಸಿದರು. ಬಳಿಕ ವೀಕ್ಷಕರಿಗೆ ಕೇಳುವಂತೆ ಅವುಗಳನ್ನು ಜೋರಾಗಿ ಕೂಗಿ ಹೇಳಿದರು. ಬಿರಿಯಾನಿಗೆ ರಾಯ್ತ ಸಿದ್ಧಪಡಿಸಿ ಅದರ ರುಚಿ ನೋಡಿ ಸಂಭ್ರಮಿಸಿದರು.
ವಿದೇಶಕ್ಕೆ ಹೋಗಲು ನೆರವು
ಚಾಪೆ ಮೇಲೆ ಕುಳಿತು ಚಾನೆಲ್ ತಂಡದೊಂದಿಗೆ ಹರಟಿದರು. ಅಡುಗೆ ಮಾಡಲು ವಿದೇಶಕ್ಕೆ ಹೋಗಬೇಕೆಂದು ಬಯಕೆ ವ್ಯಕ್ತಪಡಿಸಿದ ಬಾಣಸಿಗರೊಬ್ಬರಿಗೆ, ಅಮೆರಿಕದಲ್ಲಿರುವ ತಮ್ಮ ಸ್ನೇಹಿತಸ್ಯಾಮ್ ಪಿತ್ರೊಡಾ ಅವರಿಗೆ ಹೇಳಿ ಅಲ್ಲಿಗೆ ಹೋಗಿ ಅಡುಗೆ ಮಾಡಲು ಬೇಕಾದರೆ ವ್ಯವಸ್ಥೆ ಮಾಡಿಕೊಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದರು.
ಈಗಲಾದರೂ ಕೃಷಿ ವಿರೋಧಿ ಕಾಯ್ದೆ ವಾಪಸ್ ತೆಗೆದುಕೊಳ್ಳಿ: ರಾಹುಲ್ ಗಾಂಧಿ ಆಗ್ರಹ
ಹಬ್ಬದೂಟಕ್ಕೆ ನಾನೂ ಬರುತ್ತೇನೆ
ಭಾರತದ ಇತರೆ ರಾಜ್ಯಗಳಿಗೂ ಪ್ರವಾಸ ಕೈಗೊಂಡು ಅಡುಗೆ ಮಾಡುವ ಮೂಲಕ ಹೊಸ ಅವಕಾಶಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಹುಲ್ ಗಾಂಧಿ ಈಗಲೂ ತಮ್ಮೊಂದಿಗೆ ಇದ್ದಾರೆ ಎಂದು ನಂಬಲು ಆಗುತ್ತಿಲ್ಲ ಎಂದು ಹೇಳಿದ ಬಾಣಸಿಗರು, ತಮ್ಮ ಚಂದಾದಾರರೆಲ್ಲರಿಗೂ ಒಂದು ದಿನ ಹಬ್ಬದೂಟ ಹಾಕಿಸುವ ಬಯಕೆ ವ್ಯಕ್ತಪಡಿಸಿದರು. 'ನೀವು ಆಯೋಜಿಸಿದಾಗ ನಾನೂ ಬರುತ್ತೇನೆ' ಎಂದು ರಾಹುಲ್ ತಿಳಿಸಿದರು.
ಮುಂದಿನ ಸಲ ನಾನೂ ಅಡುಗೆ ಮಾಡಬೇಕು
ಬಾಳೆ ಎಲೆಯಲ್ಲಿ ಬಡಿಸಿದ ಬಿಸಿಬಿಸಿ ಮಶ್ರೂಮ್ ಬಿರಿಯಾನಿಯನ್ನು ತಿಂದು ರಾಹುಲ್, ಅದರ ರುಚಿ 'ನಲ್ಲ ಇರುಕು' (ಚೆನ್ನಾಗಿದೆ) ಎಂದು ತಮಿಳಿನಲ್ಲಿ ಶ್ಲಾಘಿಸಿದರು. ಊಟ ಮುಗಿಸಿ ಹೊರಡುವಾಗ ಮಾತನಾಡಿದ ರಾಹುಲ್, 'ಇದು ಬಹಳ ಚೆನ್ನಾಗಿತ್ತು. ಮುಂದಿನ ಸಲ ನಾನು ಬರುವಾಗ ನನಗೂ ಅಡುಗೆ ಮಾಡಲು ಪ್ರಯತ್ನಿಸಲು ಬಿಡಬೇಕು' ಎಂದರು. ಹಾಗೆಯೇ ಅಮೆರಿಕದಲ್ಲಿರುವ ತನ್ನ ಸ್ನೇಹಿತನೊಂದಿಗೆ ತಂಡವು ಸಂಪರ್ಕದಲ್ಲಿರುವಂತೆ ಮಾಡುವುದಾಗಿ ಭರವಸೆ ನೀಡಿದರು.
ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ನನ್ನ ಪಕ್ಷ ಕಾಪಾಡುತ್ತದೆ; ರಾಹುಲ್ ಗಾಂಧಿ