ಪನ್ನೀರ್ v/s ಶಶಿಕಲಾ: ಶುಕ್ರವಾರದ ಪ್ರಮುುಖ 5 ಬೆಳವಣಿಗೆಗಳು
ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಗ್ಗೆ ಕೇಂದ್ರ ಸರ್ಕಾರದ ತೀರ್ಮಾನಕ್ಕಾಗಿ ದಿನಗಣನೆ ಶುರುವಾಗಿದೆ. ಇದರ ನಡುವೆಯೇ, ಎಐಡಿಎಂಕೆ ಪಕ್ಷದಲ್ಲಿ ಶುಕ್ರವಾರ ರಾಜಕೀಯ ಚಟುವಟಿಕೆಗಳು ಜೋರಾಗಿಯೇ ನಡೆದಿವೆ.
ಕಳೆದೆರಡು ವಾರಗಳಿಂದ ಗರಿಗೆದರಿರುವ ತಮಿಳುನಾಡು ರಾಜಕೀಯ ಈಗ ಕುತೂಹಲ ಘಟ್ಟದಲ್ಲಿ ಬಂದು ನಿಂತಿದೆ. ಸರ್ಕಾರ ರಚನೆಯ ಚೆಂಡು ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಐಡಿಎಂಕೆ) ಪಕ್ಷದ ಕಚೇರಿಯನ್ನೂ ದಾಟಿ, ರಾಜಭವನದಲ್ಲೂ ಅಡ್ಡಾಡಿ, ಈಗ ಕೇಂದ್ರ ಸರ್ಕಾರ ಅಂಗಳದಲ್ಲಿ ಬಂದು ನಿಂತಿದೆ.
ಅಲ್ಲಿಂದ ಯಾರ ಪಾಲಿಗೆ ಸರ್ಕಾರ ರಚನೆಯ ವರ ಒಲಿಯುವುದೋ ಎಂಬುದನ್ನು ಕಾದು ನೋಡಬೇಕಿದೆ. ಆದರಿತ್ತ, ತಮಿಳುನಾಡಿನಲ್ಲಿ ರಾಜಕೀಯ ಮೇಲಾಟ ಮತ್ತೆ ತಾರಕಕ್ಕೇರಿದೆ.[ಕೇಂದ್ರಕ್ಕೆ ವರದಿ ಸಲ್ಲಿಸಿದ ತಮಿಳುನಾಡು ಗವರ್ನರ್ ವಿದ್ಯಾಸಾಗರ್]
ತಮ್ಮ ಬಣದಿಂದ ಪನ್ನೀರ್ ಸೆಲ್ವಂ ಬಣಕ್ಕೆ ಗುರುವಾರವಷ್ಟೇ ಜಿಗಿದಿದ್ದ ಇ. ಮಧುಸೂಧನ್ ಅವರನ್ನು ಪಕ್ಷದಿಂದ ಶಶಿಕಲಾ ಅವರು ಅಮಾನತು ಮಾಡಿ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಅತ್ತ ರಾಜ್ಯಪಾಲರು, ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ನಡುವೆ ಸರ್ಕಾರ ರಚಿಸುವ ಬಗ್ಗೆ ತೀವ್ರ ಪೈಪೋಟಿಯಿರುವುದರಿಂದ ಇಬ್ಬರಿಗೂ ಒಮ್ಮೆಲೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.[ಹಠಾತ್ ತಿರುವು: ಚಿನ್ನಮ್ಮ ವಿರುದ್ಧ ತಿರುಗಿಬಿದ್ದ 35 ಶಾಸಕರು!]
ಈ ಎಲ್ಲಾ ಬೆಳವಣಿಗೆಗಳಲ್ಲಿ, ಆಡಳಿತಾರೂಢ ಎಐಡಿಎಂಕೆ ಪಕ್ಷದಲ್ಲಿ ಶುಕ್ರವಾರದ ರಾಜಕೀಯ ಚಿತ್ರ ಸಂಪುಟ ಇಲ್ಲಿದೆ.
ಬೆಂಬಲಿಗರ ಅಭಿಮಾನ
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಅವರಿಗೇ ಸರ್ಕಾರ ರಚಿಸಲು ರಾಜ್ಯಪಾಲರು ಮೊದಲ ಆಮಂತ್ರಣ ನೀಡುವರೆನ್ನುವ ವದಂತಿಗಳು ಜೋರಾಗಿಯೇ ಹಬ್ಬಿರುವುದರಿಂದ ಪನ್ನೀರ್ ಅವರ ಮನೆಗೆ ಆಗಮಿಸುವ ಅವರ ಬೆಂಬಲಿಗರ ಸಂಖ್ಯೆಯಲ್ಲಿ ಹೆಚ್ಚಾಗಿದೆ.
ಧುರೀಣರ ಸಭೆ
ಚೆನ್ನೈನಲ್ಲಿರುವ ಪನ್ನೀರ್ ಸೆಲ್ವಂ ಅವರ ಮನೆಗೆ ಆಗಮಿಸಿದ ಎಐಡಿಎಂಕೆ ಪಕ್ಷದ ಹಿರಿಯ ನಾಯಕರು ಶುಕ್ರವಾರ ಸುದೀರ್ಘವಾದ ಮಾತುಕತೆ ನಡೆಸಿದರು. ಈ ವೇಳೆ ಹಿರಿಯ ನಾಯಕ ಇ. ಮಧುಸೂಧನ್ ಅವರೂ ಹಾಜರಿದ್ದರು.
ಸ್ನೇಹದ ನೆನಪಿನಲ್ಲಿ
ರಾಜ್ಯಪಾಲರನ್ನು ಗುರುವಾರ ಸಂಜೆ ಭೇಟಿ ಮಾಡುವ ಮುನ್ನ ಶಶಿಕಲಾ ಅವರು ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸಮಾಧಿ ಬಳಿ ಪ್ರಾರ್ಥನೆ ಸಲ್ಲಿಸಿದ್ದು ಹೀಗೆ.
ಕಣ್ಣೀರ ಹನಿಯಾಗಿ
ಪ್ರೀತಿಯ ಸ್ನೇಹಿತೆಯನ್ನು ನೆನೆದು ಕಣ್ಣೀರಿಟ್ಟ ಶಶಿಕಲಾ. ಮರೀನಾ ಬೀಚ್ ನಲ್ಲಿ ಜಯಲಲಿತಾ ಅವರ ಸಮಾಧಿಯ ಮುಂದೆ ಚಿನ್ನಮ್ಮ ಭಾವುಕರಾದರು.
ರಾಜಕೀಯ ಬೇಡದವರ ಲೋಕ
ರಾಜಧಾನಿ ಚೆನ್ನೈನಲ್ಲಿ ಅದೇನೇ ರಾಜಕೀಯ ಮೇಲಾಟಗಳು ನಡೆದು ಇಡೀ ಭಾರತವೇ ಇತ್ತ ಮುಖ ಮಾಡಿ ಕುತೂಹಲದಿಂದ ನೋಡುವಂತಾಗಿದ್ದರೂ, ತಮಿಳುನಾಡಿನ ಕೆಲವೆಡೆ ಇದ್ಯಾವುದೂ ಬೇಕಿಲ್ಲ ಎಂಬಂತೆ ಜನರು ತಮ್ಮ ನಿತ್ಯ ಜೀವನದಲ್ಲಿ ತಲ್ಲೀನರಾಗಿದ್ದರು. ಮಧುರೈನಲ್ಲಿ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಕ್ರೀಡಾಗೆ ನೂರಾರು ಸ್ಪರ್ಧಿಗಳು ಸಾಕ್ಷಿಯಾದರು.