ಡಿಎಂಕೆ ಜತೆ ಕೈಜೋಡಿಸಿ, ಪನ್ನೀರ್ ಸೆಲ್ವರಿಂದ ದ್ರೋಹ: ಶಶಿಕಲಾ
ಚೆನ್ನೈ, ಫೆಬ್ರವರಿ 8: ಸರಕಾರದ ನೇತೃತ್ವ ವಹಿಸುವ ತಮ್ಮ ಯೋಜನೆಯನ್ನು ಬೆಂಬಲಿಸದ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ದ್ರೋಹ ಎಸಗುತ್ತಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಆರೋಪಿಸಿದ್ದಾರೆ. ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಪನ್ನೀರ್ ಸೆಲ್ವಂ ಡಿಎಂಕೆ ಜತೆಗೆ ಕೈ ಜೋಡಿಸಿ ಇಂಥ ದುಷ್ಟ ಕೆಲಸ ಮಾಡುತ್ತಿದ್ದಾರೆ. ಅಮ್ಮನ ಜತೆಗೆ ಇದ್ದ ನಾನು ಮೂವತ್ಮೂರು ವರ್ಷದಲ್ಲಿ ಇಂಥ ಹಲವು ದ್ರೋಹಗಳನ್ನು ಎದುರಿಸಿದ್ದೇನೆ. ಮೂವತ್ಮೂರು ವರ್ಷಗಳ ಕಾಲ ಅಮ್ಮ ನನ್ನ ದೇವರು. ಆ ಅವಧಿಯಲ್ಲಿ ಹಲವು ಏಳುಬೀಳುಗಳನ್ನು ನೋಡಿದ್ದೇನೆ, ದುರಂತಗಳನ್ನು ಎದುರಿಸಿದ್ದೇನೆ ಎಂದಿದ್ದಾರೆ.[ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]
ಅವೆಲ್ಲವನ್ನೂ ದಾಟಿಬಂದಾಗಿದೆ. ಇದನ್ನೂ ದಾಟುತ್ತೇವೆ. ನಾನು ಅಮ್ಮನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಶಶಿಕಲಾ ಹೇಳಿದ್ದಾರೆ. "ಮುಖ್ಯಮಂತ್ರಿ ಹುದ್ದೆಗೆ ಬಲವಂತವಾಗಿ ಶಶಿಕಲಾ ನನ್ನಿಂದ ರಾಜೀನಾಮೆ ಕೊಡಿಸಿದರು" ಎಂದು ಮಂಗಳವಾರ ಪನ್ನೀರ್ ಸೆಲ್ವಂ ಆರೋಪಿಸಿದ್ದರು. ಅದಕ್ಕೆ ಶಶಿಕಲಾ ಪ್ರತಿಕ್ರಿಯಿಸಿದ್ದಾರೆ.[ಬಿರುಗಾಳಿಗೆ ಸಿಲುಕಿರುವ ತಮಿಳ್ನಾಡಲ್ಲಿ ಹೋಟೆಲ್ ರಾಜಕೀಯ]
ಕಳೆದ ಎರಡು ತಿಂಗಳಿಂದ ಪನ್ನೀರ್ ಸೆಲ್ವಂ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುತ್ತಿದ್ದಾರೆ. ನಾನು ಅದೆಲ್ಲವನ್ನೂ ನಿರ್ಲಕ್ಷಿಸುತ್ತಾ ಬಂದೆ. "ಇಷ್ಟು ದಿನ ಈ ನಿರ್ಧಾರಕ್ಕೆ ಯಾಕೆ ಸುಮ್ಮನಿದ್ದರು? ಅವರಿಗೆ ಡಿಎಂಕೆ ಬೆಂಬಲ ಸಿಕ್ಕಿದೆಯಾ?" ಎಂದು ಪ್ರಶ್ನಿಸಿದರು. ನಾನು ಬಲವಂತವಾಗಿ ರಾಜೀನಾಮೆ ಪಡೆದೆ ಅನ್ನೋದನ್ನು ಪಕ್ಷದ ಕಾರ್ಯಕರ್ತರೂ ನಂಬಲ್ಲ, ಜನರೂ ನಂಬಲ್ಲ ಎಂದಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ನಾನು ಅವರನ್ನು ಕ್ಷಮಿಸಬಹುದು. ಆದರೆ ನಿನ್ನೆ (ಮಂಗಳವಾರ) ಅವರ ಎಲ್ಲ ಮಿತಿಗಳನ್ನು ಮೀರಿದ್ದಾರೆ. ಯಾರು ನಮ್ಮ ಪಕ್ಷವನ್ನು ಒಡೆಯಲು ಯತ್ನಿಸುತ್ತಾರೋ ಅವರು ಯಶಸ್ವಿಯಾಗುವುದಿಲ್ಲ. ಎಐಎಡಿಎಂಕೆ ಪಕ್ಷ ಒಡೆಯುವುದಿಲ್ಲ ಎಂದು ಶಶಿಕಲಾ ನಟರಾಜನ್ ಹೇಳಿದ್ದಾರೆ.