ಬ್ಯಾಂಕುಗಳಿಗೆ ಪನ್ನೀರ್ ಸೆಲ್ವಂ ಬರೆದ ಪತ್ರದಲ್ಲೇನಿದೆ?
ಪಕ್ಷದ ಆರ್ಥಿಕ ಸಂಪತ್ತು ತಮ್ಮ ವಿರೋಧಿ ಬಣ ಬಳಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾಂಕುಗಳಿಗೆ ಪತ್ರ ಬರೆದ ಸೆಲ್ವಂ.
ಚೆನ್ನೈ, ಫೆಬ್ರವರಿ 8: ತಮಿಳುನಾಡು ಮುಖ್ಯಮಂತ್ರಿ ಸ್ಥಾನವೇರಲು ಕಾತುರದಿಂದಿರುವ ಎಐಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಮತ್ತೊಬ್ಬ ನಾಯಕ ಪನ್ನೀರ್ ಸೆಲ್ವಂ, ಪಕ್ಷದೊಳಗೆ ಇತ್ತೀಚೆಗೆ ಆಗಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಅದರಂತೆ, ಪನೀರ್ ಸೆಲ್ವಂ ಅವರು, ತಮ್ಮ ಪಕ್ಷದ ಖಾತೆಗಳಿರುವ ಎರಡು ಬ್ಯಾಂಕುಗಳಿಗೆ ಪತ್ರ ಬರೆದಿದ್ದು, ಪಕ್ಷದ ನಿಯಮಗಳ ಪ್ರಕಾರ, ತಾವಿನ್ನೂ ಪಕ್ಷದ ಖಜಾಂಚಿಯಾಗಿ ಮುಂದುವರಿದಿದ್ದು, ಪಕ್ಷದ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳನ್ನು ತಮ್ಮ ಆಣತಿಯ ಮೇಲೆಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಸಂವಿಧಾನದ ಬೈ ಲಾ 20ರ ಸಬ್ ಕ್ಲಾಸ್ 5 ರ ಪ್ರಕಾರ, ನಾನಿನ್ನೂ ಪಕ್ಷದ ಖಜಾಂಚಿಯಾಗಿಯೇ ಮುಂದುವರಿದಿದ್ದೇನೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಆರ್ಥಿಕ ವ್ಯವಹಾರಗಳೂ ನನ್ನ ಮೂಲಕವೇ ನಡೆಯಬೇಕು. ನನ್ನನ್ನು ಹೊರತುಪಡಿಸಿ ಮತ್ಯಾರೂ ಪಕ್ಷದ ಹೆಸರಿನಲ್ಲಿ ಆರ್ಥಿಕ ವ್ಯವಹಾರ ಮಾಡುವುದಾಗಲೀ, ಪಕ್ಷದ ಹಣವನ್ನು ಉಪಯೋಗಿಸಿಕೊಳ್ಳುವುದಕ್ಕಾಗಲಿ ಅವಕಾಶ ಕೊಡಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.